ಉಪ್ಪಿನಂಗಡಿ : ಕಾಂಚನ ಲಕ್ಷ್ಮೀ ನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ಸಂಗೀತ ರತ್ನ ವಿ. ಕಾಂಚನ ವೆಂಕಟಸುಬ್ರಹ್ಮಣ್ಯಂ ಇವರ 105ನೇ ಜನ್ಮವರ್ಷ ಮಹೋತ್ಸವ ಹಾಗೂ 72ನೇ ವರ್ಷದ ‘ಕಾಂಚನೋತ್ಸವ-2026’ ಇದರ ಸಮಾರೋಪ ಸಮಾರಂಭವು ದಿನಾಂಕ 07 ಫೆಬ್ರವರಿ 2026ರಂದು ನಡೆಯಿತು.
ಈ ಸಮಾರಂಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ “ಪ್ರೀತಿ, ವಿಶ್ವಾಸ, ಸಂಸ್ಕೃತಿ, ಸಂಸ್ಕಾರದೊಂದಿಗೆ ಸಂಗೀತ ಮತ್ತು ದೇವತಾರಾಧನೆಯನ್ನು ಕಾಂಚನ ಕುಟುಂಬ ಮೈಗೂಡಿಸಿಕೊಂಡಿದೆ. ಸಂಗೀತಕ್ಕಾಗಿ ಈ ಕುಟುಂಬ ಎಲ್ಲವನ್ನೂ ಧಾರೆ ಎರೆದಿದೆ. ಹೀಗಾಗಿ ಕಾಂಚನ ಎಂಬ ಪುಟ್ಟ ಹಳ್ಳಿ ಇಂದು ದೇಶದಾದ್ಯಂತ ಪರಿಚಿತವಾಗಿದೆ” ಎಂದು ಹೇಳಿದರು.
ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಮಾತನಾಡಿ, “ದೇಶದ ಶ್ರೇಷ್ಠ ಪೀಟೀಲು ವಾದಕ ಎಲ್. ಸುಬಹ್ಮಣ್ಯಂ ಅವರಂತೆ ಆಗಬಹುದಾದ ನೂರಾರು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಅವರಿಗೆ ಪ್ರೇರಣೆ, ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ನಾವುಗಳು ಕಾಂಚನ ಕುಟುಂಬದ ಸಂಗೀತ ಪರಂಪರೆಯನ್ನು ಉಳಿಸಿಕೊಳ್ಳಲು ಕೈಜೋಡಿಸಬೇಕಾಗಿದೆ” ಎಂದರು. ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆ ವಹಿಸಿ ಮಾತನಾಡಿ, “ಇಂತಹ ಸಂಸ್ಕಾರ, ಸಂಸ್ಕೃತಿಯ ಸೇವೆಯನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದರು.

ದಿಲ್ಲಿಯ ಸಂಸದೆ ಬಾನ್ಸುರಿ ಸ್ವರಾಜ್ ಇವರು ಪದ್ಮವಿಭೂಷಣ ಎಲ್. ಸುಬಹ್ಮಣ್ಯಂ ಅವರ ಪರವಾಗಿ ಪದ್ಮಶ್ರೀ ಕವಿತಾ ಕೃಷ್ಣಮೂರ್ತಿ ಸುಬ್ರಹ್ಮಣ್ಯಂ ಇವರಿಗೆ ‘ಕಾಂಚನಶ್ರೀ ಪ್ರಶಸ್ತಿ’ಯನ್ನು ಪ್ರಧಾನ ಮಾಡಿದರು. ಕಾಂಚನ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಕಾರ್ಯದರ್ಶಿ ಕೆ. ರೋಹಿಣಿ ಸುಬ್ಬರತ್ನಂ, ಕಾಂಚನ ಕುಟುಂಬ ಸದಸ್ಯರಾದ ವಕೀಲ ರಾಜಶೇಖರ್ ಹಿಲ್ಯಾರು, ಕೆ.ಯು. ಜಯಚಂದ್ರ ರಾವ್ ಮಾತನಾಡಿದರು.

ಬಜತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ ನೆಕ್ಕರಾಜೆ, ಪದ್ಮನಾಭ ತಂತ್ರಿ, ನಿತ್ಯಾನಂದ ರಾವ್, ಸಂಜಯ್ ಬೆಂಗಳೂರು, ಸ್ಥಳೀಯ ಪ್ರಮುಖರಾದ ಸುನಿಲ್ ಕುಮಾರ್ ದಡ್ಡು, ಅರುಣ್ ಶ್ಯಾಂ, ವಿದ್ಯಾಧರ ಜೈನ್, ಶ್ರೀಧರ ಗೌಡ ನಡ್ಪ, ಮುಕುಂದ ಗೌಡ, ಸದಾನಂದ ನೆಕ್ಕಿಲಾಡಿ, ಕಾಂಚನ ಸಹೋದರಿಯರಾದ ಕಾಂಚನ ಶ್ರೀರಂಜಿನಿ, ಕಾಂಚನ ಶ್ರುತಿರಂಜಿನಿ, ಕಾಂಚನ ಸುಮನಸರಂಜಿನಿ ಭಾಗವಹಿಸಿದ್ದರು.

ಬೆಳಗ್ಗೆ ಕಾಂಚನ ಮನೆಯಿಂದ ಸಂಗೀತ ಶಾಲೆಯ ತನಕ ಸಂಗೀತ ಸಂತ ಶ್ರೀ ತ್ಯಾಗರಾಜರ ಉತ್ಸದ ಸಂಪ್ರದಾಯ ಕೃತಿ ಹಾಗೂ ದಿವ್ಯ ನಾಮ ಸಂಕೀರ್ತನ ಕೀರ್ತನೆಗಳ ಗಾಯನ ವಾದನಗಳೊಂದಿಗೆ ವಿದುಷಿ ಚಾರುಲತಾ ರಾಮಾನುಜಂ ಅವರ ನೇತೃತ್ವದಲ್ಲಿ ‘ಉಂಭವೃತ್ತಿ’ ನಡೆಯಿತು. ಬಳಿಕ ಪಿಳ್ಳಾರಿಗಿಣಿಗಳು ಮತ್ತು ಪಂಚರತ್ನ ಕೃತಿಗಳ ಗೋಷ್ಠಿಗಾಯನ, ಕಾಂಚನ – ಸಂಗೀತ ಕಲಾಶಾಲೆಯ ಶಿಷ್ಟರು, ಪ್ರಶಿಷ್ಯರು ಹಾಗೂ ಅತಿಥಿ ಕಲಾವಿದರಿಂದ ಸಂಗೀತ ಸೇವೆ ನಡೆಯಿತು. ರಾತ್ರಿ ಖ್ಯಾತ ಕಲಾವಿದರಿಂದ ಪದ್ಮಶ್ರೀ ಕವಿತಾ ಕೃಷ್ಣಮೂರ್ತಿ ಸುಬ್ರಹ್ಮಣ್ಯಂ, ಅಂಬಿ ಸುಬ್ರಹ್ಮಣ್ಯಂ ಇವರಿಂದ ಸುರ-ಸಂಗೀತ ನಡೆಯಿತು.


ಮಣಿಕೃಷ್ಣ ಸ್ವಾಮಿ ಅಕಾಡೆಮಿ ವತಿಯಿಂದ ನೀಡುವ ಜಿಲ್ಲೆಯ ಅತ್ಯುದ್ಭುತ ಕಲಾವಿಮರ್ಶಕ ಎ. ಈಶ್ವರಯ್ಯ ಅವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಯನ್ನು ಈ ವರ್ಷ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಆಕಾಡೆಮಿ ಟ್ರಸ್ಟಿನ ಕಾರ್ಯದರ್ಶಿ ಕಾಂಚನ ರೋಹಿಣಿ ಸುಬ್ಬರತ್ನಂ ಇವರಿಗೆ ನೀಡುತ್ತಿರುವುದಾಗಿ ಆಕಾಡೆಮಿ ಕಾರ್ಯದರ್ಶಿ ನಿತ್ಯಾನಂದ ರಾವ್ ಅವರು ಸಮಾರಂಭದಲ್ಲಿ ಪ್ರಕಟಿಸಿದರು. ರಘುನಂದನ್ ಸ್ವಾಗತಿಸಿ. ಮೋಹನಚಂದ್ರ ವಂದಿಸಿದರು. ಮಹೇಶ್ ಕಜೆ, ಗಣರಾಜ್ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.
