ಕಾಸರಗೋಡು: ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಆಶ್ರಯದಲ್ಲಿ ಕನ್ನಡ ಪತ್ರಿಕಾ ದಿನಾಚರಣೆಯು ದಿನಾಂಕ 01-07-2023 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ, ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ “ಕನ್ನಡ ಹೋರಾಟಕ್ಕೆ ಶಕ್ತಿ ತುಂಬುವಲ್ಲಿ ಕಾಸರಗೋಡಿನ ಪತ್ರಿಕೆಗಳ ಕೊಡುಗೆ ಗಣನೀಯವಾದದ್ದು. ಕನ್ನಡದ ಅಸ್ತಿತ್ವವನ್ನು ಭದ್ರಪಡಿಸಲು ಕನ್ನಡ ಪತ್ರಕರ್ತರು ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಭಾಷಾವಾರು ಪ್ರಾಂತ್ಯ ರಚನೆಯಾದಾಗ ಅಚ್ಚಗನ್ನಡ ಪ್ರದೇಶ ಕಾಸರಗೋಡು ಅನ್ಯಾಯವಾಗಿ ಕೇರಳಕ್ಕೆ ಸೇರಿಸಲ್ಪಟ್ಟಿತು. ಅಂದಿನಿಂದಲೇ ಇಲ್ಲಿ ಕನ್ನಡಿಗರ ಹೋರಾಟ ಪ್ರಾರಂಭಿಸಲಾಯಿತು. ಕನ್ನಡ ಪತ್ರಕರ್ತರು ಮಾತ್ರವಲ್ಲದೆ ಪತ್ರಿಕೆಗಳ ಮಾಲಕರೂ ಆ ಹೋರಾಟದಲ್ಲಿ ಸಕ್ರಿಯರಾಗುವ ಮೂಲಕ ವರದಿ, ಲೇಖನಗಳಿಂದ ಜಾಗೃತಿ ಮೂಡಿಸಿ ಸರ್ವ ಕನ್ನಡಿಗರನ್ನು ಬಡೆದೆಬ್ಬಿಸಿದರು. ಕಾಸರಗೋಡು ಸಮಾಚಾರ, ನಾಡ ಪ್ರೇಮಿ ಮತ್ತು ಕಾಸರಗೋಡು ಕನ್ನಡ ಕಹಳೆ ಸಹಿತ ಹಲವು ಪತ್ರಿಕೆಗಳು ಕನ್ನಡಿಗರ ಹೋರಾಟಕ್ಕೆ ಸ್ಫೂರ್ತಿ ನೀಡಿದವು. ಈಗಲೂ ಪತ್ರಿಕೆಗಳು ಕನ್ನಡದ ಅವಗಣನೆಯ ವಿರುದ್ಧ ಧ್ವನಿಯೆತ್ತುತ್ತಲೇ ಇವೆ” ಎಂದು ಹೇಳಿದರು.
ಲೇಖಕಿ, ಕಲಾವಿದೆ, ವಿದುಷಿ ಅನುಪಮಾ ರಾಘವೇಂದ್ರ ಉಡುಪುಮೂಲೆ ಕನ್ನಡ ಪತ್ರಿಕೆಗಳ ಉದಯ ಮತ್ತು ವಿಕಾಸದ ಬಗ್ಗೆ ಮಾತನಾಡಿದರು. ವಿಶೇಷಾಹ್ವಾನಿತರಾಗಿದ್ದ ಹಿರಿಯ ಸಾಹಿತಿ ವೈ ಸತ್ಯನಾರಾಯಣ ‘ಪತ್ರಿಕೆ – ಪತ್ರಕರ್ತರು – ಓದುಗರು’ ಎಂಬ ವಿಷಯದಲ್ಲಿ ವಿಚಾರವನ್ನು ಮಂಡಿಸಿದರು. ಉದ್ಯಮಿ ಶ್ರೀನಿವಾಸ್, ಛಾಯಾಚಿತ್ರಗ್ರಾಹಕ ಗಣೇಶ್ ಹಾಗೂ ಕಾವ್ಯಾ ಕುಶಲ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಪತ್ರಕರ್ತ ಬಸ್ತಿಗುಡ್ಡೆ ಶ್ರೀಧರ ಅವರನ್ನು ಗೌರವಿಸಲಾಯಿತು.
ಪತ್ರಕರ್ತರಾದ ಗಣೇಶ್ ನುಳ್ಳಿಪ್ಪಾಡಿ, ವೀಜಿ ಕಾಸರಗೋಡು, ಪುರುಷೋತ್ತಮ ನಾಯ್ಕ್, ಪ್ರದೀಪ್ ಬೇಕಲ್ ಪಾಲ್ಗೊಂಡಿದ್ದರು, ಹರಿದಾಸ್ ಜಯಾನಂದ ಹೊಸದುರ್ಗ ಪ್ರಾರ್ಥನೆಗೈದು ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಘಟಕ ಜಗದೀಶ್ ಕೂಡು ನಿರೂಪಿಸಿದರು.

