ಕುಶಾಲನಗರ : ಕುಶಾಲನಗರದ ಎ.ಪಿ.ಸಿ.ಎಂ.ಎಸ್. ಕನ್ವೆನ್ಷನ್ ಸಭಾಂಗಣದಲ್ಲಿ ದಿನಾಂಕ 21 ನವೆಂಬರ್ 2025ರಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು, ಕೊಡಗು ಜಿಲ್ಲಾ ಘಟಕ, ಸಂಗಮ ಟಿ.ವಿ. ಹಾಗೂ ವಂಶಿ ನ್ಯೂಸ್ ಸಹಯೋಗದೊಂದಿಗೆ ಕನ್ನಡ ಸುವರ್ಣ ಸಂಭ್ರಮ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್ “ಕನ್ನಡ ಭಾಷೆಯನ್ನು ಬೆಳೆಸುವ ಅಗತ್ಯವಿಲ್ಲ ನಾವು ಬಳಸಿದರೆ ಸಾಕು, ನಮ್ಮ ಕನ್ನಡ ಭಾಷೆ ಅನ್ನದ ಭಾಷೆಯಾಗಬೇಕು, ಕರ್ನಾಟಕ ಸರಕಾರದ ನೇಮಕಾತಿಗಳಲ್ಲಿ ಕನ್ನಡ ಭಾಷಿಕರಿಗೆ ಆದ್ಯತೆ ಸಿಗಬೇಕು. ಜೊತೆಗೆ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದ ಮಕ್ಕಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಪ್ರತ್ಯೇಕ ಮೀಸಲಾತಿ ಸಿಗಬೇಕು ಅಂದಾಗ ಮಾತ್ರ ಸರಕಾರಿ ಶಾಲೆಗಳು ಉಳಿಯಲು ಸಾಧ್ಯ. ಕನ್ನಡ ಸಾಹಿತ್ಯ ಪರಂಪರೆ ಬಹಳ ಅಭೂತಪೂರ್ವವಾದದ್ದು, ವೈಶಿಷ್ಟ್ಯತೆಯಿಂದ ಕೂಡಿದ ಕನ್ನಡ ಭಾಷೆಯಲ್ಲಿರುವ ಪ್ರಭೇದ, ಪ್ರಕಾರಗಳಾದ ಷಟ್ಪದಿ, ರಗಳೆಗಳಂತ ಸಾಹಿತ್ಯ ಬೇರೆ ಯಾವ ಭಾಷೆಗಳಲ್ಲಿ ಕಾಣಸಿಗಲು ಸಾಧ್ಯವಿಲ್ಲ, ಜನಪದ ಸಾಹಿತ್ಯ ಮತ್ತು ವಚನ ಸಾಹಿತ್ಯಗಳು ಕನ್ನಡ ಸಾಹಿತ್ಯಕ್ಕೆ ಮಹತ್ತರವಾದ ಅಡಿಪಾಯ ಹಾಕಿದವು. ಜನಪದರು ಶರಣರು ಅನುಭಾವದ ನೆಲೆಯಲ್ಲಿ ಸಾಹಿತ್ಯವನ್ನು ಕಟ್ಟಿ ಬೆಳೆಸಿದರು. ಕೊಡಗಿನಲ್ಲಿ ಕೊಡಗಿನ ರಾಣಿಯಾದ ಗೌರಮ್ಮ ಮೊದಲನೇ ತಲೆಮಾರಿನ ಕಥೆಗಾರ್ತಿಯಾಗಿದ್ದರು. ಕರ್ನಾಟಕದಲ್ಲಿ ಕನ್ನಡ ಭಾಷೆಯ ಜೊತೆಗೆ ಕೊಡವ, ಅರೆಭಾಷೆ, ಕೊಂಕಣಿ, ತುಳು, ಲಂಬಾಣಿ ಮುಂತಾದ ಅನೇಕ ಉಪಭಾಷೆಗಳಿವೆ. ಆದ್ದರಿಂದ ಇದು ಕನ್ನಡ ರಾಜ್ಯೋತ್ಸವ ಮಾತ್ರವಲ್ಲ ಕರ್ನಾಟಕದ ರಾಜ್ಯೋತ್ಸವ ಎಂದರೆ ಅತ್ಯಂತ ಸೂಕ್ತವಾದುದು. ಸದಾ ಕನ್ನಡ ನಾಡು-ನುಡಿಯ ಬಗ್ಗೆ ತುಡಿಯುವ ಪತ್ರಕರ್ತ ಹಾಗೂ ಈ ಭಾಗದ ಅತ್ಯುತ್ತಮ ಸಂಘಟಕರಾದ ರಘುಕೋಟಿಯಂಥವರು ಕೊಡಗು ಜಿಲ್ಲೆಯ ನೇತೃತ್ವ ವಹಿಸಿರುವುದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಗೆ ಒಂದು ಶಕ್ತಿಯಿದ್ದಂತೆ” ಎಂದು ಅಭಿಪ್ರಾಯಪಟ್ಟರು.

ಕೊಡ್ಲಿಪೇಟೆಯ ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠದ ಶ್ರೀ ಸದಾಶಿವಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ “ಕನ್ನಡ ಭಾಷೆ ನೆಲ ಜಲದ ಉಳಿವಿಗಾಗಿ ಈ ನಾಡಿನ ಅನೇಕ ಕನ್ನಡ ಪರ ಸಂಘಟನೆಗಳು ನಿರಂತರ ಹೋರಾಟದಲ್ಲಿ ತೊಡಗಿಸಿಕೊಂಡಿವೆ. ಆ ನಿಟ್ಟಿನಲ್ಲಿ ಎಲೆ ಮರೆಯಕಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವ ಅನೇಕ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನಿಸುತ್ತಿರುವುದು ಪ್ರಶಂಸನೀಯ” ಎಂದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೊಡಗು ಜಿಲ್ಲಾಧ್ಯಕ್ಷ ಹಾಗೂ ಸಂಗಮ ಟಿ.ವಿ. ಹಾಗೂ ವಂಶಿ ನ್ಯೂಸ್ ನ ಸಂಪಾದಕರಾದ ರಘು ಕೋಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ “ಕನ್ನಡ ಭಾಷೆ ಸಂಸ್ಕೃತಿ ಉಳಿವಿಗಾಗಿ ತೆರೆಮರೆಯಲ್ಲಿ ಶ್ರಮಿಸುವ ಕನ್ನಡದ ಕಟ್ಟಾಳುಗಳನ್ನು ಗುರುತಿಸಿ ಸನ್ಮಾನಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪ್ರಶಸ್ತಿ, ಪುರಸ್ಕಾರಗಳು ಲಾಭಿಗಳಾಗಬಾರದು, ಅದು ನಿಜವಾದ ಅರ್ಹರಿಗೆ ಲಭಿಸುವಂತಾಗಬೇಕು. ಆದ್ದರಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ” ಎಂದರು.


ಸಾಹಿತಿ ಉ.ರಾ. ನಾಗೇಶ್ರವರು ಮಾತನಾಡಿ “ರಂಗಭೂಮಿ. ಬಯಲಾಟ. ಹರಿಕಥೆ, ವಚನ ಸಾಹಿತ್ಯ, ದಾಸ ಸಾಹಿತ್ಯ, ಮುಂತಾದವುಗಳು ಭಾಷೆಯನ್ನು ಕಟ್ಟಿ ಸಮೃದ್ಧವಾಗಿ ಬೆಳೆಸುವಲ್ಲಿ ಆಮೂಲಾಗ್ರ ಕೊಡುಗೆಯನ್ನು ನೀಡಿವೆ. ಎಲ್ಲಿ ಭಾಷೆ ನಾಶವಾಗುತ್ತಾ ಹೋಗುವುದೋ ಅಲ್ಲಿ ಸಂಸ್ಕೃತಿ ವಿನಾಶದತ್ತ ಸಾಗುತ್ತದೆ. ಈ ನಿಟ್ಟಿನಲ್ಲಿ ಅನ್ಯ ಭಾಷೆಗಳಿಗೆ ಗೌರವ ನೀಡುವುದರೊಂದಿಗೆ ಮಾತೃ ಭಾಷೆ ಕನ್ನಡವನ್ನು ಬಳಸಿ ಉಳಿಸಿ ಬೆಳಸಬೇಕು” ಎಂದು ಸಲಹೆ ಇತ್ತರು.
ಕಾರ್ಯಕ್ರಮದಲ್ಲಿ ಮಹಿಳಾ ಆಟೋ ಚಾಲಕಿಯರು ಹಾಗೂ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಡುವೆ ಕಾವ್ಯ ವಾಚನ, ಶಾಲಾ ಮಕ್ಕಳ ನೃತ ಪ್ರದರ್ಶನ, ಶಾಲಾ ಮಕ್ಕಳಿಗೆ ಉಚಿತ ಬ್ಯಾಗು ವಿತರಣೆ ಮುಂತಾದ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ, ಕನ್ನಡದ ಕಿರುತೆರೆ ಕಲಾವಿದೆ ಎಚ್.ಎಂ. ಮೀನಾಕ್ಷಿ, ಮುಂಬೈನ ಉದ್ಯಮಿ ಸದಾಶಿವ ಬಿ.ಎನ್. ಶೆಟ್ಟಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಕೊಡಗು ಘಟಕದ ಉಪಾಧ್ಯಕ್ಷೆ ರಾಣಿ ರವೀಂದ್ರ, ಚಿರನಹಳ್ಳಿ ಮಂಜುನಾಥ್ ಹೆಚ್., ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡರ, ಬಣದ ಬಿ.ಎ. ದಿನೇಶ್ ಶೆಟ್ಟಿ, ವಿವಿಧ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು, ವಿವಿಧ ಶಾಲೆಯ ಶಿಕ್ಷಕರು ಮಕ್ಕಳು ಸಾರ್ವಜನಿಕರು, ಉಪಸ್ಥಿತರಿದ್ದರು.
