ಮೂಡುಬಿದಿರೆ : ಹಿರಿಯ ಯಕ್ಷಗಾನ ಕಲಾವಿದ ಹಾಗೂ ಕಾಷ್ಠ ಶಿಲ್ಪಿ ಬೋಳ ದುಗ್ಗಪ್ಪ ಆಚಾರ್ಯ ದಿನಾಂಕ 01 ಅಕ್ಟೋಬರ್ 2025ರ ಬುಧವಾರ ಬೆಳುವಾಯಿಯ ಅಂತಬೆಟ್ಟುವಿನಲ್ಲಿರುವ ಸಂಬಂಧಿಕರ ಮನೆಯಲ್ಲಿ ನಿಧನರಾದರು. ಇವರಿಗೆ 72 ವರ್ಷ ವಯಸ್ಸಾಗಿತ್ತು. ಮೂಲತಃ ಕಾರ್ಕಳ ತಾಲೂಕಿನ ಬೋಳದವರಾದ ಇವರು ಕೆಲ ಸಮಯದಿಂದ ತಮ್ಮ ಸಂಬಂಧಿ, ಪತ್ರಕರ್ತ ಬಿ. ಸೀತಾರಾಮ ಆಚಾರ್ಯ ಅವರ ಮನೆಯಲ್ಲಿ ವಾಸವಾಗಿದ್ದರು.
ಶ್ರೀಯುತರು ಕೇವಲ ಯಕ್ಷಗಾನ ಕಲಾವಿದರಾಗಷ್ಟೇ ಅಲ್ಲದೆ, ಕ್ಲಿಷ್ಟಕರವಾದ ಮರದ ಮೇಲ್ಲಾವಣಿ ಕೆತ್ತನೆಗಳ ಕಾಷ್ಠ ಶಿಲ್ಪಿಯಾಗಿಯೂ ಪ್ರಸಿದ್ಧರಾಗಿದ್ದರು. ಯಕ್ಷಗಾನದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಇವರು, ತಾಳಮದ್ದಲೆಯಲ್ಲಿ ಅರ್ಥಧಾರಿಯಾಗಿಯೂ ಜನಪ್ರಿಯರಾಗಿದ್ದರು.
ಹಲವಾರು ಪ್ರಸಂಗಗಳನ್ನು ರಚಿಸಿರುವ ಇವರು ಯಕ್ಷಗುರುವಾಗಿ ಮುಂಡ್ಕೂರು, ಸಚ್ಚೇರಿಪೇಟೆ, ವಂಜಾರಕಟ್ಟೆ, ಮೂಡುಬಿದಿರೆ ಸೇರಿದಂತೆ ಹಲವೆಡೆ ಅಪಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷ ಶಿಕ್ಷಣವನ್ನು ನೀಡಿದ್ದಾರೆ. ಮುಂಡ್ಕೂರು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ಖಾಯಂ ಕಲಾವಿದರಾಗಿಯೂ ಇವರು ಸೇವೆ ಸಲ್ಲಿಸಿದ್ದರು. ಇವರ ಸೇವೆಗಾಗಿ ಕಿನ್ನಿಗೋಳಿ ಯುಗಪುರುಷ ಸಹಿತ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.