ಪಡುಬಿದ್ರಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕ ಇದರ ವತಿಯಿಂದ ಕಾಪು ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ -2025 ‘ಪರಿಕ್ರಮ’ ಕನ್ನಡ ಕಥಾ ಸಾಹಿತ್ಯದ ಚಿಂತನ-ಮಂಥನ ಕಾರ್ಯಕ್ರಮವು ಖ್ಯಾತ ಕಥೆಗಾರ, ಹಿರಿಯ ಸಾಹಿತಿ, ಸಾಮಾಜಿಕ ಕಾರ್ಯಕರ್ತ ಫಕೀರ್ ಮುಹಮ್ಮದ್ ಕಟ್ಟಾಡಿ ಇವರ ಸರ್ವಾಧ್ಯಕ್ಷತೆಯಲ್ಲಿ ದಿನಾಂಕ 15 ನವೆಂಬರ್ 2025ರಂದು ಹೆಜಮಾಡಿ ಬಿಲ್ಲವರ ಸಂಘದ ಸಭಾಭವನದಲ್ಲಿ ಜರಗಲಿದೆ.
ಬೆಳಿಗ್ಗೆ ಗಂಟೆ 8-00ಕ್ಕೆ ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಿ, ಕನ್ನಡ ಮಾತೆ ಭುವನೇಶ್ವರೀ ದೇವಿಯ ಶೋಭಾಯಾತ್ರೆಗೆ ಚಾಲನೆ ದೊರೆಯಲಿದೆ. ಬಳಿಕ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಎ. ಮೆಂಡನ್ ರಾಷ್ಟ್ರ ಧ್ವಜಾರೋಹಣಗೈಯಲಿದ್ದಾರೆ. ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ. ಪುಂಡಲೀಕ ಮರಾಠೆ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಮಾಡಲಿದ್ದಾರೆ.
ಕಾಪುವಿನ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಇವರು ಸಮ್ಮೇಳನವನ್ನು ಉದ್ಘಾಟಿಸಲಿದ್ದು ಕ.ಸಾ.ಪ. ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪಾಂಗಾಳ ಬಾಬು ಕೊರಗ ಸರ್ವಾಧ್ಯಕ್ಷರಿಗೆ ಧ್ವಜಹಸ್ತಾಂತರ ಮಾಡಲಿದ್ದಾರೆ. ಕ.ಸಾ.ಪ. ಪೂರ್ವ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕಾರ್ಯಾಧ್ಯಕ್ಷ ದಯಾನಂದ ಹೆಜಮಾಡಿ, ತಹಶೀಲ್ದಾರ್ ಅನಂತ ಶಂಕರ್, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ ಮತ್ತಿತರರು ವೇದಿಕೆಯಲ್ಲಿರುವರು.
ಕನ್ನಡ ಕಥಾ ಸಾಹಿತ್ಯದ ಚಿಂತನ-ಮಂಥನ ಪರಿಕಲ್ಪನೆಯಲ್ಲಿ ‘ಪರಿಕ್ರಮ’ ಶೀರ್ಷಿಕೆಯಲ್ಲಿ ಜರಗುವ ಸಾಹಿತ್ಯ ಸಮ್ಮೇಳನದಲ್ಲಿ ಕಥೆಗಾರ್ತಿ ಡಾ. ಪ್ರಜ್ಞಾ ಮಾರ್ಪಳ್ಳಿಯವರು ‘ಕಥಾ ಸ್ವಾರಸ್ಯ’ದ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ. ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪ್ರಶಸ್ತಿ ಪುರಸ್ಕೃತ ಕವಯಿತ್ರಿ ಫಾತಿಮಾ ರಲಿಯಾ ಹೆಜಮಾಡಿ ಇವರು ವಹಿಸಿಕೊಳ್ಳಲಿದ್ದು, ವಸುಂಧರಾ ಕೆ.ಟಿ. ಕಾಪು, ಶೃತಿಕಾ ಎರ್ಮಾಳು (ಕನ್ನಡ ಭಾಷೆ), ಬೆನೆಟ್ ಜೆ. ಅಮೃಣ್ಣ ಕಾಪು ಪಾಂಗಾಳಗುಡ್ಡೆ, ಓಂದಾಸ್ ಕಣ್ಣಂಗಾರ್ ಹೆಜಮಾಡಿ (ತುಳು ಭಾಷೆ), ಹಮೀದ್ ಪಡುಬಿದ್ರಿ (ಬ್ಯಾರಿ ಭಾಷೆ), ಸತೀಶ್ ಪಡುಬಿದ್ರಿ (ಕೊರಗ ಭಾಷೆ), ಗೀತಾ ವಾಗ್ಳೆ ಬಂಟಕಲ್ಲು (ಕೊಂಕಣಿ ಭಾಷೆ)ಯಲ್ಲಿ ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸಲಿದ್ದಾರೆ. ಕನ್ನಡ ಉಪನ್ಯಾಸಕಿ ಯಶೋದ ಎಲ್ಲೂರು ಗೋಷ್ಠಿಯ ನಿರ್ವಹಣೆ ಮಾಡಲಿದ್ದಾರೆ. ನಿವೃತ್ತ ಶಿಕ್ಷಕ, ಸಾಹಿತಿ ಕೃಷ್ಣಕುಮಾರ್ ರಾವ್ ಮಟ್ಟು ಸಂಯೋಜನೆಯಲ್ಲಿ ‘ಸಿರಿಗನ್ನಡ ವಿಶೇಷ ರಸಪ್ರಶ್ನೆ’ ಜರಗಲಿದ್ದು, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ ನೆರವೇರಲಿದೆ.
ಸಂಜೆ 3-00 ಗಂಟೆಗೆ ಜರಗುವ ಸಮಾರೋಪ ಸಮಾರಂಭದಲ್ಲಿ ಆದಾನಿ ಸಮೂಹ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಇವರು ವಿವಿಧ ಕ್ಷೇತ್ರಗಳ ಸಾಧಕರನ್ನು ಸಮ್ಮಾನಿಸಲಿದ್ದು, ಹಿರಿಯ ಸಾಹಿತಿ ಮನೋರಮಾ ಹೆಜಮಾಡಿ ಸಮಾರೋಪ ಭಾಷಣ ಮಾಡಲಿದ್ದಾರೆ. ಕ.ಸಾ.ಪ. ಕಾವು ತಾಲೂಕು ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ತಾ.ಪಂ. ಇಒ ಜೇಮ್ಸ್ ಡಿಸಿಲ್ವಾ, ಕರ್ನಾಟಕ ಹಾಲು ಮಹಾ ಮಂಡಲದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಹೆಜಮಾಡಿ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾ.ಅ. ಯೋಜನಾಧಿಕಾರಿ ಮಮತಾ ಶೆಟ್ಟಿ ಹೆಜಮಾಡಿ ಕೋಡ್ದಬ್ಬು ದೈವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಭಾಸ್ಕರ ಭಟ್ ಉಪಸ್ಥಿತರಿರಲಿದ್ದಾರೆ.

