ಮಂಗಳೂರು: ಶರನ್ನವರಾತ್ರಿ ಪ್ರಯುಕ್ತ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ‘ದಸರಾ ಕವಿಗೋಷ್ಠಿ – 2025’ ದಿನಾಂಕ 02 ಅಕ್ಟೋಬರ್ 2025 ರಂದು ನಡೆಯಿತು.
ನವರಸ ರಂಜನೆಯ ಬಹುಭಾಷಾ ಕವಿಮೇಳದ ಅಧ್ಯಕ್ಷತೆ ವಹಿಸಿದ ಕವಿ, ಸಾಹಿತಿ ಮತ್ತು ಮಾಧ್ಯಮ ತಜ್ಞ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ “ದಸರಾ ಕನ್ನಡಿಗರ ನಾಡಹಬ್ಬ. ವಿಜಯನಗರ ಅರಸರ ಕಾಲದಿಂದಲೂ ಅದು ಕೇವಲ ಧಾರ್ಮಿಕ ಆಚರಣೆಯಾಗಿರದೆ ಅದರಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತಿತ್ತು.ಆಧುನಿಕ ಸಮಾಜದ ಸಂಭ್ರಮೋಲ್ಲಾಸ ಏನೇ ಇದ್ದರೂ ಈ ಉತ್ಸವ ನಡೆವಲ್ಲಿ ನಮ್ಮ ಸಾಹಿತ್ಯ- ಸಂಸ್ಕೃತಿಯ ಮೆರುಗು ನೀಡಿ ದಸರಾವನ್ನು ಅರ್ಥಪೂರ್ಣವಾಗಿ ಆಚರಿಸುವ ಅಗತ್ಯವಿದೆ. ನವರಾತ್ರಿ ಧಾರ್ಮಿಕ ಹಬ್ಬ. ಹಬ್ಬಗಳಲ್ಲಿ ರಾಷ್ಟ್ರೀಯ, ನಾಡ ಹಬ್ಬ, ಜಾತಿ-ಧರ್ಮಗಳಿಗೆ ಸಂಬಂಧಿಸಿದವುಗಳಿವೆ. ಹಿಂದಿನ ಕಾಲದಲ್ಲೂ ಹಬ್ಬಗಳಿದ್ದವು. ಆಗ ಮಾಧ್ಯಮಗಳ ಸೌಕರ್ಯ ಈಗಿನಷ್ಟು ಇರಲಿಲ್ಲ. ಇಚ್ಛಾಶಕ್ತಿಯಿಂದ ನೈತಿಕ ನೆಲೆಯಲ್ಲಿ ಆಚರಣೆ ಇತ್ತು. ಹಬ್ಬ ಎನ್ನುವುದು ಮನುಕುಲವನ್ನು ಬೆಸೆಯುವ ಆಚರಣೆಯಾಗಬೇಕು. ಈ ಆಚರಣೆಗಳು ವಿಘಟನೆಯನ್ನು ಮಾಡುವುದಾಗಬಾರದು ಎಂಬ ಮರ್ಮವನ್ನು ನಾವೆಲ್ಲ ತಿಳಿಯಬೇಕು. ಸ್ವರಚಿತ ಕವನ ವಾಚಿಸಿದ ಎಲ್ಲ ಕವಿಗಳೂ ಇದೇ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಸಂದೇಶ, ಆಶಯಗಳು ಸಮಾಜಕ್ಕೆ ಪರಿಣಾಮಕಾರಿಯಾಗಿ ಮುಟ್ಟಬೇಕು. ಹಾಗೂ ಇದರ ಸತ್ಪರಿಣಾಮ ಏನೆಂದು ನಾವು ಯೋಚಿಸಬೇಕು” ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷರೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 10 ಮಂದಿ ಪ್ರಮುಖ ಕವಿಗಳು ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಡಾ. ಸುರೇಶ್ ನೆಗಳಗುಳಿ (ಕನ್ನಡ ಗಝಲ್), ಗುಣಾಜೆ ರಾಮಚಂದ್ರ ಭಟ್ (ಕನ್ನಡ), ಎಡ್ವರ್ಡ್ ಲೋಬೋ ತೊಕ್ಕೊಟ್ಟು (ಕೊಂಕಣಿ), ಡಾ.ಮೀನಾಕ್ಷಿ ರಾಮಚಂದ್ರ (ಮಲೆಯಾಳಂ), ಅಕ್ಷತಾ ರಾಜ್ ಪೆರ್ಲ (ಹವ್ಯಕ), ಡಾ.ಕವಿತಾ ಸುವರ್ಣ (ಹಿಂದಿ), ಅಕ್ಷಯ ಆರ್. ಶೆಟ್ಟಿ, ವಿಜಯಲಕ್ಷ್ಮಿ ಕಟೀಲು, ವಸಂತಿ ನಿಡ್ಲೆ (ತುಳು) ಇವರು ವಿವಿಧ ಭಾಷೆಗಳಲ್ಲಿ ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸುವರು.
ಮಂಗಳಾದೇವಿ ವ್ಯವಸ್ಥಾಪನ ಸಮಿತಿ ಪರವಾಗಿ ಹರೀಶ್ ಐತಾಳ್ ಸ್ವಾಗತಿಸಿ, ಕವಿಗಳನ್ನು ಗೌರವಿಸಿ, ಲೇಖಕಿ – ಕವಯಿತ್ರಿ ವಿಜಯಲಕ್ಷ್ಮೀ ಕಟೀಲು ನಿರೂಪಿಸಿ, ವಿನಯಾನಂದ ಕೆ. ವಂದಿಸಿದರು.
Subscribe to Updates
Get the latest creative news from FooBar about art, design and business.