ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ವತಿಯಿಂದ, ವಿದ್ಯಾರ್ಥಿ ಪರಿಷತ್, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಲಾದ 52ನೇ ವಿವೇಕ ವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 12 ಫೆಬ್ರವರಿ 2026ರಂದು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಯಶಸ್ವಿಯಾಗಿ ನೆರವೇರಿತು. ‘ವ್ಯಕ್ತಿತ್ವದಿಂದ ನಾಯಕತ್ವದತ್ತ–ವಿವೇಕಾನಂದರ ಪಥ’ ಎಂಬ ಸಮಕಾಲೀನ ವಿಷಯವು ವಿದ್ಯಾರ್ಥಿಗಳಲ್ಲಿ ವಿಶೇಷ ಸ್ಪಂದನ ಮೂಡಿಸಿತು.
ಕಾರ್ಯಕ್ರಮವನ್ನು ದೀಪಪ್ರಜ್ವಲನದ ಮೂಲಕ ಉದ್ಘಾಟಿಸಲಾಯಿತು. ಉದ್ಘಾಟನಾ ಭಾಷಣ ಮಾಡಿದ ಮಂಗಳೂರು ರಾಮಕೃಷ್ಣ ಮಿಷನ್ ಬಾಲಕಾಶ್ರಮದ ನಿರ್ವಾಹಕರು ಸ್ವಾಮಿ ಯುಗೇಶಾನಂದಜಿ ಇವರು “ಸ್ವಾಮಿ ವಿವೇಕಾನಂದರ ಜೀವನವು ಯುವಜನತೆಗೆ ಶಾಶ್ವತ ಪ್ರೇರಣೆಯಾಗಿದೆ. ವ್ಯಕ್ತಿತ್ವ ವಿಕಾಸದ ಮೂಲಕವೇ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆತರಲು ಸಾಧ್ಯ” ಎಂದು ತಿಳಿಸಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸುತ್ತೂರು ಜೆ.ಎಸ್.ಎಸ್. ಶಿಕ್ಷಣ ಸಂಸ್ಥೆಗಳು ಸಂಯೋಜಕರಾದ ಶ್ರೀ ಜಿ.ಎಲ್. ತ್ರಿಪುರಾಂತಕ “ವ್ಯಕ್ತಿತ್ವದಿಂದ ನಾಯಕತ್ವದತ್ತ–ವಿವೇಕಾನಂದರ ಪಥ” ಎಂಬ ವಿಷಯದ ಕುರಿತು ವಿಶ್ಲೇಷಣಾತ್ಮಕ ಉಪನ್ಯಾಸ ನೀಡಿದರು. “ವ್ಯಕ್ತಿತ್ವ ನಿರ್ಮಾಣವು ಆತ್ಮಶ್ರದ್ಧೆ, ಆತ್ಮವಿಶ್ವಾಸ, ಶಿಸ್ತು ಮತ್ತು ಮೌಲ್ಯಾಧಾರಿತ ಜೀವನ ಶೈಲಿಯಿಂದ ಆರಂಭವಾಗುತ್ತದೆ. ನಾಯಕತ್ವವು ಹುದ್ದೆಯಿಂದ ಬರುವುದಲ್ಲ; ಅದು ಒಳಗಿನ ಪ್ರಾಮಾಣಿಕತೆ, ಸೇವಾಭಾವ ಮತ್ತು ದೃಢಸಂಕಲ್ಪದಿಂದ ರೂಪುಗೊಳ್ಳುತ್ತದೆ. ಸ್ವಾಮಿ ವಿವೇಕಾನಂದರು ಯುವಕರಲ್ಲಿ ಅಡಗಿರುವ ಅಪಾರ ಶಕ್ತಿಯನ್ನು ಜಾಗೃತಗೊಳಿಸುವ ಸಂದೇಶ ನೀಡಿದ್ದು, ಆ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ನಾಯಕತ್ವ ಬೆಳೆಯುತ್ತದೆ. ಶಿಕ್ಷಣವು ಉದ್ಯೋಗ ಕೇಂದ್ರಿತವಾಗಿರದೆ ವ್ಯಕ್ತಿತ್ವ ಮತ್ತು ಜವಾಬ್ದಾರಿಯುತ ನಾಗರಿಕತ್ವ ನಿರ್ಮಾಣದತ್ತ ಮುಖ ಮಾಡಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ ಸ್ವಾಮಿ ಯುಗೇಶಾನಂದಜಿ ಹಾಗೂ ಶ್ರೀ ಜಿ. ಎಲ್. ತ್ರಿಪುರಾಂತಕ ಮತ್ತು ಪ್ರೊ. ಪಿ. ಎಲ್. ಧರ್ಮ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ಡಾ. ಮಹದೇಶ ಕೆ.ಸಿ. ಇವರು “ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು, ಜೀವನದಲ್ಲಿ ಒಂದು ಸ್ಪಷ್ಟ ಗುರಿಯನ್ನು ಇಟ್ಟುಕೊಂಡು ಅದನ್ನು ಸಾಧಿಸುವಲ್ಲಿ ಪ್ರಯತ್ನಿಸಬೇಕು” ಎಂದು ಹೇಳಿದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗಣಪತಿ ಗೌಡ ಎಸ್. “ಇಂತಹ ಶೈಕ್ಷಣಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಪೂರಕವಾಗಿವೆ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಇವರು ಅಧ್ಯಕ್ಷೀಯ ಭಾಷಣದಲ್ಲಿ “ಸ್ವಾಮಿ ವಿವೇಕಾನಂದರ ಚಿಂತನೆಗಳು ರಾಷ್ಟ್ರ ನಿರ್ಮಾಣಕ್ಕೆ ದಾರಿದೀಪವಾಗಿವೆ. ಯುವಜನತೆ ಶ್ರದ್ಧೆ, ಶಕ್ತಿ ಮತ್ತು ಸೇವಾ ಮನೋಭಾವದಿಂದ ಮುಂದುವರಿದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಆರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆಯವರು ಸ್ವಾಗತಿಸಿ ಕಾರ್ಯಕ್ರಮದ ಪರಿಚಯ ನೀಡಿದರು. ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿ ಪರಿಷತ್ ಉಪ ನಿರ್ದೇಶಕರಾದ ಪ್ರೊ. ಜಯವಂತ ನಾಯಕ್ ವಂದಿಸಿ, ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಪರಮೇಶ್ವರಿ ನಿರೂಪಿಸಿದರು. ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
