ಮಂಗಳೂರು : ಅಲೆವೂರಾಯ ಪ್ರತಿಷ್ಠಾನ ಮಂಗಳೂರು ಇದರ ವತಿಯಿಂದ ದಿನಾಂಕ 25 ಡಿಸೆಂಬರ್ 2025ರಂದು ಶ್ರೀಕ್ಷೇತ್ರ ಮಂಗಳಾದೇವಿಯಲ್ಲಿ ‘ಯಕ್ಷ ತ್ರಿವೇಣಿ’ ಮೂರು ದಿನಗಳ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ ಕಾರ್ಯಕ್ರಮವು ಉದ್ಘಾಟನೆಗೊಂಡಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳಾದೇವಿ ದೇವಸ್ಥಾನದಲ್ಲಿ ಶೀ ಕ್ಷೇತ್ರದ ಮೊಕ್ತೇಸರರಾದ ಶ್ರೀ ಆರುಣ್ ಕುಮಾರ್ ಐತಾಳರು ಮಾತನಾಡಿ “ಯಕ್ಷಗಾನದ ಬೇರೆ ಬೇರೆ ವಿಭಾಗದಲ್ಲಿ ಅನೇಕರು ದುಡಿಯುತ್ತಾ ಕಲಾಭಿವೃದ್ಧಿಗಾಗಿ ಶ್ರಮಿಸುತ್ತಾರೆ. ಆ ಸೇವೆಯಲ್ಲೇ ಸಾಧಕರಾಗಿ ಮಾಡಿಬರುತ್ತಾರೆ. ಅಂತಹವರನ್ನು ಹುಡುಕಿ ಗೌರವಿಸುವ ಸತ್ಕಾರ್ಯವನ್ನು ಸಮಾಜ ಮಾಡಬೇಕಿದೆ. ಇಂದು ಅಲೆವೂರಾಯ ಪ್ರತಿಷ್ಠಾನದಿಂದ ಕಲಾಸಾಧಕ ಶ್ರವಣ್ ಕಾರಂತರನ್ನು ಸನ್ಮಾನಿಸುತ್ತಿರುವುದು ಸತ್ಕಾರ್ಯ. ಹಿರಿಯರ ನೆನಪಲ್ಲಿ ನಡೆವ ಕಾರ್ಯಕ್ಕೆ ದೇವರ ಅನುಗ್ರಹವೂ ಇದೆ” ಎಂದು ಹೇಳಿದರು.

ಅಲೆವೂರಾಯ ಪ್ರತಿಷ್ಠಾನದ ವಿಶ್ವಸ್ಥರಾದ ವರ್ಕಾಡಿ ರವಿ ಅಲೆವೂರಾಯರು ಒಂಭತ್ತು ವರ್ಷಗಳಿಂದ ನಡೆದು ಬಂದ ಪ್ರತಿಷ್ಠಾನದ ಬಗ್ಗೆ ಪ್ರಸ್ತಾಪಿಸಿ ಸ್ವಾಗತಿಸಿದರು. ಯಕ್ಷ ಸಾಧಕರು ಸರಣಿ ಖ್ಯಾತಿಯ ಶ್ರವಣ್ ಕಾರಂತ ಶಕ್ತಿ ನಗರ ಇವರನ್ನು ಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು. ಅಧ್ಯಾಪಕ ನಾಗರಾಜ ಖಾರ್ವಿಯವರು ಸನ್ಮಾನ ಪತ್ರ ವಾಚಿಸಿದರು. ನಿವೃತ್ತ ಅಧ್ಯಾಪಿಕೆ ಸುಭದ್ರಾ ದೇವಿ, ನ್ಯಾಯವಾದಿ ಗೋಪಾಲಕೃಷ್ಣ ಭಟ್, ವೇಣು ಮಾಂಬಾಡಿ, ಪ್ರತೀಕ್ ರಾವ್ ಉಪಸ್ಥಿತರಿದ್ದರು. ಸುಧಾಕರ ರಾವ್ ಪೇಜಾವರರು ನಿರ್ವಹಿಸಿ, ವಿಶ್ವಸ್ಥ ಮಧುಸೂದನ ಅಲೆವೂರಾಯ ವಂದಿಸಿದರು.

