ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇದರ ಆಶ್ರಯದಲ್ಲಿ ಏರ್ಯ ಆಳ್ವ ಫೌಂಡೇಷನ್ ಮೊಡಂಕಾವು ಇದರ ಸಹಯೋಗದೊಂದಿಗೆ ಏರ್ಯ ಲಕ್ಷ್ಮೀ ನಾರಾಯಣ ಆಳ್ವರ ಶತಮಾನೋತ್ಸವದ ಪ್ರಯುಕ್ತ 3ನೇ ವರ್ಷದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ‘ವರ್ಣಾಂಜಲಿ’ ದಿನಾಂಕ 07 ಡಿಸೆಂಬರ್ 2025ರಂದು ಬೆಳಿಗ್ಗೆ 9-30ರಿಂದ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಉದ್ಘಾಟಿಸುವರು. ನಿವೃತ್ತ ಚಿತ್ರಕಲಾ ಶಿಕ್ಷಕ ಎಚ್.ಎನ್. ಹೆಬ್ಬಾರ್ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ 2-30ಕ್ಕೆ ಬಹುಮಾನ ವಿತರಣೆ ನಡೆಯಲಿದ್ದು, ಚಿತ್ರ ಕಲಾವಿದ ದಿನೇಶ್ ಹೊಳ್ಳ ಉಪಸ್ಥಿತರಿರುವರು. 4ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸಲು ಐಚ್ಚಿಕ ವಿಷಯ ನೀಡಲಾಗಿದ್ದು, 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಹಳ್ಳಿ ವ್ಯಾಪಾರ, 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ವಿಷಯ ನೀಡಲಾಗಿದೆ. ಭಾಗವಹಿಸುವ ವಿದ್ಯಾರ್ಥಿಗಳು ಅಂದು ಬೆಳಿಗ್ಗೆ 9-00 ಗಂಟೆಗೆ ಸರಿಯಾಗಿ ಶಾಲಾ ಗುರುತಿನ ಚೀಟಿಯೊಂದಿಗೆ ಹಾಜರಿರಬೇಕು. ಡ್ರಾಯಿಂಗ್ ಪೇಪರ್ ಹೊರತುಪಡಿಸಿ ಇತರ ಪರಿಕರಗಳನ್ನು ವಿದ್ಯಾರ್ಥಿಗಳೇ ತರಬೇಕು. ಸ್ಪರ್ಧಾ ಸಮಯ 2-00 ಗಂಟೆಯಾಗಿದ್ದು ಉಪಹಾರ ಹಾಗೂ ಭೋಜನದ ವ್ಯವಸ್ಥೆ ಇದೆ ಎಂದು ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ತಿಳಿಸಿದ್ದಾರೆ.


