ಕಾಸರಗೋಡು : “ಕನ್ನಡ ನೆಲವಾಗಿದ್ದ ಕಾಸರಗೋಡಿನ ನಾಡು ನುಡಿ ಸಂಸ್ಕೃತಿಗಳನ್ನು ಉಳಿಸುವ, ಬೆಳೆಸುವಲ್ಲಿ ರಂಗ ಚಿನ್ನಾರಿ ಸಾಂಸ್ಕೃತಿಕವಾಗಿ ತನ್ನದೇ ಆದ ಕೊಡುಗೆಯನ್ನು ಕೊಡುತ್ತಲೇ ಇದೆ. ಇದೀಗ ಅಂತರ್ ಧ್ವನಿ ಕಾರ್ಯಕ್ರಮದ ಮೂಲಕ ಸ್ಥಳೀಯ ಗಾಯನ ಪ್ರತಿಭೆಗಳನ್ನು ಉತ್ತೇಜಿಸುವ ಕೆಲಸವನ್ನು ಸ್ವರಚಿನ್ನಾರಿಯ ಮೂಲಕ ರಂಗ ಚಿನ್ನಾರಿ ಮಾಡುತ್ತಿದೆ. ಕರೋಕೆ ಎಂದರೆ ಗಾಯನ ರಹಿತ ವಾದ್ಯ ಮೇಳ, ಗಾಯಕ ಗಾಯಕಿಯರ ಹಾಡಿಗೆ ಇದು ಹಿನ್ನೆಲೆಯನ್ನು ಕೊಡುತ್ತದೆ. ಸಾಂಕೇತಿಕವಾಗಿ ಇದು ಇಲ್ಲಿನ ಮೂಲಸೆಲೆಗೆ ಅಭಿಮಾನದ ದನಿಯನ್ನು ಸೇರಿಸುವ ಪ್ರಕ್ರಿಯೆ.” ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಪತ್ರಕರ್ತ ಬಾ. ನಾ. ಸುಬ್ರಮಣ್ಯ ಹೇಳಿದರು. ಅವರು ದಿನಾಂಕ 24 ಮೇ 2025ರ ಶನಿವಾರದಂದು ಪದ್ಮಗಿರಿ ಕಲಾ ಕುಟೀರದಲ್ಲಿ ಜರಗಿದ ಅಂತರ್ಧ್ವನಿ -4 ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ತಂತ್ರಜ್ಞ, ಸಾಹಿತಿ ಮೈಸೂರಿನ ಉಮೇಶ್ ಇವರು ಮಾತನಾಡಿ “ಕನ್ನಡದ ಸಹೃದಯರನ್ನೆಲ್ಲಾ ಒಂದೆಡೆ ಸೇರಿಸಿ ಸಾಂಸ್ಕೃತಿಕ ಕಲರವಗಳ ಮೂಲಕ ಧ್ವನಿಯಾಗುವ ರಂಗಚಿನ್ನಾರಿಗೆ ಅಭಿನಂದನೆ, ಶುಭಾಶಯಗಳು. ಅಂತರಂಗದಲ್ಲಿರುವ ಪ್ರತಿಭೆ ಹೊರಹೊಮ್ಮಲು ವೇದಿಕೆಗಳ ಅಗತ್ಯವಿದೆ. ಕಾಸರಗೋಡಿನಲ್ಲಿ ಈ ತರಹದ ವೇದಿಕೆ ನಿಜಕ್ಕೂ ಜನ ಮೆಚ್ಚುವಂಥದ್ದು” ಎಂದರು.
ರಂಗ ಚಿನ್ನಾರಿಯ ನಿರ್ದೇಶಕರಾದ ಕೆ. ಸತೀಶ್ ಚಂದ್ರ ಭಂಡಾರಿ, ಕೆ. ಸತ್ಯನಾರಾಯಣ, ಸ್ವರ ಚಿನ್ನಾರಿಯ ರತ್ನಾಕರ ಓಡಂಗಲ್ಲು, ಅಕ್ಷತಾ ವರ್ಕಾಡಿ, ಉಷಾ ಟೀಚರ್, ಬಬಿತಾ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ರಂಗ ಚಿನ್ನಾರಿಯ ನಿರ್ದೇಶಕರು, ಸಂಚಾಲಕರೂ ಆಗಿರುವ ಕಾಸರಗೋಡು ಚಿನ್ನಾ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾಸರಗೋಡಿನ ಹಲವಾರು ಗಾಯಕ ಗಾಯಕಿಯರು ಅಂತರ್ದ್ವನಿ-4ರಲ್ಲಿ ಭಾಗವಹಿಸಿದರು.