ಬೆಂಗಳೂರು : ಕಪ್ಪಣ್ಣ ಅಂಗಳ ಇದರ ವತಿಯಿಂದ 98ನೇ ಶಾಸ್ತ್ರೀಯ ಮಾಸಿಕ ಸಂಗೀತ ಕಛೇರಿ ‘ಆಲಾಪ್’ ಕಾರ್ಯಕ್ರಮವನ್ನು ದಿನಾಂಕ 11 ಅಕ್ಟೋಬರ್ 2025ರಂದು ಸಂಜೆ 6-30 ಗಂಟೆಗೆ ಬೆಂಗಳೂರಿನ ಜೆ.ಪಿ. ನಗರದ ಕಪ್ಪಣ್ಣ ಅಂಗಳದಲ್ಲಿ ಆಯೋಜಿಸಲಾಗಿದೆ. ಈ ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ಕಾರ್ಯಕ್ರಮದಲ್ಲಿ ತನ್ಮಯ್ ವಿ. ಸುಪ್ರಮೋದ ಮತ್ತು ವಿಸ್ಮಯ್ ವಿ. ಸುಪ್ರಮೋದ ಇವರ ವಯೋಲಿನ್ ದ್ವಂದ್ವ ವಾದನಕ್ಕೆ ಕಾರ್ತಿಕ್ ಪ್ರಣವ್ ಇವರು ಮೃದಂಗ ಮತ್ತು ಪ್ರಣವ್ ಶೇಷಾದ್ರಿ ಇವರು ಘಟಂ ಸಾಥ್ ನೀಡಲಿದ್ದಾರೆ.
‘ಆಲಾಪ್’ ಸರಣಿ ಸ್ವರ ಮಾಲಿಕೆಯ 98ನೇ ಕಾರ್ಯಕ್ರಮ ಇದಾಗಿದ್ದು, ಕಳೆದ 10 ವರ್ಷಗಳಿಂದ ಈ ಕಾರ್ಯಕ್ರಮ ನಡೆದುಕೊಂಡು ಬಂದಿದೆ. ಉದಯೋನ್ಮುಖ ಕಲಾವಿದರಿಗಾಗಿಯೇ ಆಯೋಜಿಸುವ ಈ ಸರಣಿಯಲ್ಲಿ ಒಂದು ತಿಂಗಳು ಹಿಂದೂಸ್ಥಾನಿ ಹಾಗೂ ಒಂದು ತಿಂಗಳು ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳು ನಡೆಯುತ್ತಿದೆ. ಶ್ರೀ ನಿವಾಸ್ ಜಿ. ಕಪ್ಪಣ್ಣ ಹಾಗೂ ಲಲಿತ ಕಪ್ಪಣ್ಣ ದಂಪತಿಗಳು ತಮ್ಮ ಮನೆಯ ಅಂಗಳದಲ್ಲಿಯೇ ಸುಸಜ್ಜಿತವಾದ ಸಭಾಂಗಣವನ್ನು ನಿರ್ಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿಯೇ ಮುಡಿಪಾಗಿಟ್ಟಿದ್ದಾರೆ. ಕಪ್ಪಣ್ಣ ಅವರ ಪುತ್ರಿ ಹಾಗೂ ಕಪ್ಪಣ್ಣ ಅಂಗಳದ ನಿರ್ದೇಶಕಿಯಾದ ಸ್ನೇಹ ಕಪ್ಪಣ್ಣರವರು ಈ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಡಾ. ಎ. ಭಾನು ಇವರು ಕಾರ್ಯಕ್ರಮಗಳನ್ನು ಸಂಯೋಜಿಸುತ್ತಿದ್ದಾರೆ.