ಉಡುಪಿ : ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ನಾಟಕೋತ್ಸವ ‘ರಂಗಹಬ್ಬ-14’ರ ಮೂರನೇ ದಿನದ ಕಾರ್ಯಕ್ರಮವು ದಿನಾಂಕ 24 ಫೆಬ್ರವರಿ 2026ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ “ಯುವಪೀಳಿಗೆಗಳ ಪ್ರತಿಭೆ ಅರಳಲು, ಯುವಜನರು ಬೆಳೆಯಲು ರಂಗಭೂಮಿ ಸಹಕಾರಿ. ಸುಮನಸಾ ಸಂಸ್ಥೆಯ ಶಿಸ್ತು, ರಂಗ ಚಟುವಟಿಕೆ, ಸಮಾಜಮುಖಿ ಕಾರ್ಯಕ್ರಮಗಳು ಮಾದರಿಯಾದುದು. ಮಕ್ಕಳನ್ನು ಬೆಳೆಸುವ ಕ್ರಮವನ್ನು ಈ ಸಂಘಟನೆಯಿಂದ ಕಲಿಯಬೇಕು. ರಂಗಚಟುವಟಿಕೆಗಳು ನಮ್ಮನ್ನು ಮಾನವೀಯಗೊಳಿಸುತ್ತವೆ. ಜನರನ್ನು ದಾರಿ ತಪ್ಪದಂತೆ ಸರಿದಾರಿಯಲ್ಲಿ ಒಯ್ಯುತ್ತವೆ. ಸಮಾಜದ ಅಂಕುಡೊಂಕುಗಳನ್ನು ರಂಗಭೂಮಿ ಎತ್ತಿ ತೋರಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

ರಂಗಸಾಧಕ ಸನ್ಮಾನ ಸ್ವೀಕರಿಸಿದ ಸಂಗೀತ ಗುರು ರಮೇಶ್ ಕೆ. ಪುತ್ತೂರು ಅವರು ಮಾತನಾಡಿ, “ಸಂಗೀತ ಕಲಿಯುವುದು ನಮ್ಮ ಕಾಲದಲ್ಲಿ ಕಷ್ಟದ ಕೆಲಸವಾಗಿತ್ತು. ಈಗ ರೆಕಾರ್ಡ್ ಮಾಡಿಕೊಂಡು ಬಂದು ಹಾಡುತ್ತಾರೆ. ಕರೋಕೆ ಬಂದ ಮೇಲೆ ಹಾಡುಗಾರ ಬಿಟ್ಟರೆ ಬೇರೆ ಯಾವ ಪಕ್ಕವಾದ್ಯಗಳು ಬೇಡವಾಗಿವೆ. ಹಾರ್ಮೋನಿಯಂ ಹಿಡಿದುಕೊಂಡು ನಾನು ಸಂಗೀತ ಲೋಕಕ್ಕೆ ಕಾಲಿಟ್ಟೆ. ಹಲವು ನಾಟಕ, ನೃತ್ಯಗಳಿಗೆ ಸಂಗೀತ ಸಂಯೋಜನೆ ನಡೆಸಿದೆ. ಶಾಸ್ತ್ರೀಯ ಸಂಗೀತ ಕಲಿತು, ಕಲಿಸಿಕೊಟ್ಟಿದ್ದೇನೆ. ಇಂದು ಸಂಗೀತ ಸುಲಭವಾಗಿದೆ. ಆದರೆ, ನನಗೆ ರಂಗಭೂಮಿ ಮತ್ತು ಸಂಗೀತ ಬದುಕು ಕಟ್ಟಿಕೊಟ್ಟಿದೆ” ಎಂದು ಸ್ಮರಿಸಿದರು.

ಉದ್ಯಮಿಗಳಾದ ಸಾಧು ಸಾಲ್ಯಾನ್, ಮಹೇಶ್ ಶೆಣೈ, ಹೋಟೆಲ್ ಪಂಚರತ್ನ ಪ್ಯಾರಡೈಸ್ ಮಾಲೀಕ ಸಂತೋಷ್ ಶೆಟ್ಟಿ, ರಾಷ್ಟ್ರೀಯ ಬಿಲ್ಲವ ಈಡಿಗ ಮಹಾ ಮಂಡಳದ ಉಡುಪಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಕಾಪು, ಹಿಂದೂ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷ ಅಜಿತ್ ಕೊಡವೂರು, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು. ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಬಾಲಕೃಷ್ಣ ಶಿಬಾರ್ಲ ಸ್ವಾಗತಿಸಿ, ಶ್ರೀವತ್ಸ ವಂದಿಸಿ, ಗಣೇಶ್ ಸಗ್ರಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಿವಮೊಗ್ಗದ ಸಹ್ಯಾದ್ರಿ ಕಲಾತಂಡದರಿಂದ ಡಾ. ಲವ ಇವರ ನಿರ್ದೇಶನದಲ್ಲಿ ‘ಜೋಕುಮಾರ ಸ್ವಾಮಿ’ ಕನ್ನಡ ನಾಟಕ ಪ್ರದರ್ಶನಗೊಂಡಿತು.
