ಕದ್ರಿ ನೃತ್ಯ ವಿದ್ಯಾನಿಲಯದಲ್ಲಿ ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಸಭೆ
ಮಂಗಳೂರು : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ (ರಿ.) ಇದರ ಸಭೆಯು ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ದಿನಾಂಕ 14 ಸೆಪ್ಟೆಂಬರ್ 2025ರಂದು ಮಂಗಳೂರಿನ ಕದ್ರಿ ನೃತ್ಯ ವಿದ್ಯಾನಿಲಯದಲ್ಲಿ ನಡೆಯಿತು.
“ಭರತನಾಟ್ಯದ ಅಸಲಿಯತ್ತಾನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮೂಲಶೈಲಿಗೆ ಧಕ್ಕೆ ಬಾರದಂತೆ ಉಳಿಸಿ ಬೆಳೆಸಿಕೊಂಡು ಹೋಗುವ ಅಗತ್ಯವನ್ನು ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಒತ್ತಿ ಹೇಳಿದೆ.
ಭರತನಾಟ್ಯದ ಹೆಸರಿನಲ್ಲಿ ಸಾಂಪ್ರದಾಯಿಕ ಶೈಲಿಯನ್ನು ದೂರವಿಟ್ಟು ನಡೆಯುವ ಪ್ರದರ್ಶನಗಳು ಈ ಕಲೆಗೆ ಅವಮಾನವೆಂದು ಪರಿಷತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕಲಾವಿದರು ಭರತನಾಟ್ಯದ ಹೆಸರಿನಲ್ಲಿ ಪ್ರದರ್ಶನ ನೀಡುವಾಗ, ಮೂಲ ಶೈಲಿಗೆ ಧಕ್ಕೆ ಬಾರದಂತೆ ಅಚ್ಚುಕಟ್ಟಾಗಿ ನೃತ್ಯಿಸಬೇಕೆಂದು ಆಗ್ರಹಿಸಿದೆ.
ಶಾಸ್ತ್ರೀಯ ನೃತ್ಯಗಳಲ್ಲಿ ಪ್ರಮುಖವಾದ ಭರತನಾಟ್ಯವು ತನ್ನದೇ ಆದ ಸಾಂಪ್ರದಾಯಿಕ ಚೌಕಟ್ಟನ್ನು ಹೊಂದಿದೆ. ಅದನ್ನು ಗುರುಮುಖೇನ ಶ್ರದ್ದೆಯಿಂದ ಕಲಿತು, ಅಡವುಗಳು, ಅಂಗಶುದ್ಧಿ, ಹಸ್ತ ವಿನ್ಯಾಸ ಮತ್ತು ಅಭಿನಯದಲ್ಲಿ ಶಿಸ್ತು ಪಾಲಿಸುವುದು ಕಡ್ಡಾಯವೆಂದು ಪರಿಷತ್ ತಿಳಿಸಿದೆ. ಇಂತಹ ಶ್ರೀಮಂತ ನೃತ್ಯಕಲೆ ದೇಶದ ಶಾಸ್ತ್ರೀಯ ಪರಂಪರೆಯನ್ನು ಸಾರುವುದರ ಜೊತೆಗೆ ಸಂಸ್ಕೃತಿಯ ಪ್ರತೀಕವೂ ಆಗಿದೆ.
ಭರತನಾಟ್ಯದಲ್ಲಿ ವಿವಿಧ ಶೈಲಿಗಳಿದ್ದರೂ, ಹಿರಿಯರು ಕಾಲಾನುಸಾರ ಮಾಡಿದ ಬದಲಾವಣೆಗಳು ಮೂಲತತ್ತ್ವಕ್ಕೆ ಧಕ್ಕೆ ತರುವುದಿಲ್ಲ. ಈ ಬದಲಾವಣೆಗಳು ಕಲೆ ಬೆಳೆಯಲು ಸಹಕಾರಿಯಾಗಿದೆ. ಆದರೆ ಮೂಲ ತತ್ತ್ವವನ್ನು ಬಿಟ್ಟು ದಾಖಲೆ ಹೆಸರಿನಲ್ಲಿ ಹಲವಾರು ಗಂಟೆಗಳ ಒಟ್ಟಾರೆ ಪ್ರದರ್ಶನ ನೀಡುವುದು ನೃತ್ಯದ ಅಸಲಿಯತನಕ್ಕೆ ಧಕ್ಕೆ ತರುತ್ತದೆ ಎಂದು ಪರಿಷತ್ ಎಚ್ಚರಿಸಿದೆ.
ಭರತನಾಟ್ಯ ನಮ್ಮ ಸಂಸ್ಕೃತಿಯ ಸ್ವರೂಪವಾಗಿರುವುದರಿಂದ, ಅದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಭರತನಾಟ್ಯದ ಕುರಿತು ತಪ್ಪು ಮಾಹಿತಿ ತಲುಪದಂತೆ ಎಚ್ಚರಿಕೆ ವಹಿಸುವುದು ಪರಿಷತ್ನ ಉದ್ದೇಶವಾಗಿದೆ.
.