ಬೆಂಗಳೂರು : ಕನ್ನಡ ಕವಯತ್ರಿ, ಬರಹಗಾರ್ತಿ ಸರಿತಾ ಜ್ಞಾನಾನಂದ ಇವರು ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಆರ್.ಆರ್. ನಗರದ ಖಾಸಗಿ ಆಸ್ಪತ್ರೆಯಲ್ಲಿ ದಿನಾಂಕ 26 ಡಿಸೆಂಬರ್ 2025ರಂದು ನಿಧನರಾಗಿದ್ದಾರೆ. ಲೇಖಕಿ, ಅನುವಾದಕಿಯಾಗಿದ್ದ ಸರಿತಾ ಇವರು ವಿವಿಧ ಭಾಷೆಗಳ ಪ್ರಸಿದ್ಧರ ಕಥೆ, ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು. ಇವರು ಹಿಂದಿಯಲ್ಲಿ ರಾಷ್ಟ್ರಭಾಷಾ ಪ್ರವೀಣರಾಗಿರುವುದಲ್ಲದೇ ಕನ್ನಡ, ಇಂಗ್ಲೀಷ್, ತೆಲುಗು, ತಮಿಳು, ಮರಾಠಿ, ಮಲಯಾಳಂ ಹಾಗೂ ಸಂಸ್ಕೃತ ಭಾಷೆಗಳಲ್ಲಿಯೂ ಪ್ರಾವೀಣ್ಯತೆ ಸಾಧಿಸಿದ್ದರು.
ಸರಿತಾ ಜ್ಞಾನಾನಂದ ಮೂಲತಃ ಬೆಂಗಳೂರಿನವರು. ತಂದೆ ಎನ್.ಆರ್. ನಂಜುಂಡಸ್ವಾಮಿ, ತಾಯಿ ಸುಬ್ಬಮ್ಮ. 21 ಜನವರಿ 1943ರಲ್ಲಿ ಜನಿಸಿದ ಇವರು ಮ್ಯೆಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಮತ್ತು ಬಿ.ಎಡ್. ಹಾಗೂ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಎಂ.ಎಡ್. ಪದವಿಗಳನ್ನು ಪಡೆದಿದ್ದರು. ಸರಿತಾ ಇವರು ಬೆಂಗಳೂರು ಹಾಗೂ ಕೆ.ಜಿ.ಎಫ್.ಗಳಲ್ಲಿ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ್ದರು. ‘ಒಂದೂರಲ್ಲಿ ಒಬ್ಬ ನಿರ್ಮಲಾ’, ‘ಬೆಂಕಿ ಹೂ’, ‘ಪರಿಪೂರ್ಣ’, ‘ಒಲಿದರೆ ನಾರಿ’ ಸೇರಿ ಹಲವು ಕಾದಂಬರಿ ರಚಿಸಿದ್ದಾರೆ. ಸುಮಾರು 300ಕ್ಕೂ ಹೆಚ್ಚು ಸಣ್ಣ ಕಥೆಗಳನ್ನು ರಚಿಸಿದ್ದು, ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಕನ್ನಡ ಸಾಹಿತ್ಯ ಪರಿಷತ್ತು, ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಣೆಯ ಭಾರತ-ಭಾರತಿ ಪುಸ್ತಕ ಮಾಲೆಗಾಗಿ, ಮೀರಾಬಾಯಿ, ಅಶ್ವಘೋಷ, ಗಡಿಯಾರ, ಮಿದುಳು, ಕಣ್ಣು ಮುಂತಾದ ಹಲವಾರು ಮಕ್ಕಳ ಪುಸ್ತಕಗಳನ್ನೂ ರಚಿಸಿದ್ದಾರೆ. ಸಂಪಾದಿತ ಕೃತಿಗಳಲ್ಲಿ ಶರಭಾಂಕಲಿಂಗ ಶತಕಮು, ಡಾ. ಬಾ.ರಾ. ಗೋಪಾಲ್ ಇವರ ಕನ್ನಡ ಲೇಖನಗಳು, ಆಚಾರ್ಯೃ ಶ್ರೀ ಆಚಾರ್ಯಾಿಭಿವಂದನೆ, ಜಕ್ಕಣಾಚಾರ್ಯಿ ಮುಂತಾದವು ಪ್ರಮುಖವಾದವುಗಳು. ಯಂಡಮೂರಿ ವೀರೇಂದ್ರನಾಥ್, ಸೂರ್ಯ್ದೇವರ ರಾಮಮೋಹನರಾವ್, ಡಾ. ಕೊಂಡೂರು ವೀರರಾಘವಾಚಾರ್ಯಲು, ಬಲಿವಾಡ ಕಾಂತರಾವ್, ಮಲ್ಲಾದಿ ವೆಂಕಟ ಕೃಷ್ಣಮೂರ್ತಿ, ಡಾ. ಸಮರಂ ಮುಂತಾದ ತೆಲುಗು ಲೇಖಕರು, ತಮಿಳಿನ ಶಿವ ಶಂಕರಿ, ನಾರಾಯಣದತ್ತ ಶ್ರೀಮಾಲಿಯವರ ಹಿಂದಿ, ರಾಮ ಮೊಹಮದ್ ಡಿಸೌಜರವರ ಉರ್ದು ಮತ್ತು ಮರಾಠಿ ಭಾಷೆಗಳಿಂದ ಸುಮಾರು 50ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಸಂಗೀತದಲ್ಲಿ ಕೂಡ ಸಾಧನೆ ಮಾಡಿರುವ ಸರಿತಾ ಜ್ಞಾನಾನಂದರು ‘ನೀಗಿಕೊಂಡ ಸಂಸ’, ‘ಜುಂನಾಳ ‘ಧೂಳ್ಯನ ಪ್ರಸಂಗ’, ‘ಸಂಗ್ಯಾ ಬಾಳ್ಯ’, ‘ಜೋಕುಮಾರ ಸ್ವಾಮಿ’ ‘ಸಖೀಗೀತ’, ಬೆನಕನ ಕೆರೆ’ ಮುಂತಾದ ಅನೇಕ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ಸಂಗೀತ ಮತ್ತು ನೃತ್ಯಗಳಲ್ಲಿ ತರಬೇತಿ ನೀಡಿದ್ದಾರೆ. ತಮ್ಮ ಸಂಗೀತದಲ್ಲಿ ಅನೇಕ ಧ್ವನಿಸುರುಳಿಗಳನ್ನೂ ಬಿಡುಗಡೆ ಮಾಡಿದ್ದಾರೆ. ಸರಿತಾ ಜ್ಞಾನಾನಂದರು ಕೆ.ಜಿ.ಎಫ್.ನಲ್ಲಿ ಕನ್ನಡೇತರರಿಗೆ ಕನ್ನಡ ತರಗತಿಗಳನ್ನು ನಡೆಸಿ ಅನೇಕ ಇತರ ಭಾಷಿಗರಿಗೆ ಕನ್ನಡ ಭಾಷೆಯನ್ನು ಕಲಿಸಿದ್ದಾರೆ.
