ಇತ್ತೀಚೆಗೆ ಗತಿಸಿದ ಕನ್ನಡದ ʻಕಾವ್ಯ ಕಾಮಧೇನುʼ ಎನಿಸಿದ ಕನ್ನಡದ ಶ್ರೇಷ್ಠ ಕವಿಗಳಲ್ಲೊಬ್ಬರಾದ ಎಚ್.ಎಸ್. ವೆಂಕಟೇಶಮೂರ್ತಿ ಇವರಿಗೆ ಸಾರ್ವಜನಿಕವಾಗಿ ಗೌರವಾರ್ಪಣೆ ಮಾಡುವ ಅಪೂರ್ವ ಅವಕಾಶವೊಂದನ್ನು ಕಪ್ಪಣ್ಣ ಅಂಗಳ ಹಾಗೂ ಸಮಂಜಸ ತಂಡಗಳು ದಿನಾಂಕ 08 ಜೂನ್ 2025ರಂದು ಎನ್.ಆರ್. ಕಾಲೋನಿಯ ಸಿ. ಅಶ್ವತ್ಥ ಕಲಾಭವನದಲ್ಲಿ ಕಲ್ಪಿಸಿಕೊಟ್ಟರು. ಕನ್ನಡ ಸಾಹಿತ್ಯ ಲೋಕದ ಸರ್ವ ಪ್ರಕಾರಗಳಲ್ಲೂ ಬದ್ಧತೆಯಿಂದ ಕೃಷಿ ಮಾಡಿದ ಎಚ್.ಎಸ್.ವಿ. ಇವರಿಗೆ ಆ ಎಲ್ಲಾ ಪ್ರಕಾರಗಳಲ್ಲೂ ಅಪಾರ ಅಭಿಮಾನಿಗಳು. ಪೂರ್ವಾಹ್ನ ನಿಗದಿತ ಸಮಯಕ್ಕೂ ಮುಂಚಿತವಾಗಿ ಅಭಿಮಾನಿಗಳು ಬಂದು ಸಭಾಂಗಣ ತುಂಬಿಕೊಂಡದ್ದು ನೋಡಿ ತುಸು ತಡವಾಗಿ ಬಂದ ಅತಿಥಿಗಳೂ ತಬ್ಬಿಬ್ಬು. ಕಾರ್ಯಕ್ರಮದ ಸಂಯೋಜಕರಲ್ಲೊಬ್ಬರಾದ ಶ್ರೀನಿವಾಸ ಜಿ. ಕಪ್ಪಣ್ಣ ನೂರಾರು ಕಾರ್ಯಕ್ರಮಗಳನ್ನು ಸಂಘಟಿಸಿ ರಾಜ್ಯದ ʻಅತ್ಯತ್ತಮ ಸಾಂಸ್ಕೃತಿಕ ಸಂಘಟಕʼ ಎಂದು ಹೆಸರು ಪಡೆದವರು, ತಮ್ಮ ಹೆಸರಿಗೆ ತಕ್ಕಂತೆ ಸರಳವಾಗಿಯಾದರೂ ಗಂಭೀರವಾದ ಕಾರ್ಯಕ್ರಮವನ್ನೇ ಆಯೋಜಿಸಿದ್ದರು. ಇನ್ನೋರ್ವ ಸಾಂಸ್ಕೃತಿಕ ಸಂಘಟಕ, ಸಾಹಿತಿಗಳೂ ಆದ ಕೆ.ಈ. ರಾಧಾಕೃಷ್ಣರವರು ಕಪ್ಪಣ್ಣ ಅವರಿಗೆ ಸಾಥ್ ನೀಡಿದರು.
ಕಾರ್ಯಕ್ರಮದ ವಿನ್ಯಾಸವೇ ವಿನೂತನವಾಗಿತ್ತು. ವೇದಿಕೆಯಲ್ಲಿ ಯಾವುದೇ ಕುರ್ಚಿಗಳಿರಲಿಲ್ಲ. ಕನ್ನಡ ಭಾವಗೀತೆಗಳ ಶ್ರೇಷ್ಠ ಗಾಯಕಿಯರಲ್ಲೊಬ್ಬರಾದ ಎಂ.ಡಿ. ಪಲ್ಲವಿಯವರು ವೇದಿಕೆಯ ಮಧ್ಯಭಾಗದಲ್ಲಿ ಕುಳಿತಿದ್ದರು. ಅವರ ಬಲಬದಿಗೆ ತಬ್ಲಾ ನುಡಿಸುವ ಶ್ರೀನಿವಾಸ್, ಎಡಕ್ಕೆ ಗಿಟಾರ್ ನುಡಿಸುವ ಶ್ರೀನಿವಾಸ್! ಪಲ್ಲವಿಯವರು ಎಚ್.ಎಸ್.ವಿ.ಯವರ ಜನಪ್ರಿಯ ಹಾಡುಗಳನ್ನಷ್ಟೇ ಅಲ್ಲ; ಅಪರೂಪದ ಹಾಡುಗಳನ್ನೂ ಆಯ್ದು ಮೋಹಕವಾಗಿ ಹಾಡಿದರು. ಅವರು ಒಂದು ಹಾಡು ಹಾಡಿದರೆ ಮರುಕ್ಷಣದಲ್ಲಿ ಓರ್ವಸಾಹಿತಿಯಿಂದ ಕೆಲ ಮಾತುಗಳು, ಮತ್ತೆ ಪಲ್ಲವಿಯವರಿಗೆ ವೇದಿಕೆ, ಮತ್ತೆ ಮಾತು. ಕೆ.ಈ. ರಾಧಾಕೃಷ್ಣ, ಮಲ್ಲೇಪುರಂ ಜಿ. ವೆಂಕಟೇಶ್, ಬಿ.ಆರ್ ಲಕ್ಷ್ಮಣರಾವ್, ನಾ. ದಾಮೋದರ ಶೆಟ್ಟಿ, ಫಾ. ಚಾರ್ಲ್ಸ್ ಲಸ್ರಾಡೋ, ಸುಂದರ್ ವೀಣಾ ಎಚ್ಚೆಸ್ವಿಯವರ ವ್ಯಕ್ತಿತ್ವವನ್ನೂ ಅವರ ಸಾಹಿತ್ಯದ ವಿವಿಧ ಮುಖಗಳನ್ನೂ ಕಂಡರಿಸಿದರು. ಎಲ್ಲರ ಮಾತುಗಳು ಹೃಸ್ವರೂಪದ್ದಾಗಿದ್ದು ಎಚ್ಚೆಸ್ವಿಯವರನ್ನು ಬಣ್ಣಿಸಿದ್ದು ʻಕಿರಿದರೊಳ್ ಪಿರಿದರ್ಥಮ್ʼ ಎಂಬಂತಿತ್ತು.
ಎಚ್ಚೆಸ್ವಿಯವರಿಗೆ ರಂಗ ಗೌರವ ಸಲ್ಲಿಸುವ ಜವಾಬ್ದಾರಿ ಹೊತ್ತಿದ್ದ ಖ್ಯಾತ ರಂಗ ನಿರ್ದೇಶಕಿ ಬಿ. ಜಯಶ್ರೀ ಅವರು ಎಚ್ಚೆಸ್ವಿಯವರ ನಾಟಕಗಳ ಕೆಲವು ಸಂಭಾಷಣೆ ಹಾಗೂ ಹಾಡುಗಳನ್ನು ಉಚ್ಛಕಂಠದಲ್ಲಿ ಹಾಡಿ, ಆಡಿ ತೋರಿಸಿ ಸಭೆಗೆ ಮತ್ತಷ್ಟು ಮೆರಗು ನೀಡಿದರು. ಎಚ್.ಎಸ್. ವೆಂಕಟೇಶ ಮೂರ್ತಿಯವರ ನಗುಮೊಗದ ಒಂದು ಭಾವಚಿತ್ರ ರಂಗಶೀರ್ಷದಲ್ಲಿ ! ಮುಖ್ಯ ಅತಿಥಿಗಳಾದ ಐ.ಎಂ. ವಿಠ್ಠಲ ಮೂರ್ತಿಯವರು ಆ ಭಾವಚಿತ್ರದ ಪ್ರಸ್ತುತತೆಯ ಬಗ್ಗೇನೆ ಮಾತನಾಡಿದರು. ಇನ್ನೋರ್ವ ಅತಿಥಿಗಳಾಗಿದ್ದ ಪ್ರೊ. ಹಂಪನಾ ಅವರು ಹಿರಿತಲೆಗಳು ಅಗಲಿದಾಗ ಉಂಟಾಗುವ ಶೂನ್ಯವನ್ನು ನೆನಪಿಸಿಕೊಂಡರು.
ಇಡಿಯ ಕಾರ್ಯಕ್ರಮ ಎಚ್ಚೆಸ್ವಿಯವರ ಆತ್ಮಕ್ಕೆ ಸಂಭ್ರಮ ತರುವ ರೂಪದ್ದಾಗಿದ್ದೇ ಹೊರತು ಯಾರೂ ಮ್ಲಾನ ಮುಖವಿಟ್ಟು ಮಾತನಾಡಿಲ್ಲ. ʻನೀವು ನಮ್ಮ ಜೊತೆ ಹೇಗಿದ್ದಿರೋ ನಾವೂ ನಿಮ್ಮ ಜೊತೆ ಹಾಗೆಯೇ ಇದ್ದೇವೆʼ ಎಂಬಂತಿತ್ತು ಕಾರ್ಯಕ್ರಮ. ಇಂತಹ ಅಚ್ಚುಕಟ್ಟಾದ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟ ಶ್ರೀನಿವಾಸ್ ಜಿ. ಕಪ್ಪಣ್ಣ ಹಾಗೂ ಅವರಿಗೆ ಬೆಂಬಲವಾಗಿ ನಿಂತವರಿಗೆಲ್ಲ ಹೃತ್ಪೂರ್ವಕ ವಂದನೆಗಳು.
ನಾ. ದಾಮೋದರ ಶೆಟ್ಟಿ