ಮೈಸೂರು : ಅದಮ್ಯ ರಂಗಶಾಲೆ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪ್ರತಿಭಾವಂತ ಮಕ್ಕಳಿಗೆ ‘ಅದಮ್ಯ ಚಿಗುರು ಪ್ರತಿಭಾ ಚೇತನ’ ಪುರಸ್ಕಾರ ನೀಡಲು ಉದ್ದೇಶಿಸಲಾಗಿದ್ದು, ಅರ್ಹ ಪ್ರತಿಭಾವಂತ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ತಿಳಿಸಿದ್ದಾರೆ.
ಜಿಲ್ಲೆಯ ವ್ಯಾಪ್ತಿಯೊಳಗಿನ ಸರಕಾರಿ, ಅನುದಾನಿತ, ಖಾಸಗಿ ಶಾಲೆ ಮತ್ತು ಕಾಲೇಜುಗಳಲ್ಲಿ ಎಲ್.ಕೆ.ಜಿ.ಯಿಂದ ಪ್ರಥಮ ಪಿಯುಸಿ ವರೆಗೆ ವ್ಯಾಸಂಗ ಮಾಡುತ್ತಿರುವ ಕಲೆ, ಸಾಹಿತ್ಯ, ಶಿಕ್ಷಣ, ಸಂಗೀತ, ರಂಗಭೂಮಿ, ಕ್ರೀಡೆ, ನೃತ್ಯ, ಜನಪದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಪರಿಚಯ, ಭಾವಚಿತ್ರ, ದೂರವಾಣಿ ಸಂಖ್ಯೆ ಹಾಗೂ ಸಾಧನೆಯ ವಿವರಗಳನ್ನು ಒಳಗೊಂಡ ಅಗತ್ಯ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬಹುದಾಗಿದೆ.
ಮಕ್ಕಳ ಅಥವಾ ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಕರು ಈ ಎಲ್ಲ ಅಗತ್ಯ ಮಾಹಿತಿಗಳನ್ನು ಹೊಂದಿರುವ ಅರ್ಜಿಯನ್ನು ಸಿದ್ದಪಡಿಸಿ ದಿನಾಂಕ 24 ನವೆಂಬರ್ 2025ರೊಳಗೆ ತಲುಪುವಂತೆ ಟಿ. ಸತೀಶ್ ಜವರೇಗೌಡ, ಗೌರವ ಕಾರ್ಯದರ್ಶಿ, ಅದಮ್ಯ ರಂಗಶಾಲೆ, ವಿಸ್ಮಯ ಪ್ರಕಾಶನ, ನಂ.442/10, ಕೃಷ್ಣ ಬೇಕರಿ ಬಿಲ್ಡಿಂಗ್, ರಾಮಸ್ವಾಮಿ ಸರ್ಕಲ್, ಮೈಸೂರು – 570004 ಈ ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ತಲುಪಿಸಬಹುದು. ಆಯ್ಕೆಯಾದ ಮಕ್ಕಳಿಗೆ ಮಾಸಾಂತ್ಯದಲ್ಲಿ ನಡೆಯಲಿರುವ ‘ಕನ್ನಡ ಹಬ್ಬ’ದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಮಾಹಿತಿಗೆ ಮೊ. 86601 03141 ಸಂಪರ್ಕಿಸಬಹುದು.
