ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಪ್ರೊ. ಬಿ.ಎ. ವಿವೇಕ್ ರೈ ವಿಚಾರ ವೇದಿಕೆಯಲ್ಲಿ ದಿನಾಂಕ 28 ಅಕ್ಟೋಬರ್ 2025ರಂದು ‘ಬಿತ್ತಿ’ ಗೋಡೆ ಬರಹದ ಉದ್ಘಾಟನಾ ಸಮಾರಂಭ ನಡೆಯಿತು.
ಈ ಸಮಾರಂಭದಲ್ಲಿ ಪತ್ರಿಕೆ ಅನಾವರಣಗೊಳಿಸಿ ಮಾತನಾಡಿದ ಗೋವಿಂದ ದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಪಿ. “ಸಾಹಿತ್ಯದ ಅಭಿವ್ಯಕ್ತಿಗೆ ಗೋಡೆ ಬರಹ ಪತ್ರಿಕೆಗಳು ಪ್ರೇರಕವಾಗಿ ಕಾರ್ಯ ನಿರ್ವಹಿಸುತ್ತವೆ. ಹಸ್ತಪತ್ರಿಕೆಗಳ ಪರಂಪರೆ ನಮ್ಮಲ್ಲಿದ್ದು, ಹಿರಿಯ ಸಾಹಿತಿಗಳ ಮೊದಲ ರಚನೆಗಳಿಗೆ ಅವು ಮೊದಲ ಮೆಟ್ಟಲುಗಳಾಗಿದ್ದವು. ಸೃಜನಶೀಲ ಬರವಣಿಗೆ, ವರದಿಗಾರಿಕೆಯ ಕಲಿಕೆ, ಗೋಡೆ ಬರಹ ಉತ್ತಮ ವೇದಿಕೆ. ಶೀಘ್ರವಾಗಿ ಬದಲಾಗುತ್ತಿರುವ ಇಂದಿನ ತಂತ್ರ ಜ್ಞಾನದಲ್ಲಿಯೂ ಭಾವಗಳ ಅಭಿವ್ಯಕ್ತಿಯ ಮಾಧ್ಯಮವಾದ ಸಾಹಿತ್ಯಕ್ಕೆ ವಿಶೇಷ ಸ್ಥಾನವಿದ್ದು ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ನೂತನ ಅವಕಾಶಗಳ ಸಾಧ್ಯತೆಗಳನ್ನು ಕಂಡುಕೊಳ್ಳಬೇಕಾಗಿದೆ. ಕನ್ನಡ ವಿಭಾಗವನ್ನು ಕಟ್ಟಿದ ಎಸ್.ವಿ. ಪರಮೇಶ್ವರ ಭಟ್ಟರ ಪರಂಪರೆಯನ್ನು ಮುಂದುವರಿಸಿದ ಹಿರಿಯರಾದ ಪ್ರೊ. ಬಿ.ಎ. ವಿವೇಕ ರೈ ಮೊದಲಾದವರ ಕಾರ್ಯಗಳಿಂದ ಕನ್ನಡ ವಿಭಾಗ ಅನನ್ಯ ಸ್ಥಾನವನ್ನು ಪಡೆದಿದ್ದು ಅದೇ ಮಾದರಿ ಇಂದಿಗೂ ಮುಂದುವರಿಯಲಿ” ಎಂದು ಅಶಿಸಿದರು.

ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ನಾಗಪ್ಪ ಗೌಡ ಆರ್. ಮಾತನಾಡಿ “ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಆದ್ಯತೆಯನ್ನು ನೀಡುತ್ತಿದ್ದು ಅಧ್ಯಯನ, ಸಂಶೋಧನೆ, ಸೃಜನಶೀಲ ಬರವಣಿಗೆಗಳಿಗೆ ಅವಕಾಶ ನೀಡುತ್ತಿದೆ” ಎಂದರು.
ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಸೋಮಣ್ಣ ಹೊಂಗಳ್ಳಿ, ಡಾ. ಧನಂಜಯ ಕುಂಬ್ಳೆ, ಬಿತ್ತಿ ಸಂಯೋಜಕ ಡಾ. ಯಶು ಕುಮಾರ್ ಡಿ. ಉಪಸ್ಥಿತರಿದ್ದರು. ಬಿತ್ತಿ ಸಂಪಾದಕಿ ಪ್ರಥ್ವಿ ನಾಯಕ್ ಬಿತ್ತಿ ಪತ್ರಿಕೆಯ ಆಶಯಗಳನ್ನು ವ್ಯಕ್ತ ಪಡಿಸಿದರು. ವಿದ್ಯಾರ್ಥಿಗಳಾದ ಸಲೀಮ್, ಮರಿ ಸಿದ್ದಪ್ಪ, ಶ್ರೇಯಸ್, ಉಪ ಸಂಪಾದಕ ಜಗದೀಶ್ ಕವನಗಳನ್ನು ವಾಚಿಸಿದರು. ಅಭಿಷೇಕ್ ವಾಲ್ಮೀಕಿ ಸ್ವಾಗತಿಸಿ, ಅನೂಪ್ ವಂದಿಸಿ, ರೇಷ್ಮಾ ಎನ್. ಬಾರಿಗ ಕಾರ್ಯಕ್ರಮ ನಿರೂಪಿಸಿದರು.
 
									 
					