ಬೆಂಗಳೂರು : ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಇವರ ಸ್ಮರಣಾರ್ಥ ಕಥೆಕೂಟ ಸಂಸ್ಥೆಯು ಸ್ಥಾಪಿಸಿರುವ ‘ಪ್ರೊ. ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರ’ಕ್ಕೆ 2024ನೇ ಸಾಲಿನಲ್ಲಿ ಅನುವಾದಕ ಪ್ರೊ. ಎಸ್.ಎನ್. ಶ್ರೀಧರ್ ಹಾಗೂ 2025ನೇ ಸಾಲಿನ ಪ್ರಶಸ್ತಿಗೆ ಅನುವಾದಕಿ ಭಾಷಾ ಸಂಶೋಧಕಿ ತಮಿಳ್ ಸೆಲ್ಲಿ ಇವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ರೂ.10,000/- ನಗದು ಮತ್ತು ಫಲಕವನ್ನು ಒಳಗೊಂಡಿದೆ. ದಿನಾಂಕ 01 ನವೆಂಬರ್ 2025ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ, ಸಾಹಿತಿಗಳಾದ ಗಿರೀಶ್ ರಾವ್ ಹತ್ತಾರ್ (ಜೋಗಿ), ಕಥೆಕೂಟದ ನಿರ್ವಾಹಕ ಗೋಪಾಲಕೃಷ್ಣ ಕುಂಟಿನಿ, ಜಿ.ವಿ. ಅರುಣ ಇದ್ದರು.
ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಸ್ಮರಣಾರ್ಥ ಇವರ ಹೆಸರಿನಲ್ಲಿ ‘ಕಥಕೂಟ’ ಸಂಸ್ಥೆಯು ಪ್ರಶಸ್ತಿ ಆರಂಭಿಸಿದ್ದು, ಭಾಷೆಯಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ ಭಾಷೆಗೆ ಸೃಜನಶೀಲ ಕೊಡುಗೆ ನೀಡಿದ ಮತ್ತು ಭಾಷೆಯ ಸಾಧ್ಯತೆಗಳನ್ನು ವಿಸ್ತರಿಸುವ ಕೆಲಸದಲ್ಲಿ ನಿರತರಾಗಿರುವ ಪ್ರತಿಭಾವಂತರಿಗೆ ಪ್ರತಿ ವರ್ಷ ‘ಪ್ರೊ. ಜಿ. ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರ’ ನೀಡಿ ಗೌರವಿಸಲು ನಿರ್ಧರಿಸಿದೆ.
ಪ್ರೊಫೆಸರ್ ಎಸ್.ಎನ್. ಶ್ರೀಧರ್ : ಕುಮಾರವ್ಯಾಸ ಭಾರತವನ್ನು ಇಂಗ್ಲೀಷಿಗೆ ಅನುವಾದಿಸುವ ತಂಡದ ಮುಖ್ಯಸ್ಥರಾಗಿರುವ ಹಿರಿಯ ಭಾಷಾವಿಜ್ಞಾನಿ ಪ್ರೊಫೆಸರ್ ಎಸ್.ಎನ್. ಶ್ರೀಧರ್ ಇವರಿಗೆ 2024ನೇ ಸಾಲಿನ ಪುರಸ್ಕಾರ ನೀಡಲು ತೀರ್ಮಾನಿಸಲಾಗಿದೆ. ನ್ಯೂಯಾರ್ಕ್ನ ಸ್ಟೋನಿಬ್ರೂಕ್ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನ ಮತ್ತು ಭಾರತೀಯ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಶ್ರೀಧರ್ ಅವರು, ಕುಮಾರವ್ಯಾಸ ಭಾರತದ ಇಂಗ್ಲೀಷ್ ಅನುವಾದ (The Kannada Mahabharata) ಯೋಜನೆಗೆ ಚಾಲನೆ ನೀಡಿದ್ದಾರೆ. ‘ಮಾಡರ್ನ್ ಕನ್ನಡ ಗ್ರಾಮರ್’, ‘ಇಂದಿನ ಕನ್ನಡ : ರಚನೆ ಮತ್ತು ಬಳಕೆ’ ಸೇರಿದಂತೆ 70ಕ್ಕೂ ಹೆಚ್ಚು ಪ್ರಕಟಿತ ಲೇಖನಗಳ ಮೂಲಕ ಕನ್ನಡ ಭಾಷಾವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಡಾ. ತಮಿಳ್ ಸೆಲ್ವಿ : ಅನುವಾದಕಿ ಮತ್ತು ಭಾಷಾ ಸಂಶೋಧಕಿ ಡಾ. ತಮಿಳ್ ಸೆಲ್ವಿ ಇವರಿಗೆ 2025ನೇ ಸಾಲಿನ ಪುರಸ್ಕಾರ ಲಭಿಸಿದೆ. ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥರಾಗಿರುವ ಇವರು, ಕನ್ನಡ ಮತ್ತು ತಮಿಳು ಭಾಷೆಗಳ ನಡುವೆ ಸೌಹಾರ್ದ ಸಂಬಂಧ ಬೆಳೆಸುವ ಕಾರ್ಯದಲ್ಲಿ ದಶಕಗಳಿಂದ ತೊಡಗಿಸಿಕೊಂಡಿದ್ದಾರೆ. ‘ನಾನು ಅವನಲ್ಲ, ಅವಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿ ಮತ್ತು ತಮಿಳುನಾಡು ಸರ್ಕಾರದ ‘ಶ್ರೇಷ್ಠ ಅನುವಾದಕಿ ಪ್ರಶಸ್ತಿ’ಯೂ ಅವರಿಗೆ ಸಂದಿವೆ. ‘ನೇಪಥ್ಯ’, ‘ಅಶೋಕ ಮಿತ್ರನ್ ಕಥೆಗಳು’ ಸೇರಿದಂತೆ ಹಲವು ಪ್ರಸಿದ್ಧ ಅನುವಾದ ಕೃತಿಗಳನ್ನು ರಚಿಸಿದ್ದಾರೆ.