ಧಾರವಾಡ : ‘ಕನ್ನಡದ ಕೀರ್ತಿ’ ಕೀರ್ತಿನಾಥ ಕುರ್ತಕೋಟಿಯವರ 97ನೆ ಜನ್ಮದಿನವನ್ನು ಮನೋಹರ ಗ್ರಂಥಮಾಲೆ ಹಾಗೂ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಸಂಯುಕ್ತವಾಗಿ ‘ಕೀರ್ತಿ ನೆನಪು’ ಕಾರ್ಯಕ್ರಮವನ್ನು ದಿನಾಂಕ 13 ಅಕ್ಟೋಬರ್ 2025 ಸೋಮವಾರದಂದು ಬೆಳಗ್ಗೆ 11-00 ಗಂಟೆಗೆ ಧಾರವಾಡದ ರಂಗಾಯಣ ಆವರಣದಲ್ಲಿರುವ ಸವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಂಡಿವೆ.
ಇತ್ತೀಚೆಗೆ ಬಿಡುಗಡೆ ಆದ ಅವರ ‘ವಾಗರ್ಥ’ ಕೃತಿ ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು, ಸುಮಾರು ಐದು ದಶಕಗಳ ಕಾಲ ಕುರ್ತಕೋಟಿಯವರು ಬೇಂದ್ರೆ ಸಾಹಿತ್ಯ ಕುರಿತು ಪ್ರಕಟಿಸಿದ ಕೃತಿಗಳು ಹಾಗೂ ಲೇಖನಗಳ ಸಂಗ್ರಹ ಇದಾಗಿದೆ. ಅವರ ವಿಮರ್ಶಾ ಲೇಖನಗಳು ಸಂಸ್ಕೃತ, ಕನ್ನಡ, ಇಂಗ್ಲೀಷ್ ಈ ಭಾಷೆಯ ಸಾಹಿತ್ಯ ಹಾಗೂ ಸಂಸ್ಕೃತಿಯಿಂದ ಕೂಡಿರುತ್ತವೆ. ಕನ್ನಡ ವಿಮರ್ಶಾ ಪ್ರಕಾರಕ್ಕೆ ಅಸ್ತಿಭಾರ ಹಾಕಿದವರು ಕುರ್ತಕೋಟಿಯವರು. ಇಂದು ನಾಡಿನಲ್ಲಿ ಕುರ್ತಕೋಟಿ ವಿಮರ್ಶಾ ಪರಂಪರೆಯೆ ಇದೆ. ಅದನ್ನು ಕುರ್ತಕೋಟಿ ಕ್ರಿಟಿಸಿಜಮ್ ಸ್ಕೂಲ್ ಎಂದೆ ವಿಮರ್ಶಕರು ಉಲ್ಲೇಖಿಸುತ್ತಾರೆ. ಬೇಂದ್ರೆಯವರ ಕಾವ್ಯ ಅರ್ಥವಾಗಬೇಕಾದರೆ ಕೀರ್ತಿ ಅವರ ವಿಮರ್ಶಾ ಬರಹಗಳನ್ನು ಓದಲೇಬೇಕು.
ಬೇಂದ್ರೆ ಕಾವ್ಯ ಜಗತ್ತು ಕಂಡ ಶ್ರೇಷ್ಠ ಕವಿ. ಈ ಶ್ರೇಷ್ಠ ಕವಿಯ ಕಾವ್ಯದ ಶ್ರೇಷ್ಠ ವಿಮರ್ಶಾ ಕೃತಿ ‘ವಾಗರ್ಥ’ ಕುರಿತು ಸಂವಾದ ‘ಕೀರ್ತಿ ನೆನಪು’. ಸಂವಾದದಲ್ಲಿ ಡಾ. ಶ್ರೀರಾಮ್ ಭಟ್, ಡಾ. ಶ್ಯಾಮಸುಂದರ ಬಿದರಕುಂದಿ, ಡಾ. ವಿನಾಯಕ ನಾಯಕ ಹಾಗೂ ಡಾ. ಕೃಷ್ಣ ಕಟ್ಟಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎರಡೂ ಸಂಸ್ಥೆಗಳು ಆಸಕ್ತರನ್ನೂ ಗೌರವ ಪೂರ್ವಕವಾಗಿ ಸ್ವಾಗತಿಸುತ್ತವೆ.