ಬೆಂಗಳೂರು : ಕರ್ನಾಟಕ ಜಾನಪದ ಅಕಾಡೆಮಿಯು 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದ್ದು, ತುಮಕೂರಿನ ಜಾನಪದ ವಿದ್ವಾಂಸರಾದ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ ಇವರು ‘ಡಾ. ಜೀ.ಶಂ.ಪ. ತಜ್ಞ ಪ್ರಶಸ್ತಿ’ ಹಾಗೂ ಕಲಬುರಗಿಯ ಡಾ. ಎಚ್.ಟಿ. ಪೋತೆ ಇವರು ‘ಡಾ. ಬಿ.ಎಸ್. ಗದ್ದಗಿಮಠ ತಜ್ಞ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಹಾಗೂ ರಿಜಿಸ್ಟ್ರಾರ್ ಎನ್. ನಮ್ರತಾ ಇವರು ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ‘ಜಾನಪದ ತಜ್ಞ ಪ್ರಶಸ್ತಿ’ಯು ತಲಾ ರೂ.50,000/- ನಗದು ಒಳಗೊಂಡಿದೆ. ‘ವಾರ್ಷಿಕ ಗೌರವ ಪ್ರಶಸ್ತಿ’ಗೆ 31 ಜಿಲ್ಲೆಗಳಿಂದ 30 ಕಲಾವಿದರನ್ನು ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿಯು ತಲಾ ರೂ.25,000/- ನಗದು ಒಳಗೊಂಡಿದೆ. ಪ್ರಶಸ್ತಿ ಮೊತ್ತದ ಜತೆಗೆ ಸ್ಮರಣಿಕೆ, ಶಾಲು, ಹಾರ, ಫಲತಾಂಬೂಲ ನೀಡಿ ಗೌರವಿಸಲಾಗುವುದು.
ಗೌರವ ಪ್ರಶಸ್ತಿಗೆ ಬೆಂಗಳೂರಿನ ಸಿದ್ದರಾಜು (ನೀಲಗಾರರ ಪದ ಮತ್ತು ತಂಬೂರಿ ಪದ), ಬೆಂಗಳೂರು ಗ್ರಾಮಾಂತರದ ಬಚ್ಚಮ್ಮ (ಸೋಬಾನೆ ಪದ, ತತ್ವಪದ, ಸಂಪ್ರದಾಯ ಪದ), ರಾಮನಗರದ ಬಿ. ಸಿದ್ದರಾಜಯ್ಯ (ಜಾನಪದ ಗಾಯನ), ಕೋಲಾರದ ಸೀತಮ್ಮ (ತತ್ವಪದ), ಚಿಕ್ಕಬಳ್ಳಾಪುರದ ಕೆ.ಎಂ. ನಾರಾಯಣ ಸ್ವಾಮಿ (ಕೀಲು ಕುದುರೆ), ತುಮಕೂರಿನ ರೇವಣ್ಣ (ಅಲಗು ಕುಣಿತ), ದಾವಣಗೆರೆಯ ಜಿ. ಪರಮೇಶ್ವರಪ್ಪ ಕತ್ತಿಗೆ (ತತ್ವಪದ), ಚಿತ್ರದುರ್ಗದ ಜಿ.ಎನ್. ವಿರೂಪಾಕ್ಷಪ್ಪ (ಜಾನಪದ ಸಂಗೀತ), ಶಿವಮೊಗ್ಗದ ಕೆ.ಎಸ್. ಲಿಂಗಪ್ಪ (ಅಂಟಿಕೆ ಪಂಟಿಕ), ಮೈಸೂರಿನ ಚನ್ನಾಜಮ್ಮ (ಸೋಬಾನೆ ಪದ ಮತ್ತು ಜಾನಪದ ಗಾಯನ) ಮಂಡ್ಯದ ಹೊನ್ನಯ್ಯ (ಕೋಲಾಟ), ಹಾಸನದ ಯೋಗೇಂದ್ರ ದುದ್ದ (ಗೀಗೀ ಪದ, ಲಾವಣಿ, ತತ್ವಪದ ಮತ್ತು ಭಜನೆ), ಚಿಕ್ಕಮಗಳೂರಿನ ಎಚ್.ಎಂ. ರವಿ (ವೀರಗಾಸೆ), ಚಾಮರಾಜ ನಗರದ ಬಸವರಾಜು ಯರಕನಗದ್ದೆ (ಗೊರುಕನ ನೃತ್ಯ), ದಕ್ಷಿಣ ಕನ್ನಡದ ಸುಮತಿ ಕೊರಗ (ಕೊರಗರ ಡೋಲು), ಉಡುಪಿಯ ಗುಲಾಬಿ ಗೌಡ್ತಿ (ನಾಟಿ ವೈದ್ಯ), ಕೊಡಗಿನ ಅಮ್ಮಣಿ (ಸೂಲಗಿತ್ತಿ, ಕುಡಿಯ ಜನಾಂಗದ ಹಾಡುಗಾರಿಕೆ), ಬೆಳಗಾವಿಯ ಭೀಮಪ್ಪ ಸಿದ್ಧಪ್ಪ ಮುತ್ನಾಳ್ (ಪುರವಂತಿಕೆ), ಧಾರವಾಡದ ಪ್ರಕಾಶ ಮಲ್ಲಿಗವಾಡ (ಜಾನಪದ ನೃತ್ಯ), ವಿಜಯಪುರದ ಜ್ಯೋತಿರ್ಲಿಂಗ ಹೊನಕಟ್ಟಿ (ಜಾನಪದ ಗಾಯನ), ಬಾಗಲಕೋಟೆಯ ಚಂದ್ರಲಿಂಗಪ್ಪ ನಿಂಗಪ್ಪ ಬಸರಕೋಡ (ಪುರವಂತಿಕೆ), ಉತ್ತರ ಕನ್ನಡದ ಗೌರಿ ನಾಗಪ್ಪ ನಾಯ್ಕ (ಸುಗ್ಗಿ ಹಾಡುಗಳು, ಜಾನಪದ ಕಥೆ, ಸಂಪ್ರದಾಯದ ಪದಗಳು), ಹಾವೇರಿಯ ಭಿಕ್ಷಾಪತಿ ಮೋತಿ (ಹಗಲುವೇಷ), ಗದಗದ ಕಾಶೀಮಸಾಬ ಹುಸೇನಸಾಬ (ಹೆಜ್ಜೆ ಮೇಳ), ಕಲಬುರಗಿಯ ಭಾಗಪ್ಪ (ತತ್ವಪದ), ಬೀದರ್ನ ಇಂದ್ರಮ್ಮ (ಮೋಹರಂ ಪದ), ರಾಯಚೂರಿನ ಯಂಕನಗೌಡ (ತತ್ವಪದ), ಕೊಪ್ಪಳದ ರಾಮಣ್ಣ (ಹಗಲು ವೇಷ), ವಿಜಯನಗರದ ಕಿಂಡ್ರಿ ಲಕ್ಷ್ಮೀಪತಿ (ಸುಡುಗಾಡು ಸಿದ್ದರು) ಹಾಗೂ ಯಾದಗಿರಿಯ ಹಣಮಂತ (ತತ್ವಪದ).
ಜಾನಪದ ಅಕಾಡೆಮಿಯು 2024ನೇ ಸಾಲಿನ ಪುಸ್ತಕ ಬಹುಮಾನವನ್ನೂ ಘೋಷಿಸಿದ್ದು, ಬೆಂಗಳೂರಿನ ಡಾ. ವೀರಾಸಾಬಿಹಳ್ಳಿ ಶಿವಣ್ಣ ಇವರ ‘ಕಾಡುಗೊಲ್ಲರ ಸಂಸ್ಕೃತಿ ಮತ್ತು ಕಾವ್ಯಗಳು’ ವಿಚಾರ ವಿಮರ್ಶಾ ಕೃತಿ ಹಾಗೂ ಕೂಡ್ಲಗಿಯ ಡಾ. ಇಮಾಮ್ ಸಾಹೇಬ್ ಹಡಗಲಿ ಇವರ ‘ಕನಕಗಿರಿ ಸೀಮೆಯ ಸ್ಥಳನಾಮಗಳು’ ಸಂಶೋಧನಾ ಕೃತಿ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ. ಈ ಬಹುಮಾನವು ತಲಾ ರೂ.25,000/- ನಗದು ಒಳಗೊಂಡಿದೆ.
