ಮಂಗಳೂರು : ಇಂದಿರಾ ಪ್ರಿಯದರ್ಶಿನಿ ಉದ್ಯಾನವನದಲ್ಲಿ ದಿನಾಂಕ 22 ನವೆಂಬರ್ 2025ರಂದು ನಡೆದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪರವರ ಕವನಗಳ ವಾಚನ, ಗಾಯನ ಹಾಗೂ ಭಾವಾರ್ಥ ವಿಚಾರ ಸಂಕಿರಣ ಕಾರ್ಯಕ್ರಮವು ಸೌಹಾರ್ದ ಸಾಹಿತ್ಯ ವೇದಿಕೆ ಹುಬ್ಬಳ್ಳಿ ಇದರ ಮಂಗಳೂರು ಘಟಕದ ಅಡಿಯಲ್ಲಿ ಸಂಸ್ಥೆಯ ಸಂಸ್ಥಾಪಕ ಗೊಗೇರಿ ಇವರ ಸಾರಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.
ಮಂಗಳೂರಿನ ಖ್ಯಾತ ನಾಮರೂ, ಕವಿಗಳೂ ಸೇರಿ ಜಿ.ಎಸ್.ಎಸ್.ರವರ ಇತರೇತರ ಕವನಗಳನ್ನು ಆರಿಸಿ ವಾಚಿಸಿದರು ಮತ್ತು ಸವಿವರವಾಗಿ ಭಾವಾರ್ಥ ಮಂಡನೆ ಮಾಡಿದರು. ವಿಶೇಷ ಅತಿಥಿಗಳಾಗಿ ಎನ್.ಎಸ್.ಸಿ.ಡಿ.ಎಫ್. ಮುಖ್ಯಸ್ಥ ಖ್ಯಾತ ಗಾಯಕ ಗಂಗಾಧರ ಗಾಂಧಿ, ಕಥಾಬಿಂದು ಪ್ರಕಾಶನ ಮುಖ್ಯಸ್ಥರು ಪಿ.ವಿ. ಪ್ರದೀಪ್ ಕುಮಾರ್, ಸಾಹಿತಿ ಕೊಲಚಪ್ಪೆ ಗೋವಿಂದ ಭಟ್ ರವರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಇನ್ನೊರ್ವ ಅತಿಥಿಯಾಗಿ ಸ್ತ್ರೀ ಅಂದರೆ ಅಷ್ಟೇ ಸಾಕೆ ಎಂಬ ಜಿ.ಎಸ್.ಎಸ್.ರವರ ಕವನದ ವಾಚನ ಹಾಗೂ ಅರ್ಥ ಮಂಡಿಸಿದ ಮಂಗಳೂರಿನ ಮೂಲವ್ಯಾಧಿ ತಜ್ಞ ವೈದ್ಯ ಹಾಗೂ ಕಣಚೂರು ವೈದ್ಯಕೀಯ ಕಾಲೇಜಿನ ಸಲಹೆಗಾರ ಡಾ. ಸುರೇಶ ನೆಗಳಗುಳಿಯವರು ಮಾತನಾಡುತ್ತಾ ಬೇರೆಲ್ಲೂ ಕಂಡು ಬರದ ವಿಶೇಷ ರೂಪದ ಶ್ರೀ ಗೊಗೇರಿಯವರ ನೂತನ ಪರಿಕಲ್ಪನೆಯನ್ನು ಶ್ಲಾಘಸಿದರು. ಇದೇ ರೀತಿ ಇತರ ಕವಿಗಳ ಕವನವನ್ನು ವಾಚಿಸಿ ಅರ್ಥ ಮೀಮಾಸೆ ಮಾಡುವ ಮೂಲಕ ಕವಿಗಳಿಗೆ ಸಿಕ್ಕುವ ಹೆಚ್ಚಿನ ಪ್ರೋತ್ಸಾಹ ಮತ್ತು ಸ್ಫೂರ್ತಿಯನ್ನು ಅವರು ಉದಾಹರಿಸಿದರು.
ಸರ್ವ ಶ್ರೀಮತಿ ಮತ್ತು ಶ್ರೀ ನಾಗೇಂದ್ರ – ಕಾಣದ ಕಡಲಿಗೆ ಹಂಬಲಿಸಿದೆ ಮನ, ಸುಲೋಚನ ನವೀನ್ – ಎಲ್ಲೊ ಹುಡುಕಿದೆ ಇಲ್ಲದ ದೇವರ, ಆರ್.ಎಂ. ಗೋಗೇರಿ -ಎದೆ ತುಂಬಿ ಹಾಡಿದೆನು, ಅನಿತ ಶೆಣೈ – ಹಾಡು ಹಳೆಯದಾದರೇನು ಭಾವ ನವ ನವೀನ, ಕಸ್ತೂರಿ ಜಯರಾಂ – ಮುಂಗಾರಿನ ಅಭೀಷೇಕಕೆ ಹಾಡು, ಡಾ. ಸುರೇಶ್ ನೆಗಳಗುಳಿ – ಆಕಾಶದ ನೀಲಿಯಲಿ ಚಂದ್ರ ತಾರೆ ತೊಟ್ಟಿಲಲ್ಲಿ, ಉಮೇಶ್ ಕಾರಂತ – ಹೌದೇನೆ ಉಮಾ ಹೌದೇನೆ, ಅರುಣ್ ನಾಗರಾಜ್ – ತಾಯಿಗೆ, ಆಕೃತಿ ಭಟ್ – ಯಾವ ಕವನ ಹಾಡಲಿ…, ದೀಪಾ ಚಿಲಿಂಬಿ – ಯಾವುದೀ ಪ್ರವಾಹವು, ಕೆ. ಗೋವಿಂದ ಭಟ್, ರೇಖಾ ಸುದೇಶ್ ರಾವ್, ಅಕ್ಷತ ಡಿ. ಸಾಲಿಯಾನ್, ವಿನ್ಯಾಸ್ ಕುಲಾಲ್, ಪುಷ್ಪ ಪ್ರಭು, ಪ್ರತಿಭಾ ಸಾಲಿಯಾನ ಮತ್ತಿತರರು ಈ ವಿಶಿಷ್ಟ ಗೋಷ್ಠಿಯನ್ನು ಸಂಭ್ರಮಿಸಿದರು.

ಶ್ರೀಮತಿ ಅನಿತಾ ಶೆಣೈ ಹಿರಿಯ ಕವಯತ್ರಿ ಇವರ ಸಹಕಾರ ಹಾಗೂ ಗೊಗೇರಿ ಸಾರಥ್ಯದಲ್ಲಿ ಸುಮಾರು ಮೂರು ಗಂಟೆಗಳ ಅವಧಿಯಲ್ಲಿ ಸುಂದರ ಸಂಜೆ ರಂಗಳಿಸಿತು. ಗೊಗೇರಿ ಅವರು ಸರ್ವರಿಗೂ ಹಾರ್ದಿಕ ಸ್ವಾಗತ ಕೋರಿದರು ಮತ್ತು ಅನಿತಾ ಶೆಣೈ ವಂದಿಸಿದರು. ಗಾಯಕ ನಾಗೇಂದ್ರ ಅವರ ಸುಮಧುರ ಗಾಯನ ಹಾಗೂ ಹುಟ್ಟುಹಬ್ಬದ ಆಚರಣೆಯ ಸವಿ ಸಹಿತವಾಗಿ ಕಾರ್ಯಕ್ರಮ ಕೊನೆಗೊಂಡಿತು.
