ಸಾಲಿಗ್ರಾಮ : ಗೆಳೆಯರ ಬಳಗ (ರಿ.) ಕಾರ್ಕಡ ಸಾಲಿಗ್ರಾಮ ಇವರು ಕೀರ್ತಿಶೇಷ ಡಾ. ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬದ ಪ್ರಯುಕ್ತ, ಪ್ರತಿ ವರ್ಷವೂ ನೀಡುತ್ತಾ ಬಂದಿರುವ ‘ಗೆಳೆಯರ ಬಳಗ ಕಾರಂತ ಪುರಸ್ಕಾರ – 2025’ ಪ್ರಶಸ್ತಿಗೆ ಈ ನಾಡಿನ ಹಿರಿಯ ಸಾಹಿತಿ, ಕಾರಂತರ ಹಿತೈಷಿ, ಸಮಾಜ ಸೇವಕಿ, ಖ್ಯಾತಲೇಖಕಿ, ಸಂಘಟಕಿ, ಕವಿ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಚಿಂತಕಿ, ಎಚ್. ಶಕುಂತಳಾ ಭಟ್ ಆಯ್ಕೆಯಾಗಿದ್ದಾರೆ.
ಕಥೆಗಾರರಾಗಿ ಕವಿಯಾಗಿ ಇವರ ಸಾಧನೆ ಬೆಲೆಕಟ್ಟಲಾಗದು. ಸುಮಾರು 90 ಪ್ರಕಟವಾದ ಓಟ್ಟು ಗ್ರಂಥಗಳನ್ನು ಬರೆದಿದ್ದಾರೆ. ಕನ್ನಡ ಹಾಗೂ ತುಳು ಭಾಷೆಯಲ್ಲಿ ಇವರು ಸಲ್ಲಿಸಿದ ಸಾಹಿತ್ಯ ಸೇವೆ ಅಪಾರ. ಈ ಹಿಂದೆ ಮಾಲಿನಿ ಮಲ್ಯ, ಎಸ್. ನಾರಾಯಣ ರಾವ್, ಪೇತ್ರಿ ಮಾಧವ ನಾಯಕ್, ಶ್ರೀನಿವಾಸ ಸಾಸ್ತಾನ, ಹಿರಿಯಡ್ಕ ಗೋಪಾಲರಾವ್, ಎಚ್. ಇಬ್ರಾಹಿಂ ಸಾಹೇಬ್, ಪಾಂಡೇಶ್ವರ ಚಂದ್ರಶೇಖರ ಚಡಗ, ಬನ್ನಂಜೆ ಸಂಜೀವ ಸುವರ್ಣ, ವೈದೇಹಿ ಹಾಗೂ ಡಾ. ನಾ. ಮೊಗಸಾಲೆ, ಗೆಳೆಯರ ಬಳಗ ಕಾರಂತ ಪುರಸ್ಕಾರ ಪಡೆದವರಾಗಿದ್ದಾರೆ.
ಈ ಪುರಸ್ಕಾರವು ಗೌರವಧನ ಹಾಗೂ ಸನ್ಮಾನ ಪತ್ರ, ಫಲಪುಷ್ಪ, ಶಾಲು ಇತ್ಯಾದಿಯಿಂದ ಕೂಡಿರುತ್ತದೆ. ಗೆಳೆಯರ ಬಳಗ ಕಾರಂತ ಪುರಸ್ಕಾರ-2025 ಪ್ರದಾನ ಸಮಾರಂಭವು ದಿನಾಂಕ 17 ಅಕ್ಟೋಬರ್ 2025ರ ಶುಕ್ರವಾರ ಸಂಜೆ ಕಾರ್ಕಡ ಗಿರಿಜಾ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಜರಗಲಿದ್ದು, ಗಣ್ಯರ ಉಪಸ್ಥಿತಿಯಲ್ಲಿ ವಿತರಿಸಲಾಗುವುದು ಎಂದು ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ ತಿಳಿಸಿದ್ದಾರೆ.