ಮಂಗಳೂರು : ವಿಶ್ವ ಕೊಂಕಣಿ ಕೇಂದ್ರದ ಆಶ್ರಯದಲ್ಲಿ ವಿಶ್ವ ಕೊಂಕಣಿ ನಾಟಕ ಮಹೋತ್ಸವ ಹಾಗೂ ಪ್ರತಿಷ್ಠಿತ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಹಾಗೂ ಅನುವಾದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 01 ಫೆಬ್ರವರಿ 2026ರಂದು ಕೊಡಿಯಾಲ್ ಬೈಲ್ ನ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ನಡೆಯಿತು.
ಕೊಂಕಣಿಯ ಹಿರಿಯ ರಂಗಕರ್ಮಿ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಇವರಿಗೆ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಠ ಪ್ರಶಸ್ತಿ ಹಾಗೂ ಹಿರಿಯ ಕೊಂಕಣಿ ಅನುವಾದಕಿ ಮಾಯಾ ಅನಿಲ್ ಖರಂಗಟೆ ಇವರಿಗೆ ಡಾ. ಪಿ. ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಫಲಕ ಸೇರಿದಂತೆ ತಲಾ ರೂ. ಒಂದು ಲಕ್ಷ ನಗದು ಒಳಗೊಂಡಿದೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಅವರು, “ನಾಟಕ ರಂಗದಲ್ಲಿ ಪ್ರೇಕ್ಷಕರಿಗೆ ಮನೋರಂಜನೆ ಸಿಗುತ್ತದೆ. ಆದರೆ, ಕಲಾವಿದರು ಹಾಗೂ ಬರಹಗಾರರು ಅನೇಕ ಸವಾಲು, ಸಂಕಷ್ಟಗಳನ್ನು ಎದುರಿಸುತ್ತಾರೆ. ವಿಶ್ವ ಕೊಂಕಣಿ ಕೇಂದ್ರ ಈ ಪ್ರಶಸ್ತಿ ನೀಡಿರುವುದು ನನಗೆ ಅಭಿಮಾನದ ವಿಚಾರ” ಎಂದರು. ಮಾಯಾ ಅನಿಲ್ ಖರಂಗಟೆ ಮಾತನಾಡಿ, “ನಾನು 50 ವರ್ಷಗಳಿಂದ ವಿವಿಧ ಸಾಹಿತ್ಯಗಳನ್ನು ಬರೆಯುತ್ತಿದ್ದೇನೆ. ಅನೇಕ ಪುರಸ್ಕಾರಗಳು ಸಿಕ್ಕಿವೆ. ಆದರೆ ಈ ಪ್ರಶಸ್ತಿ ಖುಷಿ ನೀಡಿದೆ” ಎಂದರು.

ಡಾ. ಪಿ. ದಯಾನಂದ ಪೈ ಅವರು ವೀಡಿಯೋ ಮೂಲಕ ಸಂದೇಶ ನೀಡಿ, “ವಿಶ್ವ ಕೊಂಕಣಿ ಕೇಂದ್ರದ ಎಲ್ಲ ಕೆಲಸ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇನೆ” ಎಂದರು. ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ನಂದಗೋಪಾಲ ಶೆಣೈ ಸ್ವಾಗತಿಸಿ, ಡಾ. ಕಸ್ತೂರಿ ಮೋಹನ್ ಪೈ ವಂದಿಸಿದರು. ಡಾ. ವಿಜಯಲಕ್ಷ್ಮೀ ನಾಯಕ, ಚೇತನಾ ನಾಯಕ್ ನಿರೂಪಿಸಿದರು. ಬಿ.ಆರ್. ಭಟ್, ರಮೇಶ್ ನಾಯಕ ಮೈರಾ, ವಿಲಿಯಂ ಡಿ’ಸೋಜಾ, ಪ್ರಶಾಂತ್ ಶೇಟ್, ಶಕುಂತಲಾ ಕಿಣಿ, ನಾರಾಯಣ ನಾಯ್ಕ್, ಗಿಲ್ಬರ್ಟ್ ಡಿ’ಸೋಜಾ, ಡಾ. ದೇವದಾಸ್ ಪೈ ಮೊದಲಾದವರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಗೋವಾದ ನಟರಂಗ ಕ್ರಿಯೇಷನ್ಸ್ ತಂಡದ ‘ಹೆಡೋನಿಸ್ಟ್’ ಕೊಂಕಣಿ ನಾಟಕವು ಪ್ರದರ್ಶನ ಹಾಗೂ ಕೊಲ್ಯದ ನಾಟ್ಯ ನಿಕೇತನ ವತಿಯಿಂದ ಕರ್ನಾಟಕ ಕಲಾಶ್ರೀ ಗುರು ರಾಜಶ್ರೀ ಉಳ್ಳಾಲ ಇವರ ತಂಡದವರಿಂದ ‘ಪಾರಿಜಾತ ಫೂಲ್’ ಗೀತ ನೃತ್ಯ ನಾಟಕವೂ ಪ್ರದರ್ಶನಗೊಂಡಿತು.
