ಮೈಸೂರು : ಹಿರಿಯ ರಂಗಕರ್ಮಿ ಎಚ್. ಜನಾರ್ದನ್ (ಜನ್ನಿ), ಸಂಸ್ಕೃತ ವಿದ್ವಾಂಸ, ಸಂಗೀತ ತಜ್ಞ ಪ್ರೊ. ಬಿ.ಆರ್ . ಶೇಷಾದ್ರಿ ಅಯ್ಯಂಗಾರ್ ಹಾಗೂ ಜಾನಪದ ಗಾಯಕ ಗೊಲ್ಲಹಳ್ಳಿ ಶಿವಪ್ರಸಾದ್ ಇವರಿಗೆ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರಕಟಿಸಿದೆ.

ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ದಿನಾಂಕ 08 ನವೆಂಬರ್ 2025ರಂದು ನಡೆಯುವ 10ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು. 2024-25ನೇ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ರಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 7 ಮಂದಿಗೆ ಡಿ.ಲಿಟ್ ಪದವಿ ಪ್ರದಾನ ನಡೆಯಲಿದೆ. ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ಕೇರಳದ ಕಲಾಮಂಡಲಂ ವಿವಿ ಕುಲಪತಿ ಪ್ರೊ. ವಿ. ಅನಂತ್ಕೃಷ್ಣನ್ ಪಾಲ್ಗೊಳ್ಳಲಿದ್ದಾರೆ ಎಂದು ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ತಿಳಿಸಿದ್ದಾರೆ.
ಸ್ನಾತಕೋತ್ತರ ಪದವಿ (ಎಂ.ಪಿ.ಎ.)ಯಲ್ಲಿ ಶ್ರವ್ಯಾ ಎ. ಭರತನಾಟ್ಯ ವಿಭಾಗದಲ್ಲಿ 6 ಚಿನ್ನದ ಪದಕ ಗಳಿಸಿದ್ದಾರೆ. ಲತಾ ವಿ. (ಕರ್ನಾಟಕ ಸಂಗೀತ ಗಾಯನ ವಿಭಾಗ) 5, ಡಿ.ಎನ್. ಇಂದ್ರಕುಮಾರ್ (ಹಿಂದೂಸ್ತಾನಿ ಸಂಗೀತ ಗಾಯನ ವಿಭಾಗ) 3, ಶ್ರೀಕಾಂತ್ ಎಸ್. ಹಾಗೂ ಸಿ.ನಂಜುಂಡಸ್ವಾಮಿ (ನಾಟಕ ವಿಭಾಗ) ತಲಾ ಒಂದು ಚಿನ್ನದ ಪದಕ ಪಡೆದಿದ್ದಾರೆ. ಸ್ನಾತಕ ಪದವಿಯಲ್ಲಿ (ಬಿ.ಪಿ.ಎ.) ಪಿ. ಪುನೀತಾ (ಕರ್ನಾಟಕ ಸಂಗೀತ ಗಾಯನ ವಿಭಾಗ) 4, ಸಂಜಯ್ ಎಂ. (ಹಿಂದೂಸ್ತಾನಿ ಸಂಗೀತ ಗಾಯನ ವಿಭಾಗ) 2 ಹಾಗೂ ಸುಜನಾ ಎಂ.ಬಿ. (ಭರತನಾಟ್ಯ ವಿಭಾಗ) ಒಂದು ಚಿನ್ನದ ಪದಕ ಗಳಿಸಿದ್ದಾರೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.
