ಕಾಸರಗೋಡು : ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಯ ಪ್ರತಿಷ್ಠಾನದ ಸಾಂಸ್ಕೃತಿಕ ಭವನದಲ್ಲಿ ದಿನಾಂಕ 26 ಅಕ್ಟೋಬರ್ 2025ರಂದು ಸದಸ್ಯ ಸಮಾವೇಶ ಜರಗಿತು.

ಈ ಸಮಾವೇಶದ ಉದ್ಘಾಟನೆ ಆಶೀರ್ಚವನವನ್ನು ನೆರವೇರಿಸಿದ ಒಡಿಯೂರು ಶ್ರೀಗಳು “ಇದು ಸಿರಿಬಾಗಿಲು ಮಾತ್ರವಲ್ಲ ಧರ್ಮ ಸಂಸ್ಕೃತಿಗೆ ಹೆಬ್ಬಾಗಿಲು. ಆರಾಧನಾ ಕಲೆಯಾದ ಯಕ್ಷಗಾನವನ್ನು ಇಂದು ವಿದ್ವಾಂಸರುಗಳು ಸೇರಿ ಅದರ ಸಿರಿವಂತಿಕೆಯನ್ನು ಹೆಚ್ಚಿಸಿದ್ದಾರೆ. ನವರಸ ಕಲೆ ಎಂದೇ ಹೇಳಬಲ್ಲ ಯಕ್ಷಗಾನದಲ್ಲಿ ಭಾವ -ಭಾಷಾಶುದ್ದಿಗೆ ಆದ್ಯತೆ ಹಾಗೂ ಸಮಾಜಕ್ಕೆ ಪುರಾಣ ಕಥೆಗಳ ಪರಿಚಯವು ಉಂಟಾಗುತ್ತದೆ. ಪ್ರತಿಯೊಬ್ಬರ ಬದುಕಿಗೆ ಪ್ರತಿ ಪ್ರಸಂಗದಲ್ಲಿ ಬರುವ ಸಂದೇಶಗಳು ಮಾರ್ಗದರ್ಶನವಾಗುತ್ತದೆ. ಒಬ್ಬ ವ್ಯಕ್ತಿಯ ನಿಸ್ವಾರ್ಥ ಸೇವೆಗೆ ದಾನಿಗಳ ಸಹಕಾರ ಸಿಗುತ್ತದೆ ಎಂಬುದಕ್ಕೆ ಪ್ರತಿಷ್ಠಾನ ಮುಖೇನ ಸಿರಿಬಾಗಿಲು ಮಯ್ಯರು ಅವರು ನಡೆಸುವ ಯಶಸ್ವಿ ಚಟುವಟಿಕೆ ಉದಾಹರಣೆ. ಯಕ್ಷಗಾನ ಕಲೆ ಅದರ ಶ್ರೇಷ್ಠತೆ ಅದನ್ನು ಉಳಿಸುವಲ್ಲಿ ಮಯ್ಯರು ಹಾಗೂ ಮನೆಯವರ, ಸದಸ್ಯರ ಶತ ಪ್ರಯತ್ನ ಮೆಚ್ಚುವಂತದ್ದು” ಎಂದರು.

ಅಧ್ಯಕ್ಷತೆ ವಹಿಸಿದ ಪ್ರತಿಷ್ಠಾನದ ಅಧ್ಯಕ್ಷರಾದ ರಾಮಕೃಷ್ಣ ಮಯ್ಯರವರು ಪ್ರತಿಷ್ಠಾನದ ಇದುವರೆಗಿನ ಚಟುವಟಿಕೆ, ಮುಂದಿನ ಹಲವು ಯೋಜನೆಗಳನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿ ಶ್ರೀ ರಾಧಾಕೃಷ್ಣ ಕೆ. ಉಳಿಯತಡ್ಕ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾದ ಶ್ರೀ ಸತೀಶ ಅಡಪ ಸಂಕಬೈಲು, ಮಾಜಿ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಶ್ರೀ ಯೋಗೀಶ ರಾವ್ ಚಿಗುರುಪಾದೆ, ಪುತ್ತೂರು ಶ್ರೀ ಮಹಾದೇವ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಶೀನಶೆಟ್ಟಿ ಕಜೆ ಶುಭ ಹಾರೈಸಿದರು.
ಶ್ರೀ ರಾಜಾರಾಮ ರಾವ್ ಮೀಯಪದವು ಇವರು ಅತಿಥಿಗಳನ್ನು ಸ್ವಾಗತಿಸಿದರೆ ,ಶ್ರೀ ಪ್ರಶಾಂತ ಹೊಳ್ಳ ನೀರಾಳ ನಿರೂಪಿಸಿದರು. ಪ್ರತಿಷ್ಠಾನದ ಪೋಷಕರಾದ ಶ್ರೀ ಯಚ್. ಕೃಷ್ಣ ಭಟ್ ಮಂಗಳೂರು, ಸದಸ್ಯರುಗಳಾದ ಶ್ರೀ ಯಂ.ಯಲ್. ಭಟ್ ಸಾಗರ, ಶ್ರೀ ಸದಾಶಿವ ಭಟ್ ಎದ್ರುಕಳ ಉಪಸ್ಥಿತರಿದ್ದರು. ಶ್ರೀ ಪ್ರಸನ್ನ ಕೃಷ್ಣ ಕಾರಂತ ದೇಶಮಂಗಲ ಇವರು ಧನ್ಯವಾದವಿತ್ತರು. ಇದಕ್ಕೂ ಮುಂಚೆ ಶ್ರೀ ಜಯರಾಮ ದೇವಸ್ಯ ಮತ್ತು ಬಳಗದವರಿಂದ ‘ಶರ ಸೇತುಬಂಧನ’ ಯಕ್ಷಗಾನ ತಾಳಮದ್ದಳೆ ಜರಗಿತು. ಸಂಜೆ ಸಾಕೇತ ಕಲಾವಿದರು ಹೆಗ್ಗೋಡು ಸಾಗರ ಇವರಿಂದ ಬಡಗುತಿಟ್ಟಿನ ‘ಗದಾಯುದ್ಧ’ ಯಕ್ಷಗಾನ ಪ್ರದರ್ಶನ ನಡೆಯಿತು.

