ಕೋಣಾಜೆ : ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿಯ ವಿಜ್ಞಾನ ಸಂಕೀರ್ಣದ ಹೊರ ಆವರಣದ ಪ್ರಕೃತಿ ಸೌಂದರ್ಯದ ನಡುವೆ ದಿನಾಂಕ 03 ಮತ್ತು 04 ಅಕ್ಟೋಬರ್ 2025ರಂದು ಎರಡು ದಿನಗಳ ಕಾಲ ನಡೆದ ‘ಕಲಾದರ್ಪಣ’ ಭಾವಚಿತ್ರ ರಚನೆ ಹಾಗೂ ಸೃಜನಾತ್ಮಕ ಚಿತ್ರಕಲಾ ಶಿಬಿರವು ಕಲಾರಸಿಕರನ್ನು ಆಕರ್ಷಿಸಿತು. ಶಿಬಿರದಲ್ಲಿ ಖ್ಯಾತ ಕಲಾವಿದರ ಕುಂಚದಲ್ಲಿ ಅರಳಿದ ಬಣ್ಣ ಬಣ್ಣಗಳ ಕಲಾಕೃತಿಗಳು ಮಂಗಳಗಂಗೋತ್ರಿಯ ಆವರಣದಲ್ಲಿ ರಂಗುರಂಗಿನ ಬಣ್ಣದ ಲೋಕವನ್ನು ಸೃಷ್ಟಿಸಿದವು.
ಕಲಾ ಶಿಬಿರವನ್ನು ಮಂಗಳೂರು ವಿವಿಯ ಎನ್.ಜೆ. ಪಾವಂಜೆ ಲಲಿತಾ ಕಲಾ ಪೀಠ ಹಾಗೂ ಕರಾವಳಿ ಚಿತ್ರಕಲಾ ಚಾವಡಿ (ರಿ.) ಮಂಗಳೂರು ಅವರು ವಿನೂತನವಾಗಿ ಆಯೋಜಿಸುವ ಮೂಲಕ ಕಲಾ ಪ್ರೇಕ್ಷಕರ ಮನಗೆದ್ದರು. ಮಂಗಳೂರು ವಿ.ವಿ.ಯಲ್ಲಿ ಜರುಗುವ ಹೆಚ್ಚಿನ ಎಲ್ಲಾ ಕಾರ್ಯಕ್ರಮಗಳು ಸಾಮಾನ್ಯವಾಗಿ ಸಭಾಂಗಣಗಳಲ್ಲಿ ನಡೆಯುತ್ತಿತ್ತು. ಆದರೆ ಈ ಚಿತ್ರಕಲಾ ಶಿಬಿರವು ವಿಜ್ಞಾನ ಸಂಕೀರ್ಣದ ಮುಂಭಾಗದ ಮರಗಿಡಗಳ ನೆರಳಿನಲ್ಲಿ ಆಯೋಜಿಸಿದ್ದು, ಕಲಾವಿದರ ಉತ್ಸಾಹವನ್ನೂ ಇಮ್ಮಡಿಗೊಳಿಸಿತ್ತು.
ಎರಡು ದಿನಗಳ ‘ಕಲಾ ದರ್ಪಣ’ದಲ್ಲಿ ಭಾಗವಹಿಸಿದ್ದ ಹಿರಿಯ-ಕಿರಿಯ ಖ್ಯಾತ ಕಲಾವಿದರ ಕೈಯಲ್ಲಿ ಮೂಡಿ ಬಂದ ಭಾವಚಿತ್ರ, ಕಲಾಕೃತಿಗಳು ಕಲಾಪ್ರೇಮಿಗಳನ್ನು ಸುಂದರವಾದ ಬಣ್ಣದ ಲೋಕಕ್ಕೆ ಕರೆದೊಯ್ದಿತು. ಯಕ್ಷಗಾನ ಸೇರಿದಂತೆ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳು, ಗ್ರಾಮೀಣ ಬದುಕಿನ ಸೊಗಡು, ಮರಗಿಡಗಳು, ಪರಿಸರ, ಪ್ರಕೃತಿ ಸೌಂದರ್ಯವನ್ನು ಬಿಂಬಿಸುವ ಚಿತ್ರಗಳು ಸೇರಿದಂತೆ ಬಗೆಬಗೆಯಲ್ಲಿ ಮೂಡಿಬಂದ ಕಲಾಕೃತಿಗಳು ಕಲಾವಿದರ ಕಲಾ ನೈಪುಣ್ಯಕ್ಕೆ ಸಾಕ್ಷಿಯಾಗಿದ್ದವು.
ರಾಜ್ಯ, ರಾಷ್ಟ್ರ ಮಟ್ಟದ ಹಿರಿಯ ಕಲಾವಿದರು ಭಾಗವಹಿಸಿ ಕಲಾ ಶಿಬಿರಕ್ಕೆ ಹೊಸ ಮೆರುಗು ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಕಲಾವಿದರಾದ ರಮೇಶ್ ರಾವ್ ಉಡುಪಿ, ಬಾಬುರಾವ್ ನಾಡೋಣಿ, ಸೈಯದ್ ಆಸಿಫ್ ಅಲಿ, ಸಕು ಪಾಂಗಳ ಭಾಗವಹಿಸಿದ್ದರು. ಕರಾವಳಿ ಚಿತ್ರಕಲಾ ಚಾವಡಿಯ ಕಲಾವಿದರಾದ ಶರತ್ ಹೊಳ್ಳ, ಗಿಲಿಯಾಳ ಜಯರಾಮ ಭಟ್, ಗಣೇಶ್ ಸೋಮಯಾಜಿ, ಅನಂತ ಪದ್ಮನಾಭ ರಾವ್, ಮನೋರಂಜಿನಿ, ಸಪ್ನಾ ನೊರೋನ್ಹ, ಜಯಶ್ರೀ ಶರ್ಮ, ಖುರ್ಷಿದ್ ಯಾಕೂಬ್, ಡಾ. ಎಸ್.ಎಂ. ಶಿವಪ್ರಕಾಶ್, ಡಾ. ಸುಜೋತ ಧರ್ಮ, ರೂಪಾ ವಸುಂದರ ಆಚಾರ್ಯ, ನವೀನ್ ಚಂದ್ರ ಬಂಗೇರ, ಡಾ. ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.
ಪಾವಂಜೆ ಪೀಠವು ವಿಜ್ಞಾನ ಸಂಕೀರ್ಣದ ಮುಂಭಾಗದ ಪ್ರಾಕೃತಿಕ ಸೊಬಗಿನ ಮರಗಳ ನೆರಳಲ್ಲಿ ಆಯೋಜಿಸಿದ ಕಲಾ ಶಿಬಿರವನ್ನು ಕಂಡು ಸಂತಸಗೊಂಡ ಕುಲಪತಿ ಪ್ರೊ. ಪಿ.ಎಲ್. ಧರ್ಮ ಇದೇ ಸ್ಥಳವನ್ನು ಕಲಾ ಚಟುವಟಿಕೆಗಳಿಗೆ ಪೂರಕವಾಗಿ ‘ಮಂಗಳ’ ಬಯಲು ರಂಗ ವೇದಿಕೆಯಾಗಿ ರೂಪಿಸಲಾಗುವುದು. ಇದಕ್ಕೆ ಅಗತ್ಯವಾದ ಕಾಮಗಾರಿಗಳು ಕೂಡಲೇ ಆರಂಭಿಸಲಾಗುವುದು ಎಂದರು.
ಒಟ್ಟಿನಲ್ಲಿ ಪಾವಂಜೆ ಪೀಠದ ಸಂಯೋಜಕ ಡಾ. ಧನಂಜಯ ಕುಂಬ್ಳೆ, ಚಿತ್ರಕಲಾ ಚಾವಡಿಯ ಡಾ. ಎಸ್.ಎಂ. ಶಿವಪ್ರಕಾಶ್ ಹಾಗೂ ಗಣೇಶ್ ಸೋಮಯಾಜಿ ನೇತೃತ್ವದಲ್ಲಿ ಕುಲಸಚಿವ ಕೆ. ರಾಜು ಮೊಗವೀರ ಅವರ ಹೊಸತನದ ಕಲ್ಪನೆಯಲ್ಲಿ ವಿ.ವಿ.ಯ ಆವರಣದಲ್ಲಿ ಮೂಡಿಬಂದ ಶಿಬಿರದಲ್ಲಿ ನೂರಾರು ಕಲಾ ಪ್ರೇಕ್ಷಕರು, ಕಲಾವಿದರು, ವಿದ್ಯಾರ್ಥಿಗಳು ಭಾಗವಹಿಸಿ ಕಲಾಸಕ್ತಿಯನ್ನು ಬೆಳೆಸುವ ಮೂಲಕ ಶಿಬಿರವು ಸಾರ್ಥಕತೆ ಕಂಡಿತು.