ಮಂಗಳೂರು : ಸದಾ ಹೊಸತನವನ್ನು ಹುಡುಕುತ್ತಾ ಕಲಿಕೆಯಲ್ಲಿ ಅದನ್ನು ಅಳವಡಿಸಿಕೊಳ್ಳುತ್ತಾ ರಂಗಭೂಮಿಯನ್ನು ಪ್ರೀತಿಸುವ ಮಂಗಳೂರಿನ ರಂಗ ಸಂಸ್ಥೆ ಕಲಾಭಿ. ಮುಂದಿನ ದಿನಗಳಲ್ಲಿ ಆಸಕ್ತರಿಗೆ ನಟನ ಕೌಶಲ್ಯಗಳ ತರಬೇತಿ ನೀಡಲಿದೆ. ಈ ತರಬೇತಿಯು ನೀನಾಸಂ ಪದವೀಧರ, ಚಲನಚಿತ್ರ ಮತ್ತು ಸಿನಿಮಾ ನಟ ಹಾಗೂ ಕಲಾಭಿಯ ಕಾರ್ಯದರ್ಶಿಯಾದ ಉಜ್ವಲ್ ಯು.ವಿ. ಇವರ ಸಾರಥ್ಯದಲ್ಲಿ ನಡೆಯಲಿದೆ.
ಈ ನಿಟ್ಟಿನಲ್ಲಿ ಎನ್.ಎಸ್.ಡಿ., ನಿನಾಸಂ ಪದವೀಧರ ಕಲಾವಿದರು, ನಿರ್ದೇಶಕರು, ಅನೇಕ ರಂಗ ಕಲಾವಿದರು ಮತ್ತು ಚಿತ್ರ ನಿರ್ದೇಶಕರು, ಕಲಾವಿದರನ್ನು ಸೇರಿಸಿಕೊಂಡು ನಟನೆಯ ಪಠ್ಯಕ್ಕಾಗಿ ಪೂರ್ವಭಾವಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಮುಂದೆ ನಡೆಯಲಿರುವ ತರಬೇತಿ ಮೂರು ಹಂತದಲ್ಲಿ ನಡೆಯಲಿದ್ದು, ಅದು ಏನನ್ನು ಒಳಗೊಂಡಿರಬೇಕು ಎಂದು ಚರ್ಚಿಸಲಾಯಿತು. ಶೀಘ್ರವೇ ಪಠ್ಯಕ್ರಮ ಸಿದ್ದವಾಗಲಿದ್ದು ತರಬೇತಿ ಆರಂಭವಾಗಲಿದೆ.
ಈ ಸಭೆಯಲ್ಲಿ ಜರ್ನಿ ಮ್ಯಾನ್ ಫಿಲ್ಮ್ಸ್ ನ ಸುಮಂತ್ ಭಟ್, ತುಳು ಸಿನಿಮಾದ ನಟ ಹಾಗೂ ನಿರ್ದೇಶಕ ರಾಹುಲ್ ಅಮೀನ್, ನೀನಾಸಂ ಪದವೀಧರ ರಂಗಭೂಮಿ ಮತ್ತು ಚಲನಚಿತ್ರ ನಟ ಹಾಗೂ ತರಬೇತುದಾರರಾದ ಅವಿನಾಶ್ ರೈ, ರಂಗಭೂಮಿ ಮತ್ತು ಚಲನಚಿತ್ರ ನಟ ಪುನೀತ್ ಶೆಟ್ಟಿ, ನೀನಾಸಂ ಮತ್ತು ಎನ್.ಎಸ್.ಡಿ. ನಿರ್ದೇಶನದಲ್ಲಿ ಪದವಿ ಪಡೆದಿರುವ ಸಲ್ಮಾ, ನೀನಾಸಂ ಪದವೀಧರ ಮತ್ತು ಸಂಗೀತಗಾರರಾದ ಶ್ರೀಪಾದ ತೀರ್ಥಹಳ್ಳಿ, ನೀನಾಸಂ ಪದವೀಧರ ಮತ್ತು ರಂಗಭೂಮಿ ನಿರ್ದೇಶಕರಾದ ಭುವನ್ ಮಣಿಪಾಲ್, ರಂಗಭೂಮಿ ಮತ್ತು ಚಲನಚಿತ್ರ ನಟರಾದ ವಿನೋದ್ ಶೆಟ್ಟಿ, ಚಲನಚಿತ್ರ ನಟಿಯಾದ ಚೈತ್ರ ಶೆಟ್ಟಿ, ನಿರ್ದೇಶಕರಾದ ಸೌಮೇಶ್, ರಂಗಭೂಮಿ ನಟಿಯಾದ ಹರ್ಷಿತಾ ಶಿರೂರು, ಭರತನಾಟ್ಯ ಮತ್ತು ರಂಗಭೂಮಿ ಕಲಾವಿದೆ ಭಾವನಾ ವಿಷ್ಣುಮೂರ್ತಿ ಕೆರೆಮಠ ಮತ್ತು ರಂಗಭೂಮಿ ನಟಿ ಭಾರ್ಗವಿ ನಾಯಕ್ ಉಪಸ್ಥಿತರಿದ್ದರು.