ರಾಮನಗರ : ಕರ್ನಾಟಕ ಜಾನಪದ ಪರಿಷತ್ತು 2026ರ ಸಾಲಿನ ಜಾನಪದ ಲೋಕ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದ್ದು, 08 ಫೆಬ್ರವರಿ 2026ರಂದು ಜಾನಪದ ಲೋಕದಲ್ಲಿ ನಡೆಯುವ ಜಾನಪದ ಲೋಕೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಮೈಸೂರು ಜಾನಪದ ವಿದ್ವಾಂಸ ಪ್ರೊ. ಹಿ.ಶಿ. ರಾಮಚಂದ್ರೇಗೌಡ, ದಕ್ಷಿಣ ಕನ್ನಡ ಜಿಲ್ಲೆ ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪಗೌಡ, ತುಮಕೂರು ಜಿಲ್ಲೆ ಕಾಡುಗೊಲ್ಲರ ಗಣಿ ವಾದನ ಕಲಾವಿದ ಚಿಕ್ಕಣ್ಣ, ಬೆಂಗಳೂರಿನ ಜನಪದ ಛಾಯಾಗ್ರಾಹಕ ಡಾ. ಸಿರಿಗಂಧ ವಿ. ಶ್ರೀನಿವಾಸಮೂರ್ತಿ, ಚಾಮರಾಜನಗರ ಜಿಲ್ಲೆಯ ಜೋಗುಳಪದ ಹಾಡುಗಾರರಾದ ಚಿನ್ನಮ್ಮ ಮಂಡ್ಯದ ಪೂಜಾ, ಮರಗಾಲು ಕುಣಿತ ಕಲಾವಿದ ಕೆ.ಪಿ. ದೇವರಾಜು, ಬೆಂಗಳೂರು ದಕ್ಷಿಣದ ಪೂಜಾ ಕುಣಿತ ಕಲಾವಿದ ಶಿವಮಾದಯ್ಯ, ಮೂಡಲಪಾಯ ಯಕ್ಷಗಾನ ಕಲಾವಿದರಾದ ಭೈರಪ್ಪ (ಗಂಗಣ್ಣ), ರಾಯಚೂರಿನ ತತ್ವಪದ ಕಲಾವಿದೆ ನಾರಾಯಣಪ್ಪ ಮಾಡಶಿರಾವಾರ, ಬೆಂಗಳೂರಿನ ತಂಬೂರಿ ಕಲಾವಿದ ಸಿದ್ದರಾಜು ಎಂ. ಇವರುಗಳು ಜಾನಪದ ಲೋಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಧಾರವಾಡದ ಸಾಹಸ ಕಲಾವಿದ ಮುತ್ತಪ್ಪ ಬಸವಂತಪ್ಪ ದಾತನಾಳ, ಕೇರಳ ಕಾಸರಗೋಡಿನ ಯಕ್ಷಗಾನ ವೇಷಧಾರಿ ಕಲಾವಿದ ಚನಿಯಪ್ಪ ನಾಯ್ಕ್, ಚಿಕ್ಕಮಗಳೂರು ಜಿಲ್ಲೆಯ ಸೋಬಾನೆ ಹಾಡುಗಾರ ಟಿ. ಶಾರದಮ್ಮ, ಬೀದರ್ನ ಲಂಬಾಣಿ ನೃತ್ಯಗಾರ್ತಿ ಭಾರತಿಬಾಯಿ, ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಯಕ್ಷಗಾನ ಕಲಾವಿದ ಬಿ.ಎಸ್. ಗೌಡ (ಬೀರಪ್ಪ ಶಿವುಗೌಡ), ಚಾಮರಾಜನಗರದ ಸೋಲಿಗ ಕಲಾವಿದೆ ಡಾ. ಎಸ್ .ರತ್ನಮ್ಮ, ಬಾಗಲಕೋಟೆ ಜಿಲ್ಲೆ ಕರಡಿ ಮಜಲು ಕಲಾವಿದ ಗಂಗಪ್ಪ ಮಹಾಲಿಂಗಪ್ಪ ಕರಡಿ, ಬೆಂಗಳೂರು ಉತ್ತರದ ಗೊರವ ಕುಣಿತ ಕಲಾವಿದೆ ಎಂ. ಬಸವರಾಜು ಹಾಗೂ ಬೆಂಗಳೂರಿನ ಹೂಲಿ ಶೇಖರ್ ಅವರು ‘ಲೋಕ ಸರಸ್ವತಿ ಗ್ರಂಥ ಪ್ರಶಸ್ತಿ’ ಪಡೆಯಲಿದ್ದಾರೆ. ಈ ಕುರಿತು ಜಾನಪದ ಪರಿಷತ್ತಿನ ಅಧ್ಯಕ್ಷರಾದ ಪ್ರೊ. ಹಿ.ಚಿ. ಬೋರಲಿಂಗಯ್ಯ ಇವರು ಮಾಹಿತಿ ನೀಡಿದ್ದಾರೆ.
