ಮಂಗಳೂರು : ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರಿನ ಆಶ್ರಯದಲ್ಲಿ, ಸಸಿಹಿತ್ಲು ಘಟಕದ ಆತಿಥ್ಯದಲ್ಲಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಕಾರದೊಂದಿಗೆ, ವಿಶುಕುಮಾರ್ ದತ್ತಿನಿಧಿ ಸಂಚಾಲನ ಸಮಿತಿ ಸಹಯೋಗದಲ್ಲಿ ‘ವಿಶುಕುಮಾರ್ ತುಳು ಸಾಹಿತ್ಯೋತ್ಸವ’ದ ಅಂಗವಾಗಿ ದಿನಾಂಕ 09 ನವೆಂಬರ್ 2025ರಂದು ಕುದ್ಮುಲ್ ರಂಗರಾವ್ ಪುರಭವನದಲ್ಲಿ ತುಳು ಕುಣಿತ ಭಜನಾ ಸ್ಪರ್ಧೆ ಮತ್ತು ‘ವಿಶುಕುಮಾರ್ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು.
ಈ ಸಮಾರಂಭದಲ್ಲಿ ಮಾತನಾಡಿದ ಸಾಹಿತಿ ಹಾಗೂ ಪಿಲಿಕುಳ ನಿಸರ್ಗಧಾಮ ಸಮಿತಿ ಸದಸ್ಯ ಎಂ.ಜಿ. ಮೋಹನ್ “ವಿಶುಕುಮಾರ್ ಈ ಜಗತ್ತನ್ನು ಅಗಲಿ ದಶಕಗಳೇ ಕಳೆದರೂ, ಅವರು ಬದುಕಿದ ರೀತಿ ಹಾಗೂ ಸಾಧನೆಗಳು ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿಸುವ ಕೆಲಸವನ್ನು ಯುವವಾಹಿನಿ ಸಂಸ್ಥೆ ಮಾಡಿದೆ. ಯಾರು ಸಮಾಜಕ್ಕಾಗಿ ತಮ್ಮ ಜೀವ ತೇಯುತ್ತಾರೋ, ನಾನಾ ರೀತಿಯಲ್ಲಿ ಕೊಡುಗೆಗಳನ್ನು ನೀಡುತ್ತಾರೋ, ಅಂತಹ ವ್ಯಕ್ತಿಗಳು ಸಮಾಜದಲ್ಲಿ ಬಹುಕಾಲ ನೆನಪಿನಲ್ಲಿತ್ತಾರೆ. ಅಂತಹ ವ್ಯಕ್ತಿಗಳಲ್ಲಿ ವಿಶುಕುಮಾರ್ ಒಬ್ಬರು” ಎಂದು ಹೇಳಿದರು.

ಹಿರಿಯ ಸಾಹಿತಿ ಹಾಗೂ ಸಂಶೋಧಕ ಬೆನೆಟ್ ಜಿ.ಅಮ್ಮಣ್ಣ ಇವರಿಗೆ ‘ವಿಶುಕುಮಾರ್ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಿನ್ಸಿಪಾಲ್ ಮತ್ತು ಹಿರಿಯ ಸಾಹಿತಿ ಡಾ. ವಿ.ಕೆ. ಯಾದವ್ ಅಭಿನಂದನಾ ನುಡಿಗಳನ್ನಾಡಿದರು. ಡಾ. ಪ್ರಭಾಕರ್ ನೀರುಮಾರ್ಗ ಇವರು ‘ಯುವ ಸಾಹಿತ್ಯ ಪ್ರಶಸ್ತಿ’ಯನ್ನು ಚೈತ್ರಾ ಕಬ್ಬಿನಾಲೆ ಇವರಿಗೆ ನೀಡಿ ಗೌರವಿಸಿದರು. ಆಯ್ಕೆ ಸಮಿತಿಯ ಮುಖ್ಯಸ್ಥ ಮುದ್ದು ಮೂಡುಬೆಳ್ಳೆ ಪ್ರಶಸ್ತಿಯ ಕುರಿತು ಅಭಿಪ್ರಾಯ ತಿಳಿಸಿದರು. ವಕೀಲರಾದ ವಿಜಯಲಕ್ಷ್ಮೀ ವಿಶುಕುಮಾರ್ ಬೆಂಗಳೂರು, ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರಿನ ಪ್ರಧಾನ ಕಾರ್ಯದರ್ಶಿ ಬಾಬು ಪೂಜಾರಿ, ಕಲೆ ಮತ್ತು ಸಾಹಿತ್ಯ ನಿರ್ದೇಶಕಿ ಸರಸ್ವತಿ ಎಸ್.ಕೆ. ಕೂಳೂರು, ಯುವವಾಹಿನಿ ಸಸಿಹಿತ್ಲು ಘಟಕದ ಅಧ್ಯಕ್ಷೆ ನಯನಾ ಪ್ರದೀಪ್, ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಿತಿ ಸಂಚಾಲಕಿ ರಶ್ಮಿ ಸಿ. ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು.
ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರಿನ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಸ್ವಾಗತಿಸಿ, ಯುವ ವಾಹಿನಿ ರಾಜ್ಯ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಹಾಗೂ ವಿಶುಕುಮಾರ್ ದತ್ತಿನಿಧಿ ಸಂಚಾಲನ ಸಮಿತಿ ಸದಸ್ಯ ಟಿ. ಶಂಕರ್ ಸುವರ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಧುಶ್ರೀ ಕೂಳೂರು ವಂದಿಸಿ, ರೇಣುಕಾ ಕಣಿಯೂರು, ಪ್ರಜ್ಞಾ ಒಡಿಲ್ನಾಳ, ಶರತ್ ಅಡ್ವೆ ಹಾಗೂ ದಯಾನಂದ ಉಗೈಲ್ಬೆಟ್ಟು ನಿರೂಪಿಸಿದರು. ಬೆಳಗ್ಗಿನಿಂದ ನಡೆದ ಅಂತರ್ ಘಟಕ ತುಳು ಕುಣಿತ ಭಜನೆಯ ತಂಡ ಸ್ಪರ್ಧೆಯಲ್ಲಿ ಸುರತ್ಕಲ್ ಘಟಕ ಪ್ರಥಮ, ಪಣಂಬೂರು-ಕುಳಾಯಿ ಘಟಕ ದ್ವಿತೀಯ, ಕಾರ್ಕಳ ಘಟಕ ತೃತೀಯ ಬಹುಮಾನ ಹಾಗೂ ಪಡುಬಿದ್ರಿ ಘಟಕ ತೀರ್ಪುಗಾರರ ಮೆಚ್ಚುಗೆ ಪಡೆದ ತಂಡ ಬಹುಮಾನ ಪಡೆಯಿತು. ಉತ್ತಮ ಹಾರ್ಮೋನಿಯಂ ವಾದನಕ್ಕೆ ಕೂಳೂರು ಘಟಕ, ಉತ್ತಮ ತಬಲಾ ವಾದನಕ್ಕೆ ಕೊಲ್ಯ ಘಟಕ, ಉತ್ತಮ ಭಜಕಿ ಬೆಂಗಳೂರು ಘಟಕ, ಉತ್ತಮ ಭಜಕ ಬಹುಮಾನವನ್ನು ಕಾರ್ಕಳ ಘಟಕ ಪಡೆಯಿತು. ಸ್ಪರ್ಧೆ ಬಹುಮಾನ ವಿಜೇತರ ಪಟ್ಟಿಯನ್ನು ಎಸ್.ಆರ್. ಪ್ರದೀಪ್ ವಾಚಿಸಿದರು.
