ಬೆಳಗಾವಿ : ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಇದರ ವತಿಯಿಂದ ನೀಡುವ ಹಿರಿಯ ಮತ್ತು ಯುವ ಸಾಹಿತಿಗಳಿಗೆ 2023, 2024 ಮತ್ತು 2025ನೇ ಸಾಲಿನ ವಾರ್ಷಿಕ ಕಥೆ, ಕಾವ್ಯ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಬೆಳಗಾವಿಯಲ್ಲಿ ದಿನಾಂಕ 11 ನವೆಂಬರ್ 2025ರಂದು ಬೆಳಿಗ್ಗೆ ಗಂಟೆ 11-00ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಪ್ರಶಸ್ತಿ ಪ್ರದಾನ ಮಾಡುವರು.
‘ಕವಿ ಎಚ್.ಎಸ್. ಶಿವಪ್ರಕಾಶ ಇವರನ್ನು 2023ನೇ ಸಾಲಿನ ಕಾವ್ಯ ಪ್ರಶಸ್ತಿ, ಚಿಂತಕ ಮತ್ತು ಪತ್ರಕರ್ತ ಜಿ. ರಾಮಕೃಷ್ಣ ಇವರನ್ನು 2024ನೇ ಸಾಲಿನ ವೈಚಾರಿಕ ಮತ್ತು ಪತ್ರಿಕೋದ್ಯಮ ಪ್ರಶಸ್ತಿ, ಕಥೆಗಾರ್ತಿ ಬಿ.ಟಿ. ಜಾಹ್ನವಿ ಇವರನ್ನು 2025ನೇ ಸಾಲಿನ ಕಥಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳು ತಲಾ ರೂ. ಐವತ್ತು ಸಾವಿರ ಒಳಗೊಂಡಿವೆ ಎಂದು ಟ್ರಸ್ಟ್ ಅಧ್ಯಕ್ಷೆ ವಿನಯಾ ಒಕ್ಕುಂದ ಇಲ್ಲಿ ತಿಳಿಸಿದರು.
‘ಯುವ ಸಾಹಿತ್ಯ ಪುರಸ್ಕಾರ’ಕ್ಕೆ ಮೂವರು ಆಯ್ಕೆ ಆಗಿದ್ದಾರೆ. ಶಿವಮೊಗ್ಗದ ಕೆ. ಅಕ್ಷತಾ (2023), ಮಂಗಳೂರಿನ ವಿಲ್ಸನ್ ಕಟೀಲ್ (2024) ಮತ್ತು ರಾಯಚೂರಿನ ಆರಿಫ್ ರಾಜಾ (2025) ಆಯ್ಕೆಯಾಗಿದ್ದಾರೆ. ಪ್ರಶಸ್ತಿ ತಲಾ ರೂ. ಹತ್ತು ಸಾವಿರ ನಗದು ಹೊಂದಿದೆ.
ರಾಜ್ಯಮಟ್ಟದ ಯುವ ಕಥೆ ಸ್ಪರ್ಧೆಯಲ್ಲಿ ಮಣಿಕಂಠ ಗೊದಮನಿ (ಪ್ರಥಮ), ಸಂತೋಷ ನಾಯಿಕ (ದ್ವಿತೀಯ), ಪ್ರಹ್ಲಾದ ಡಿ.ಎಂ. (ತೃತೀಯ), ರಾಜ್ಯಮಟ್ಟದ ಯುವ ಕಾವ್ಯ ಸ್ಪರ್ಧೆಯಲ್ಲಿ ವಿದ್ಯಾ (ಪ್ರಥಮ), ಮಂಜುಳಾ ಜಿ.ಎಚ್. (ದ್ವಿತೀಯ), ಅರಳಿ ಶಿವರಾಜ (ತೃತೀಯ) ಮತ್ತು ಶ್ರೀ ಮುದ್ರಾಡಿ (4ನೇ ಸ್ಥಾನ) ಗಳಿಸಿದ್ದಾರೆ. ಅವರಿಗೂ ಇದೇ ಸಂದರ್ಭದಲ್ಲಿ ಬಹುಮಾನ ನೀಡಲಾಗುವುದು.
