ಆಲೂರು : ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಲೂರು ತಾಲೂಕು ಘಟಕ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸಭೆಯು ದಿನಾಂಕ 13 ಜೂನ್ 2025ರಂದು ಜರಗಿತು.
ಈ ಸಭೆಯಲ್ಲಿ ಪಾಲ್ಗೊಂಡ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ “ನಾಡು-ನುಡಿ ಸೇವೆಯಲ್ಲಿ ತೊಡಗಿರುವ ಕನ್ನಡಪರ ಸಂಘಟನೆಗಳಿಗೆ ಪಾರದರ್ಶಕ ಹಾಗೂ ಪ್ರಮಾಣಿಕ ವ್ಯವಹಾರ ದೃಷ್ಠಿಕೋನಗಳು ಬಹಳ ಮುಖ್ಯವಾಗುತ್ತವೆ. ಈ ನಿಟ್ಟಿನಲ್ಲಿ ಕಳೆದ ಮೂರೂ ತಾಲೂಕು ಸಮ್ಮೇಳನಗಳ ಖರ್ಚುವೆಚ್ಚಗಳನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಆಲೂರು ತಾಲೂಕು ಘಟಕ ಪಾರದರ್ಶಕವಾಗಿ ನೀಡಿರುವುದು ಸ್ತುತ್ಯಾರ್ಹ ಸಂಗತಿ. ನಮ್ಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಪ್ರಾರಂಭದಿಂದಲೂ ಎಲೆಮರೆಕಾಯಿಯಂತಹ ಸಾಧಕರನ್ನು ಗುರುತಿಸುವ ಹಿನ್ನೆಲಯಲ್ಲಿ ಸರಳ ಹಾಗೂ ಗುಣಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಕನ್ನಡಪರ ಮನಸ್ಸುಗಳನ್ನು ಒಂದುಗೂಡಿಸಿ ಉತ್ತಮೋತ್ತಮ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಹರಿಹಳ್ಳಿಯಲ್ಲಿ ನಡೆದ ಆಲೂರು ತಾಲೂಕು ಮೂರನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಹರಿಹಳ್ಳಿಯ ಮಂಗಳ ಕಲಾ ಸಾಹಿತ್ಯ ವೇದಿಕೆಯ ಕೊಡುಗೆ ಅಪಾರವಿದೆ” ಎಂದು ಅಭಿಪ್ರಾಯಪಟ್ಟರು.
ಸಾಹಿತ್ಯ ವೇದಿಕೆಯ ಪೋಷಕರಾದ ಡಾ. ಎಂ.ಇ. ಜಯರಾಜ್ ಮಾತನಾಡಿ “ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕಳೆದ ಐದಾರು ವರ್ಷಗಳಿಂದ ತಾಲೂಕಿನಲ್ಲಿ ಒಳ್ಳೆಯ ಕಾರ್ಯವನ್ನು ಮಾಡುತ್ತಾ ಬಂದಿದೆ. ವೇದಿಕೆಯ ವತಿಯಿಂದ ಮೇ ತಿಂಗಳಿನಲ್ಲಿ ಮುಂಬಯಿ ಮಹಾನಗರಿಯಲ್ಲಿ ನಡೆದ ಅಖಿಲ ಭಾರತ ಸಮ್ಮೇಳನವನ್ನು ಮರೆಯುವಂತಿಲ್ಲ. ಹೊರರಾಜ್ಯದಲ್ಲಿಯೂ ತನ್ನ ಛಾಪನ್ನು ಮೂಡಿಸಿರುವ ವೇದಿಕೆಯ ಎಲ್ಲಾ ಕಾರ್ಯಗಳಿಗೂ ನಾವೆಲ್ಲಾ ಒತ್ತಾಸೆಯಾಗಿ ನಿಲ್ಲುತ್ತೇವೆ” ಎಂದರು.
ವೇದಿಕೆಯ ತಾಲೂಕು ಗೌರವಾಧ್ಯಕ್ಷ ಎಂ. ಬಾಲಕೃಷ್ಣ ಮಾತನಾಡಿ “ಸಾಹಿತ್ಯ ವೇದಿಕೆ ಮೊದಲಿನಿಂದಲೂ ಸಾಧಕರನ್ನು ಗುರುತಿಸುತ್ತಾ, ಪ್ರೋತ್ಸಾಹಿಸುತ್ತಾ, ಹೊಸ ಹೊಸ ಪ್ರತಿಭೆಗಳಿಗೆ ವೇದಿಕೆಗಳನ್ನು ಒದಗಿಸುತ್ತಾ ಬಂದಿದೆ. ಇದರ ಒಟ್ಟೊಟ್ಟಿಗೆ ನಾವು ನಮ್ಮ ಕೈಲಾದಮಟ್ಟಿಗೆ ಸಹಕಾರವನ್ನು ನೀಡುತ್ತಾ ವೇದಿಕೆಯ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದೇವೆ. ಮುಂದೆಯೂ ನಮ್ಮ ಸ್ಪಂದನೆ ನಿರಂತರವಾಗಿರುತ್ತದೆ” ಎಂದರು.
ತಾಲೂಕು ಕಾರ್ಯದರ್ಶಿ ಧರ್ಮ ಕೆರಲೂರು ವಾರ್ಷಿಕ ವರದಿ ಹಾಗೂ ಆಯ-ವ್ಯಯ ಮಂಡನೆ ಮಾಡಿ ಮಾತನಾಡಿ “ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹುಟ್ಟಿರುವುದೇ ಪ್ರತಿಭೆಗಳನ್ನು ಗುರುತಿಸಿ ಸಮಾಜದ ಮುಖ್ಯ ವಾಹಿನಿಗೆ ತರಲು, ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರ ಬೆಳೆಸುವುದಕ್ಕಾಗಿ. ತಾಲೂಕು ಘಟಕ ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಇಲ್ಲಿಯವರೆಗೂ ಪಾರದರ್ಶಕ ಲೆಕ್ಕಪತ್ರಗಳನ್ನು ವೇದಿಕೆ ನೀಡುತ್ತಾ ಬಂದಿದ್ದು ಇತ್ತೀಚೆಗೆ ತಾಲೂಕಿನ ಹರಿಹಳ್ಳಿಯಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆಯ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಆಲೂರು ತಾಲೂಕು ತೃತೀಯ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಹಕಾರ ನೀಡಿದ ಎಲ್ಲರನ್ನೂ ವೇದಿಕೆ ಗೌರವಿಸುತ್ತದೆ” ಎಂದರು.
ವೇದಿಕೆಯ ವತಿಯಿಂದ ಗೌರವಾಧ್ಯಕ್ಷ ಎಂ. ಬಾಲಕೃಷ್ಣ, ಉಪಾಧ್ಯಕ್ಷ ಟಿ.ಕೆ. ನಾಗರಾಜ್ ಹಾಗೂ ಸಂಘಟನಾ ಕಾರ್ಯದರ್ಶಿ ಡಿ.ಸಿ. ಬಸವರಾಜ್ ಇವರುಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಟ್ರಸ್ಟಿ ವಾಸು ಸಮುದ್ರವಳ್ಳಿ, ಪತ್ರಿಕಾ ಕಾರ್ಯದರ್ಶಿ ಎಚ್.ಡಿ. ಪ್ರದೀಪ್, ದಲಿತ ಮುಖಂಡ ಅರಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.