ಕಾರ್ಕಳ : ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ” ಕ್ರಿಯೇಟಿವ್ ಪುಸ್ತಕ ಧಾರೆ – 2025″ ಮುಂಗಾರಿನ ಹನಿಗಳ ಜೊತೆಗೆ ಪುಟಗಳ ಪಯಣ… ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಪುಸ್ತಕಮನೆ ಪ್ರಕಾಶನದ ವತಿಯಿಂದ 22 ಕೃತಿಗಳ ಅನಾವರಣ ಕರ್ಯಕ್ರಮ ದಿನಾಂಕ 13 ಆಗಸ್ಟ್ 2025ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿನ್ನಪ್ಪ ಗೌಡ ಮಾತನಾಡಿ “ಪುಸ್ತಕವೆಂದರೆ ಕೇವಲ ಅಕ್ಷರಗಳ ಸಂಗ್ರಹವಲ್ಲ. ಅದು ಕಾಲ, ಸಮಾಜ ಮತ್ತು ಮಾನವನ ಭಾವನೆಗಳ ಪ್ರತಿಬಿಂಬ. ಇಂತಹ ಕಾರ್ಯಕ್ರಮಗಳು ಓದುವ ಅಭ್ಯಾಸವನ್ನು ಪುನರುಜ್ಜೀವನಗೊಳಿಸುತ್ತವೆ” ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ಸಾಹಿತಿಗಳು ಹಾಗೂ ಚಿತ್ರ ನಿರ್ದೇಶಕರಾದ ಡಾ. ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ “ಪುಸ್ತಕವೆಂದರೆ ಕೇವಲ ಹಾಳೆಗಳ ಗುಚ್ಛವಲ್ಲ. ಅದು ಕಾಲದ ಸ್ಮರಣೆ, ಸಮಾಜದ ಕನ್ನಡಿ ಮತ್ತು ಮನಸ್ಸಿನ ಆಳದಿಂದ ಹೊರ ಹೊಮ್ಮುವ ಭಾವಧಾರೆ ಮತ್ತು ಮಾನವನ ಮನಸ್ಸಿನ ನಕ್ಷೆಯೇ ಆಗಿದೆ ” ಎಂದರು.
ಕಾರ್ಯಕ್ರಮದಲ್ಲಿ ಸರ್ವರನ್ನು ಸ್ವಾಗತಿಸಿದ ಸಂಸ್ಥೆಯ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್. ಮಾತನಾಡಿ “ಲೇಖಕರು ತಮ್ಮ ವಿಚಾರಧಾರೆಯ ನದಿಗಳನ್ನು ಕೃತಿಗಳಲ್ಲಿ ಹರಿಸಿದ್ದಾರೆ. ಓದುಗರು ಅದರ ತೀರದಲ್ಲಿ ನಿಂತು ಚಿಂತನೆಗಳ ನೀರನ್ನು ಕುಡಿಯುವಂತಿದೆ. ಇಂತಹ ಸಾಹಿತ್ಯವು ಕಾಲವನ್ನು ಮೀರಿ ನೆನಪಿನ ಮಡಿಲಿನಲ್ಲಿ ಉಳಿಯುತ್ತವೆ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಹಿತಿಗಳು ಮತ್ತು ಕ. ಸಾ. ಪ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಮಾತನಾಡಿ “ಇಂದಿನ ಯಾಂತ್ರಿಕ ಜೀವನದಲ್ಲಿ ಓದಿನ ಮಹತ್ವವನ್ನು ಮರೆಯುತ್ತಿರುವಾಗ, ಇಂತಹ ಪುಸ್ತಕ ಬಿಡುಗಡೆಗಳು ಸಾಹಿತ್ಯ ಪ್ರೇಮಿಗಳಿಗೆ ಹೊಸ ಚೈತನ್ಯ ತುಂಬುತ್ತವೆ” ಎಂದರು.
ಇನ್ನೋರ್ವ ಮುಖ್ಯ ಅತಿಥಿ, ಮಹಾಕಾವ್ಯಗಳ ಲೇಖಕರಾದ ಡಾ. ಪ್ರದೀಪ ಕುಮಾರ ಹೆಬ್ರಿ, ಮಾತನಾಡಿ “ಪುಸ್ತಕದ ಜೀವನ ಅದರ ಓದುಗರ ಕೈಯಲ್ಲಿ ಪ್ರಾರಂಭವಾಗುತ್ತದೆ. ಉಳಿಸಿ ಬೆಳೆಸಬೇಕಾದದ್ದು ಸಹೃದಯರ ಕರ್ತವ್ಯ” ಎಂದು ಹೇಳಿದರು.” ಕಥೆಗಳ ಮೂಲಕ ಸಭಾಸದರ ಗಮನ ಸೆಳೆದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಮಾತನಾಡಿ “ಸಾಹಿತ್ಯವು ಜನರ ಬದುಕಿಗೆ ಕನ್ನಡಿಯಂತೆ. ಓದುಗರು ಪುಸ್ತಕದಿಂದ ಕಥೆಗಳನ್ನು ಮಾತ್ರವಲ್ಲ, ಬದುಕಿನ ಮೌಲ್ಯಗಳನ್ನು, ಸಂಬಂಧಗಳ ಅರ್ಥವನ್ನು, ಮನುಷ್ಯತ್ವದ ಸಾರವನ್ನು ಪಡೆದುಕೊಳ್ಳುತ್ತಾರೆ” ಎಂದರು.
ಕ್ರಿಯೇಟಿವ್ ಪುಸ್ತಕ ಮನೆಯ ವತಿಯಿಂದ ಡಾ. ನಾಗತಿಹಳ್ಳಿ, ಡಾ.ಕೆ.ಚಿನ್ನಪ್ಪ ಗೌಡ ಹಾಗೂ 22 ಕೃತಿಗಳ ಕರ್ತೃಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಚಂದ್ರಕಾಂತ ಪೋಕಳೆಯವರ “ಯಾತ್ರೆ”, ಎಲ್. ಪಿ ಕುಲಕರ್ಣಿಯವರ “ವಿಜ್ಞಾನ ಕೌತುಕಗಳ ಮಹಾಯಾನ”, ಪೌಝಿಯಾ ಸಲೀಂಯವರ “ಹರ್ಷ ರಾಗ”, ಪದ್ಮಲತಾ ಮೋಹನ್ ರವರ “ಹಿತಶತ್ರು”, ಸದಾಶಿವ ಸೊರಟೂರರ “ಪುಟ್ಟ ದೇವರ ಕಣ್ಣೀರು”, ಕುಮಾರಸ್ವಾಮಿ ತೆಕ್ಕುಂಜಯವರ “ಬದುಕು ಮಾಯೆಯ ಮಾಟ”, ನಾಗೇಶ್ ಜೆ. ನಾಯಕ ರವರ “ಕಾವ್ಯ ಧ್ಯಾನ”, ಪ್ರಜ್ವಲಾ ಶೆಣೈ ರವರ “ನಿನಗೆ ನೀನೇ ಬೆಳಕು”, ಮನು ಗುರುಸ್ವಾಮಿಯವರ “ನಿನ್ನ ಇಚ್ಛೆಯಂತೆ ನಡೆವೆ”, ಸಂತೆಬೆನ್ನೂರು ಫೈಜ್ನಟರಾಜ್ ರವರ “ಕಣ್ಣ ಬಾಗಿಲಿಗೆ ಬಂದ ನೀರು”, ಎಂ. ಮನೋಹರ ಪೈಯವರ “ಸ್ವಾತಿ ಬೊಂಬಾಟ್”, ಮಂಜುನಾಥ್ ಕುಂಬಾರ್ ಇವರ “ಗ್ಯಾಂಗ್ ಸ್ಟರ್ ಮತ್ತು ಅವಳು”, ಸಂದೇಶ್ ಎಚ್. ನಾಯ್ಕ್ ಇವರ “ಇದೊಳ್ಳೆ ವರಸೆ”, ಡಾ. ಪ್ರದೀಪ ಕುಮಾರ ಹೆಬ್ರಿ ಇವರ “ಮಾಂಡವ್ಯ ದೀಪ”, ಮತ್ತು “ಬೆಳ್ದೀಪ”, ಡಾ. ಸುಮತಿ ಪಿ. ಇವರ ನಿಲುಕದ ನಕ್ಷತ್ರ, ಸಿಹಿಜೀವಿ ಸಿ. ಜಿ. ವೆಂಕಟೇಶ್ವರ ಇವರ ಸಿಹಿಜೀವಿ ಕಂಡ ಅಂಡಮಾನ್, ಶುಭಲಕ್ಷ್ಮೀ ಆರ್. ನಾಯಕ್ ಇವರ “ಅನುಭವ ದೀಪ್ತಿ”, ಶ್ಯಾಮಲಾ ಗೋಪಿನಾಥ್ ಇವರ “ಈ ಪಯಣದಲ್ಲಿ”, ರಾಜೇಂದ್ರ ಭಟ್. ಕೆ. ಇವರ “ಸಂಗೀತ ಶರಧಿ”, ಅಕ್ಷತಾ ರಾಜ್ ಪೆರ್ಲ ಇವರ “ಅಸಂಗತ” ಹಾಗೂ ಎಲ್. ಪಿ. ಕುಲಕರ್ಣಿ ಇವರ “ವಿಜ್ಞಾನ ವಿಶಾರದರು” ಕೃತಿಗಳು ಲೋಕರ್ಪಣೆಗೊಂಡವು.
ಅಪರಾಹ್ನ ಘಂಟೆ 2.30ರಿಂದ ನಾಗತಿಹಳ್ಳಿ ಚಂದ್ರಶೇಖರ ಅವರ ಚಲನಚಿತ್ರಗಳಲ್ಲಿ ಬಳಸಿರುವ ಭಾವಗೀತೆಗಳ ಗಾಯನದ ಜೊತೆಗೆ ಸಂವಾದ ಕಾರ್ಯಕ್ರಮ ನಡೆಯಿತು. ಖ್ಯಾತ ನಿರೂಪಕರಾದ ಅವಿನಾಶ್ ಕಾಮತ್ ಸಂವಾದ ಕರ್ಯಕ್ರಮ ನಿರ್ವಹಿಸಿಕೊಟ್ಟರು. ಜೀ ಸರಿಗಮಪ ಮತ್ತು ಗೋಲ್ಡನ್ ಬುಕ್ ಆಫ್ ಆಫ್ ರೆಕಾರ್ಡ್ ಖ್ಯಾತಿಯ ಶ್ರೀ ಯಶವಂತ್ ಎಂ. ಜಿ. ಇವರಿಂದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.
ಸಹ ಸಂಸ್ಥಾಪಕರಾದ ಅಮೃತ್ ರೈ, ಗಣನಾಥ ಶೆಟ್ಟಿ ಬಿ., ಗಣಪತಿ ಭಟ್ ಕೆ. ಎಸ್., ವಿಮಲ್ ರಾಜ್. ಜಿ., ಆರ್ಯ ಎಂ. ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಜೀವಶಾಸ್ತ್ರ ವಿಭಾಗ ಮುಖ್ಯಸ್ಥರಾದ ಲೋಹಿತ್ ಎಸ್. ಕೆ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.