ಬಂಟ್ವಾಳ : ಡಾ. ಗೀತಾ ಎನ್. ಇವರ ‘ಹಕ್ಕಿಮರಿ ಮತ್ತು ಇತರ ಕಿಶೋರ ಗೀತೆಗಳು’ ಕವನಸಂಕಲನ ಲೋಕಾರ್ಪಣಾ ಕಾರ್ಯಕ್ರಮವು ದಿನಾಂಕ 13 ಜನವರಿ 2026ರಂದು ಬಿ.ಸಿ.ರೋಡಿನ ಕೈಕುಂಜೆ ರಸ್ತೆಯಲ್ಲಿರುವ ಕನ್ನಡ ಭವನದಲ್ಲಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅಧ್ಯಕ್ಷತೆ ವಹಿಸಿದ್ದರು.
ಪಾಣೆಮಂಗಳೂರು ಶಾರದಾ ಪ್ರೌಢ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಪರಮೇಶ್ವರ ಜಿ. ಹೆಗಡೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, “ಗೀತಾ ಎನ್. ಅವರು ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡು, ಛಂದೋಬದ್ಧ ಕವನಗಳನ್ನು ಷಟ್ಟದಿಗಳನ್ನು ಬರೆದಿರುವುದಲ್ಲದೆ, ಕಿಶೋರ ಗೀತೆಗಳನ್ನು ಪ್ರಕಟಿಸಿರುವುದು ಶ್ಲಾಘನೀಯ” ಎಂದರು.
ಅತಿಥಿಯಾಗಿದ್ದ ಉಪನ್ಯಾಸಕ ವಿಶ್ವನಾಥ್ ಶುಭ ಹಾರೈಸಿದರು. ಕೃತಿ ಕುರಿತು ಮುನ್ನುಡಿ ಬರೆದಿರುವ ಆಂಗ್ಲ ಭಾಷಾ ಉಪನ್ಯಾಸಕ, ಸಾಹಿತಿ ರಾಧೇಶ ತೋಳ್ತಾಡಿ ಮಾತನಾಡಿ, “ಮಕ್ಕಳ ಕವಿತೆಗೆ ವಿಶೇಷ ಸ್ಥಾನಮಾನಗಳಿದ್ದು, ಮಕ್ಕಳ ಜೊತೆ ಹೆಚ್ಚು ಒಡನಾಡುವ ಮಹಿಳೆಯರ ದನಿ ಮಕ್ಕಳ ಕವಿತೆಗಳ ಕ್ಷೇತ್ರದಲ್ಲಿ ವಿರಳವಾಗುತ್ತಿರುವ ಹೊತ್ತಿನಲ್ಲಿ ಡಾ. ಗೀತಾ ಎನ್. ಅವರ ಕೃತಿ ಬಂದದ್ದು ಸಂತಸದ ಸಂಗತಿ. ತಾಯಿ ಮಮತೆಯಿಂದ ಇಡಿ ಲೋಕವನ್ನು ತನ್ನ ಮಗುವೆಂಬಂತೆ ನೋಡುವ ಡಾ. ಗೀತಾ ಎನ್. ಅವರ ಪಕ್ವ ಮನದಿಂದ ಇಲ್ಲಿ ಅಕ್ಕರೆಯ ಸಾಲುಗಳು ಮೂಡಿಬಂದಿವೆ” ಎಂದರು.
ಪವಿತ್ರಾ ಮಯ್ಯ ಬಳಗದವರಿಂದ ಭಾವಗೀತೆ ಮತ್ತು ಕಿಶೋರ ಗೀತೆಗಳ ಗಾಯನ ನಡೆಯಿತು. ಪಾಣೆಮಂಗಳೂರು ಬೊಂಡಾಲ ಪರ್ಲಮಜಲಿನ ಶ್ರೀ ದುರ್ಗಾ ಕಲಾರಾಧನಾ ಬಳಗದಿಂದ ಲೇಖಕಿಯನ್ನು ಸನ್ಮಾನಿಸಲಾಯಿತು. ಮಾಧವರಾವ್ ಎನ್. ಸ್ವಾಗತಿಸಿ, ಭಾಸ್ಕರ ರಾವ್ ಪರ್ಲಮಜಲು ವಂದಿಸಿ, ಹೇಮಾ ರವಿಚಂದ್ರ ಮಯ್ಯ ಪಾಣೆಮಂಗಳೂರು ನಿರೂಪಿಸಿದರು.

