ಮಂಗಳೂರು : ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಉರ್ವಸ್ಟೋರ್ ಶ್ರೀಮಹಾಗಣಪತಿ ದೇವಸ್ಥಾನದ ಸಹಯೋಗದಲ್ಲಿ ದಿನಾಂಕ 25 ಡಿಸೆಂಬರ್ 2025ರಂದು ಉರ್ವಸ್ಟೋರ್ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಆಯೋಜಸಿದ್ದ ಶೇಣಿ ಸಂಸ್ಮರಣೆ, ಪ್ರಶಸ್ತಿ ಪ್ರದಾನ-2025 ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಅರ್ಥದಾರಿ, ಪ್ರವಚನಕಾರ ಮೂಡಂಬೈಲು ಗೋಪಾಲಕೃಷ್ಣ ಶಾಸ್ತಿ “ತಾಳಮದ್ದಳೆಯಲ್ಲಿ ಸ್ತ್ರೀ ಪಾತ್ರಗಳನ್ನು ಗೆಲ್ಲಿಸಬೇಕೆಂದು ಸದಾ ಬಯಸಿದೆ. ಅಂಥಹ ಪಾತ್ರಗಳ ಬಗ್ಗೆ ಅಧ್ಯಯನ ಮಾಡಿ, ಅವುಗಳಿಗೆ ಗೌರವ ಸಿಗುವಂತೆ ಮಾಡಲು ಪ್ರಯತ್ನಿಸಿದೆ. ಶೇಣಿ, ಪೆರ್ಲ, ಸಾಮಗದ್ವಯರು ಸೇರಿದಂತೆ ಹಿರಿಯರು ನನ್ನ ಪ್ರಯತ್ನವನ್ನು ಮೆಚ್ಚಿದರು. ಶೇಣಿ ನನ್ನ ಪರೋಕ್ಷ ಗುರುಗಳು. ಅವರ ಜತೆ ವೇದಿಕೆಯಲ್ಲಿ ಒಡನಾಟ ನನ್ನ ಅಧ್ಯಯನಶೀಲತೆ ಹೆಚ್ಚಿಸಿತು. ನನ್ನ ಜನ್ಮದಿನದಂದೇ ಶೇಣಿ ಪ್ರಶಸ್ತಿ ಲಭಿಸಿದೆ. ಹಿಂದೆ ಜನ್ಮದಿನದಂದೇ ಪೆರ್ಲ ಪ್ರಶಸ್ತಿಯೂ ಲಭಿಸಿತ್ತು. ಇದು ನನ್ನ ಪುಣ್ಯ” ಎಂದು ಹೇಳಿದರು.


ಟ್ರಸ್ಟ್ ಅಧ್ಯಕ್ಷರಾದ ಹರಿದಾಸ ಕೆ. ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಗೌರವಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಶುಭಾಶಂಸನೆ ಮಾಡಿದರು. ಟ್ರಸ್ಟ್ ಉಪಾಧ್ಯಕ್ಷ ಜಿ.ಕೆ. ಭಟ್ ಸೇರಾಜೆ ಶೇಣಿ ಸಂಸ್ಮರಣೆ ಹಾಗೂ ಮೂಡಂಬೈಲು ಅಭಿನಂದನಾ ನುಡಿಗಳನ್ನಾಡಿದರು. ಉರ್ವಸ್ಟೋರ್ ಶ್ರೀಮಹಾಗಣಪತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್, ಕಾರ್ಯದರ್ಶಿ ಶ್ರೀಧರ ಮಣಿಯಾಣಿ, ಸಿ.ಎ. ಶ್ಯಾಮ ಭಟ್, ಉದ್ಯಮಿ ಶಿವಪ್ರಸಾದ್ ಪ್ರಭು ಉಪಸ್ಥಿತರಿದ್ದರು.

ಶೇಣಿ ಟ್ರಸ್ಟಿನ ಹಿರಿಯ ಸದಸ್ಯ ಬೆಟ್ಟಂಪಾಡಿ ಸುಂದರ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಶೇಣಿ ಬಾಲಮುರಳಿಕೃಷ್ಣ ವಂದಿಸಿ, ಟ್ರಸ್ಟಿನ ಕಾನೂನು ಸಲಹೆಗಾರ ಎಂ. ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮುನ್ನ ಹರಿದಾಸ ಮಂಜುಳಾ ಇರಾ ಮತ್ತು ಬಳಗದಿಂದ ಹರಿಕಥೆ ಜರುಗಿತು.

