ಮಂಗಳೂರು : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡ ‘ಸಂಗೀತ, ನೃತ್ಯ ವಿಚಾರ ಸಂಕಿರಣ’ ಸಂಭ್ರಮ 2026 ಕಾರ್ಯಕ್ರಮವು ದಿನಾಂಕ 14 ಫೆಬ್ರವರಿ 2025ರಂದು ಮಂಗಳೂರಿನ ತುಳು ಭವನದ ಸಿರಿ ಚಾವಡಿಯಲ್ಲಿ ಜರುಗಿತು.

ಈ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ನಿಕಟಪೂರ್ವ ಯೋಜನ ನಿರ್ದೇಶಕ ಪ್ರೊ. ಬೋಳಾರ ಶಿವರಾಮ್ ಶೆಟ್ಟಿ “ಸಂಗೀತ ನೃತ್ಯ ಶಿಲ್ಪ ಹಾಗೂ ಸಾಹಿತ್ಯ ದೈವಿಕ ಕಲೆ. ಇವೆಲ್ಲವೂ ನಮ್ಮ ಸಂಸ್ಕಾರದಿಂದ ಕೈ ಗೂಡುತ್ತವೆ. ಎಲ್ಲಿ ಸಂಸ್ಕಾರವಿದೆಯೋ ಅಲ್ಲಿ ಸಂಸ್ಕೃತಿ ಅಚ್ಚಳಿಯದೆ ಉಳಿಯುತ್ತದೆ. ಸಂಶೋಧನೆ ಎಂದರೆ ಏನು? ಸತ್ಯವನ್ನು ತೋರಿಸುವುದು ಒಂದು ವಿಷಯದ ಮೇಲೆ ದೀರ್ಘವಾದ ಅಧ್ಯಯನ ಇರುವುದನ್ನೇ ಪುನರಪಿ ಶೋಧಿಸುವುದು” ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷೆ ಡಾ. ಶುಭ ಧನಂಜಯ್ ಅವರು “ನಮ್ಮ ಅಕಾಡೆಮಿಯಿಂದ ಇಂತಹ ವಿಚಾರ ಸಂಕಿರಣ, ಸಂಗೀತ ನೃತ್ಯಕ್ಕೆ ಬೇಕಾದಂತ ಹಲವು ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಎಟಕುವಂತೆ ರಾಜ್ಯದ ಮೂಲೆ ಮೂಲೆಗಳಲ್ಲಿ ವ್ಯವಸ್ಥಿತವಾಗಿ ಮಾಡಬೇಕೆಂದು ನಿರ್ಧರಿಸಿದ್ದೇವೆ. ಅಲ್ಲದೆ ನಡೆಸಿಕೊಟ್ಟಿದ್ದೇವೆ” ಎಂದರು.

ದ.ಕ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಕಾಡೆಮಿಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಅಕಾಡೆಮಿಯ ಸದಸ್ಯರಾದ ಡಿ.ಆರ್ಅ. ರಾಜಪ್ಪ, ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ತಿನ ಅಧ್ಯಕ್ಷೆ ವಿದುಷಿ ರಾಜಶ್ರೀ ಉಳ್ಳಾಲ, ಉಪಾಧ್ಯಕ್ಷ ವಿದ್ವಾನ್ ಕೆ. ಚಂದ್ರಶೇಖರ ನಾವಡ ಉಪಸ್ಥಿತರಿದ್ದರು. ಅಕಾಡೆಮಿಯ ಸದಸ್ಯ ರಮೇಶ್ ಗಟ್ಟೂರು ಸ್ವಾಗತಿಸಿ, ಡಾ. ದೀಪಶ್ರೀ ಎಸ್.ಎಂ. ಸಹಕರಿಸಿದರು. ಅಕಾಡೆಮಿಯ ಕಾರ್ಯಕ್ರಮದ ಸದಸ್ಯ ಸಂಚಾಲಕಿ ಡಾ. ಗೀತಾ ಬಿ.ವಿ. ವಂದಿಸಿದರು.

ರಾಜ್ಯದ ಪ್ರತಿಷ್ಠಿತ ಸಂಗೀತ ಹಾಗೂ ನೃತ್ಯ ವಿದ್ವಾಂಸರಿಂದ ಕರ್ನಾಟಕ, ಹಿಂದುಸ್ತಾನಿ ಸಂಗೀತ, ಭರತನಾಟ್ಯ ಗೋಷ್ಠಿಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ನಾಟ್ಯಾರಾಧನ ಕಲಾಕೇಂದ್ರ, ಶ್ರೀ ನೃತ್ಯ ಕಲಾಕೇಂದ್ರ, ರಾಗ ಮಯೂರಿ ಅಕಾಡೆಮಿ, ಸೌರಭ ಕಲಾ ಪರಿಷತ್ತು, ಸೃಷ್ಟಿನೃತ್ಯ ಕಲಾ ಕುಟೀರ, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ, ನಾಟ್ಯನಿಕೇತನ ಕೊಲ್ಯ ನೃತ್ಯ ತಂಡಗಳಿಂದ ಸಮೂಹ ಶಾಸ್ತ್ರೀಯ ನೃತ್ಯಗಳು ಸಂಭ್ರಮಿಸಿತು.

