ಮಂಗಳೂರು : ಅರೆಹೊಳೆ ಪ್ರತಿಷ್ಠಾನ, ನಂದಗೋಕುಲ, ಅಸ್ತಿತ್ವ (ರಿ.) ಮಂಗಳೂರು, ರಂಗಸಂಗಾತಿ ಮಂಗಳೂರು, ಕೆನರಾ ಕಲ್ಚರ್ ಅಕಾಡೆಮಿ ಮತ್ತು ರೂವಾರಿ. ಕಾಂ ಇವರ ಸಹಕಾರದೊಂದಿಗೆ ಆಯೋಜಿಸುತ್ತಿರುವ ‘ನೀನಾಸಂ ತಿರುಗಾಟ ನಾಟಕೋತ್ಸವ 2025’ವು ದಿನಾಂಕ 23 ಮತ್ತು 24 ಡಿಸೆಂಬರ್ 2025ರಂದು ಪ್ರತಿದಿನ ಸಂಜೆ ಗಂಟೆ 6-45ಕ್ಕೆ ಮಂಗಳೂರಿನ ಕೆನರಾ ಪದವಿಪೂರ್ವ ಕಾಲೇಜಿನ ಬಯಲು ರಂಗಮಂಟಪದಲ್ಲಿ ನಡೆಯಲಿದೆ.
ದಿನಾಂಕ 23 ಡಿಸೆಂಬರ್ 2025ರಂದು ಖ್ಯಾತ ಲೇಖಕಿ ಬಾನು ಮುಷ್ತಾಕ್ ಇವರ ಕತೆಯಾಧಾರಿಸಿ ಡಾ. ಎಂ. ಗಣೇಶ್ ನಿರ್ದೇಶಿಸಿದ ‘ಹೃದಯದ ತೀರ್ಪು’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 24 ಡಿಸೆಂಬರ್ 2025ರಂದು ಮಲೆಯಾಳ ಮೂಲ ಜಿ. ಶಂಕರ್ ಪಿಳ್ಳೈ ರಚಿಸಿದ, ಡಾ. ನಾ. ದಾಮೋದರ ಶೆಟ್ಟಿ ಕನ್ನಡಕ್ಕೆ ಅನುವಾದಿಸಿ, ಶಂಕರ್ ವೆಂಕಟೇಶ್ವರ್ ನಿರ್ದೇಶಿಸಿದ ‘ಅವತರಣಮ್ ಭ್ರಾಂತಾಲಯಂ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

ಎರಡೂ ವಿಭಿನ್ನ ನಾಟಕಗಳು ರಾಜ್ಯಾದ್ಯಂತ ಸಾಕಷ್ಟು ಸುದ್ದಿ ಮಾಡಿದ ರಂಗಪ್ರಯೋಗಗಳು.
‘ಹೃದಯದ ತೀರ್ಪು’ ನಾಟಕದಲ್ಲಿ ಒಂದು ಸಾಂಸಾರಿಕ ವೃತ್ತಾಂತವೇ ಚಿತ್ರಿತವಾಗಿದೆ. ಮುಖ್ಯವಾಗಿ ತಾಯಿ, ಮಗ, ಸೊಸೆ, ಊರವರ ಮಧ್ಯೆ ನಡೆಯುವ ತಲ್ಲಣಗಳು ಹಾಗೂ ಭಾವನಾತ್ಕಕ ಸನ್ನಿವೇಶಗಳಿಂದ ಕೂಡಿದ ಈ ನಾಟಕ ಮುಸ್ಲಿಂ ಸಮುದಾಯದ ಸಾಂಸ್ಕೃತಿಕ ಪರಿಸರದೊಳಗೇ ಸಾಗುತ್ತಿದ್ದರೂ ಆ ಎಲ್ಲೆಗಳನ್ನು ಮೀರಿ ಹೆಣ್ಣಿನ ಒಳ ನೋಟಗಳ ಮುಖಾಂತರ ಅನನ್ಯವಾದ ಮಾನವೀಯ ಬಿಕ್ಕಟ್ಟುಗಳನ್ನು ಚಿತ್ರಿಸುತ್ತಾ ಸಾಗುವ ಈ ರಂಗಪ್ರಸ್ತುತಿ ನೋಡುಗನ ಹೃದಯ ತಟ್ಟುತ್ತದೆ.
ಹುಚ್ಚಾಸ್ಪತ್ರೆಯ ರೋಗಿಗಳೇ ಸೇರಿ ಪ್ರಸ್ತುತಪಡಿಸುವ ನಾಟಕ ‘ಅವತರಣಮ್ ಭ್ರಾಂತಾಲಯಂ’. ಹಾಗಂತ ಇದು ಹುಚ್ಚರ ಕುರಿತ ನಾಟಕವಲ್ಲ. ಇಲ್ಲಿ ನಟರು ನಿರ್ದೇಶಕನಿಗೇ ಅರೆವಳಿಕೆ ಕೊಟ್ಟು ಮಲಗಿಸುತ್ತಾರಾಗಿ ರಂಗಭೂಮಿಯೇ ರಂಗಭೂಮಿಯ ನಿಯಂತ್ರಣದ ವಿರುದ್ಧ ಬಂಡೇಳುತ್ತದೆ. ನಟರ ಚುರುಕು ನಡೆಯ ಅಭಿನಯ, ವಿಡಂಬನಾತ್ಮಕ ಗಂಭೀರ ಮಾತುಗಳು ನಗುವಿನ ಬುಗ್ಗೆ ಎಬ್ಬಿಸುತ್ತದೆ. ರಂಗಭೂಮಿಯೆಂಬ ಬೃಹತ್ ಕನ್ನಡಿಯಲ್ಲಿ ನಮ್ಮನ್ನು ನಾವೇ ನೋಡಿಕೊಳ್ಳುವಂತೆ ಮಾಡುತ್ತದೆ.
