Subscribe to Updates
Get the latest creative news from FooBar about art, design and business.
Author: roovari
ಕಾಸರಗೋಡಿನ ಕುರಿತಾದ ತಮ್ಮ ಒಡಲ ನಂಟನ್ನು ಲೋಕಕ್ಕೆ ಸಾರುವ ಬಗೆಯಲ್ಲಿ ತಮ್ಮ ಹೆಸರಿನೊಂದಿಗೆ ಈ ಗಡಿನಾಡಿನ ಹೆಸರನ್ನು ಬಿಡದೆ ಬಳಸುತ್ತ ಬಂದಿದ್ದ ವೇಣುಗೋಪಾಲ ಕಾಸರಗೋಡು 18 ವರ್ಷಗಳ ಹಿಂದೆ ನಮ್ಮನ್ನಗಲಿ ಈಗ ನೆನಪು ಮಾತ್ರವಾಗಿದ್ದಾರೆ. ನಮ್ಮ ಕರಾವಳಿಯ ಉದ್ದಗಲಕ್ಕೆ ಮಾತ್ರವಲ್ಲ ಅಖಿಲ ಕರ್ನಾಟಕಕ್ಕೂ ಅದರಾಚೆಗೂ ಅವರು ಕಾಸರಗೋಡಿನೊಂದಿಗೇ ಗುರುತಿಸಲ್ಪಟ್ಟವರು. ವಾಸ್ತವವಾಗಿ ಅವರು ಕರ್ನಾಟಕದ ಅನೇಕರ ಬಾಯಿಯಲ್ಲಿ ಕೇವಲ ‘ಕಾಸರಗೋಡು’ ಆಗಿದ್ದರು. ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಕನ್ನಡವನ್ನು ಬೋಧಿಸುವುದರೊಂದಿಗೆ ಸಾಹಿತ್ಯ ರಂಗಭೂಮಿ, ಸಿನೆಮಾ, ಕನ್ನಡ ಹೋರಾಟ-ಹೀಗೆ ಅತ್ಯಂತ ಕ್ರಿಯಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡು ವಿದ್ಯಾರ್ಥಿಗಳೂ ಸೇರಿದಂತೆ ಅನೇಕ ಎಳೆಯರಿಗೆ ಕನ್ನಡದ ದೀಕ್ಷೆಯನ್ನೂ, ಹೋರಾಟದ ಸ್ಫೂರ್ತಿಯನ್ನೂ, ಸೃಜನಶೀಲತೆಯ ನಂಟನ್ನೂ ಬೆಸೆದು ಗುರು ಧರ್ಮವನ್ನು ಪಾಲಿಸಿದ್ದರು. ನೀರ್ಚಾಲಿನ ಸಮೀಪದ ಪೊನ್ನೆಪ್ಪಲದಲ್ಲಿ ತಮ್ಮ ಬಾಲ್ಯವನ್ನು ಕಳೆದ ಅವರಿಗೆ ತಾವು ಕಲಿತ ಸ್ಥಳೀಯ ವಿದ್ಯಾ ಸಂಸ್ಥೆ ಮಹಾಜನ ಕಾಲೇಜು ಮತ್ತು ಹೈಸ್ಕೂಲು ಕೊಟ್ಟ ಸಾಹಿತ್ಯ ಮತ್ತು ಕಲೆಯ ಸಂಸ್ಕಾರ ದೊಡ್ಡದು. ಅದನ್ನು ಮುಂದೆ ಅವರು ಸ್ವಪ್ರಯತ್ನದಿಂದ ಬೆಳೆಸಿಕೊಂಡರು. ನವ್ಯಕಾವ್ಯದ ಹರಿಕಾರ…
ದಕ್ಷಿಣ ಕೊರಿಯಾ : ಮಂಗಳೂರಿನ ನೃತ್ಯ ಸಂಸ್ಥೆಗಾನ ನೃತ್ಯ ಅಕಾಡೆಮಿಯ ತಂಡವು ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರ ಸಚಿವಾಲಯದ ಪ್ರಾಯೋಜಕತ್ವದಲ್ಲಿ ದಕ್ಷಿಣ ಕೊರಿಯಾದಲ್ಲಿ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿರುತ್ತದೆ. ದಿನಾಂಕ 06-10-2023ರಿಂದ 12-10-2023ರವರೆಗೆ ದಕ್ಷಿಣ ಕೊರಿಯಾದ ವಿವಿಧ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮಗಳು, ಪ್ರಾತ್ಯಕ್ಷಿಕೆ ಹಾಗೂ ಕಾರ್ಯಾಗಾರಗಳನ್ನು ಸಂಸ್ಥೆಯ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ನಡೆಸಿಕೊಟ್ಟಿದ್ದಾರೆ. ಭಾರತಿಯ ಸಂಸ್ಕೃತಿ ಸಚಿವಾಲಯದ ಅಂಗ ಸಂಸ್ಥೆಯಾದ ಐ.ಸಿ.ಸಿ.ಆರ್. (ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್)ನ ದಾಖಲಿತ ಕಲಾವಿದೆಯಾಗಿರುವ ವಿದ್ಯಾಶ್ರೀ ರಾಧಾಕೃಷ್ಣ ಭಾರತವನ್ನು ಪ್ರತಿನಿಧಿಸಿ ಐ.ಸಿ.ಸಿ.ಆರ್. ಪ್ರಾಯೋಜಿತ ನೃತ್ಯ ಪ್ರವಾಸ ಮಾಡಿದ ಮಂಗಳೂರಿನ ಪ್ರಥಮ ಕಲಾವಿದೆಯಾಗಿದ್ದಾರೆ. ತಂಡದಲ್ಲಿ ವಿದ್ಯಾಶ್ರೀ ಶಿಷ್ಯೆಯರಾದ ಅಂಕಿತಾ ರೈ, ಮೇಘ ಮಲರ್ ಪ್ರಭಾಕರ್, ತ್ವಿಷಾ ಶೆಟ್ಟಿ, ದಿಶಾ ಗಿರೀಶ್, ಪೂರ್ವೀಕೃಷ್ಣಾ ಹಾಗೂ ಬಿಲ್ವ ಕಲಾ ಸಂಸ್ಥೆಯ ನಿರ್ದೇಶಕಿ ರಶ್ಮಿ ಉಡುಪ ಹಾಗೂ ತಾಂತ್ರಿಕ ಸಹಕಾರಕ್ಕಾಗಿ ರಾಧಾಕೃಷ್ಣ ಭಟ್ ಭಾಗವಹಿಸಿದ್ದರು.
ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಮತ್ತು ನಾಗರಿಕ ಸಲಹಾ ಸಮಿತಿ (ರಿ) ಸುರತ್ಕಲ್ ಆಶ್ರಯದಲ್ಲಿ ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ಉದಯರಾಗ – 46 ಶಾಸ್ತ್ರೀಯ ಸಂಗೀತ ಸರಣಿ ಕಾರ್ಯಕ್ರಮ ದಿನಾಂಕ 05-11-2023ರಂದು ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಲಾವಿದೆ ಗೀತಾ ಸುರತ್ಕಲ್ ಇವರು ಮಾತನಾಡಿ “ಯುವಜನತೆ ಶಾಸ್ತ್ರೀಯ ಸಂಗೀತ ಕಲೆಗಳತ್ತ ಆಕರ್ಷಿತರಾಗಬೇಕಾದ ಅವಶ್ಯಕತೆಯಿದೆ. ಉದಯರಾಗದಂತಹ ಶಾಸ್ತ್ರೀಯ ಸಂಗೀತ ಕಛೇರಿಗಳಿಂದ ಯುವಕಲಾವಿದರಿಗೆ ಪ್ರೋತ್ಸಾಹ ದೊರೆಯುತ್ತದೆ” ಎಂದು ನುಡಿದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಇದರ ಅಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಾತನಾಡಿ “ಆಂತರಂಗಿಕ ಜ್ಞಾನದ ಬೆಳಕನ್ನು ಹೊರಹೊಮ್ಮಿಸುವ ಶಾಸ್ತ್ರೀಯ ಸಂಗೀತಾಸ್ವಾದನೆ ವಿಶಿಷ್ಟ ಅನುಭವ” ಎಂದರು. ಉಡುಪಿಯ ಗಾರ್ಗಿ ಶಬರಾಯ ಅವರಿಂದ ಹಾಡುಗಾರಿಕೆ ನಡೆಯಿತು. ವಯಲಿನ್ನಲ್ಲಿ ಧನ್ಯಶ್ರೀ ಶಬರಾಯ ಹಾಗೂ ಮೃದಂಗದಲ್ಲಿ ಸುಮುಖ ಕಾರಂತ್ ಸುರತ್ಕಲ್ ಸಹಕರಿಸಿದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ (ರಿ) ಕಾರ್ಯದರ್ಶಿ ಪಿ.ನಿತ್ಯಾನಂದರಾವ್ ಕಾರ್ಯಕ್ರಮ ನಿರೂಪಿಸಿದರು.
ಸಾಲಿಗ್ರಾಮ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ – ಐರೋಡಿ ಇದರ ವತಿಯಿಂದ ಕಲಾಕೇಂದ್ರದ ನಿಕಟಪೂರ್ವ ಅಧ್ಯಕ್ಷರು ಮತ್ತು ರಂಗಭೂಮಿ ನಿರ್ದೇಶಕರಾದ ಐರೋಡಿ ವೈಕುಂಠ ಹೆಬ್ಬಾರ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ‘ವೈಕುಂಠ ಹೆಬ್ಬಾರ್ ಪ್ರಶಸ್ತಿ ಪುರಸ್ಕಾರ -2023 ಪ್ರದಾನ ದಿನಾಂಕ 12-11-2023 ಮಧ್ಯಾಹ್ನ 3 ಗಂಟೆಯಿಂದ ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಕಲಾಕೇಂದ್ರದ ಅಧ್ಯಕ್ಷರಾದ ಶ್ರೀ ಆನಂದ ಸಿ. ಕುಂದರ್, ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಕೆ.ಎಸ್. ಕಾರಂತ್, ಸದಸ್ಯರಾದ ಶ್ರೀ ಅನಂತ ಪದ್ಮನಾಭ ಐತಾಳ ಮತ್ತು ಕುಂದಾಪುರದ ಸಂಗೀತ ಭಾರತಿ ಟ್ರಸ್ಟಿನ ಕಾರ್ಯದರ್ಶಿಯಾದ ಶ್ರೀ ಕೆ. ನಾರಾಯಣ ಇವರ ಉಪಸ್ಥಿತಿಯಲ್ಲಿ ರಂಗಭೂಮಿ ಕಲಾವಿದ, ಚಲನ ಚಿತ್ರನಟ, ಯಕ್ಷಗಾನ ಕಲಾವಿದರಾದ ಶ್ರೀ ಕೆ.ಎಸ್. ಶೇಖರ ಆಚಾರ್ಯ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಕವಿ ಪಾಂಡೇಶ್ವರ ವೆಂಕಟ ರಚಿತ ‘ಕರ್ಣಾರ್ಜುನ ಕಾಳಗ’ ಪ್ರಸಂಗದ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.
ಪುತ್ತೂರು : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇವರ ವತಿಯಿಂದ ತಿಂಗಳ ಸರಣಿ ಕಾರ್ಯಕ್ರಮದ ಅಂಗವಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ನವಗ್ರಹ ಗುಡಿಯಲ್ಲಿ ‘ಸೀತಾಪಹಾರ’ ಎಂಬ ತಾಳಮದ್ದಳೆಯು ದಿನಾಂಕ 06-11-2023ರಂದು ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಲಕ್ಷ್ಮೀ ನಾರಾಯಣ ಭಟ್ ಬಟ್ಯಮೂಲೆ, ಸತೀಶ್ ಇರ್ದೆ, ಆನಂದ ಸವಣೂರು ಹಾಗೂ ಚೆಂಡೆ, ಮದ್ದಳೆಗಳಲ್ಲಿ ಪ್ರೊ. ದಂಬೆ ಈಶ್ವರ ಶಾಸ್ತ್ರಿ, ಮುರಳೀಧರ ಕಲ್ಲೂರಾಯ, ಅಚ್ಚುತ ಪಾಂಗಣ್ಣಾಯ ಮತ್ತು ಮಾ. ಪರೀಕ್ಷಿತ್ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಅಡಿಗ ಮತ್ತು ಶುಭಾ ಗಣೇಶ್ (ಶ್ರೀ ರಾಮ), ಕಿಶೋರಿ ದುಗ್ಗಪ್ಪ ನಡುಗಲ್ಲು ಮತ್ತು ಮನೋರಮಾ ಜಿ. ಭಟ್ (ಸೀತೆ), ಭಾರತಿ ನೆಲ್ಲಿತ್ತಾಯ (ಲಕ್ಷ್ಮಣ), ಶಾರದಾ ಅರಸ್ (ಜಟಾಯು), ಹರಿಣಾಕ್ಷಿ ಜೆ. ಶೆಟ್ಟಿ (ರಾವಣ) ಮತ್ತು ಭಾರತಿ ರೈ (ಸನ್ಯಾಸಿ ರಾವಣ) ಪಾತ್ರಗಳಲ್ಲಿ ಭಾಗವಹಿಸಿದರು. ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ರಂಗನಾಥ ರಾವ್ ಸಹಕರಿಸಿದರು.
ಬೆಂಗಳೂರು: ಸಾಮಾನ್ಯವಾಗಿ ನೃತ್ಯಕಲಾವಿದರು ಸಶ್ರಮದಿಂದ ಬಹುಕಾಲ ಸೂಕ್ತ ನೃತ್ಯ ತರಬೇತಿಯನ್ನು ಪಡೆದು, ಅವರು ಅರ್ಜಿಸಿದ ವಿದ್ಯೆಯನ್ನು ಕಲಾರಸಿಕರ ಮುಂದೆ ಅನಾವರಣಗೊಳಿಸಲು ಹಲವು ಸಂದರ್ಭಗಳಿರುತ್ತವೆ. ‘ರಂಗಪ್ರವೇಶ’ವನ್ನು ವಿದ್ಯುಕ್ತವಾಗಿ ನೆರವೇರಿಸಿಕೊಳ್ಳುವ ಮುನ್ನ ಉತ್ತಮ ಮುಹೂರ್ತವನ್ನು ನೋಡಿ ಗುರುಗಳ ಮುಖೇನ ‘ಗೆಜ್ಜೆಪೂಜೆ’ ಮಾಡಿಸಿಕೊಂಡು ವೇದಿಕೆಯ ಮೇಲೆ ನೃತ್ಯಕಾರ್ಯಕ್ರಮವನ್ನು ಪ್ರಸ್ತುತಪಡಿಸುವುದು ಸಂಪ್ರದಾಯ. ಆನಂತರ ‘ರಂಗಪ್ರವೇಶ’ ಮಾಡಿ ತದನಂತರ ವಿದ್ಯಾಧಾರೆ ಎರೆದ ಗುರುಗಳಿಗೆ ಕೃತಜ್ಞತೆ ವ್ಯಕ್ತಪಡಿಸುವ ಸಲುವಾಗಿ ‘ಗುರುವಂದನಾರ್ಪಣೆ’ ಸಲ್ಲಿಸಿ, ನರ್ತನ ಮಾಡುತ್ತಾರೆ. ಇಂಥ ಒಂದು ಸದಾವಕಾಶ ಸಾಧನೆಯ ಪಥದಲ್ಲಿರುವ ನೃತ್ಯಕಲಾವಿದೆ ಮೇಘನಾ ಪಾಲಿಗೆ ಇದೀಗ ಒಲಿದು ಬಂದಿದೆ. ಶ್ರೀ ಯೋಗ ನರಸಿಂಹರಾವ್ ಹಾಗೂ ಪಾರ್ವತಿ ಅವರ ಪುತ್ರಿಯಾದ ಮೇಘನಾ ವೈ. ರಾವ್ ಸಾಕಷ್ಟು ಕಾಲ ಪರಿಶ್ರಮಿಸಿರುವ ಭರತನಾಟ್ಯ ಪರಿಣತ ನೃತ್ಯಕಲಾವಿದೆ. ತನ್ನ 5ರ ಎಳವೆಯಲ್ಲೇ ಡಾ. ಲಕ್ಷ್ಮೀ ಎನ್. ಮೂರ್ತಿ, ಡಾ. ಸ್ವರೂಪ ಲಕ್ಷ್ಮೀ ಹಾಗೂ ವಿದುಷಿ ಮಂಜು ಭೈರವಿ ಅವರಲ್ಲಿ 20ಕೂ ಹೆಚ್ಚಿನ ವರ್ಷಗಳು ನೃತ್ಯಾಭ್ಯಾಸ ಮಾಡಿದವರು. ಮುಂದೆ ಗುರು ಶ್ರುತಿ ಗೋಪಾಲ್ ಅವರಲ್ಲಿ ಹೆಚ್ಚಿನ…
ಕರಾವಳಿಯಲ್ಲಿ ಭರತ ನೃತ್ಯಕ್ಕೆ ಸಂಬಂಧಿಸಿದಂತೆ ಉಚ್ಚಿಲ ಸುಬ್ಬರಾವ್ ಕೃಷ್ಣರಾವ್ ಎಂಬ ಹೆಸರನ್ನು ಹೇಳಿದರೆ ಯಾರಿಗೂ ತಿಳಿಯದು, ಅವರನ್ನೇ ಯು.ಎಸ್.ಕೃಷ್ಣರಾಯರೆಂದರೆ ‘ಹೋ’ ಎಂಬ ಉದ್ಗಾರ ಮೂಡದಿರದು. ‘ಕದಿರೆಯ ರಾಜಮಾಷ್ಟ್ರು’ ಎಂಬುದಂತೂ ಇವರ ಜನಪ್ರಿಯ ಹೆಸರು. ‘ರಾಜ’ ಎಂದು ಭರತ ನೃತ್ಯಕ್ಕೆ ಸಂಬಂಧಿಸಿದಂತೆ ಅವರ ಪ್ರಿಯಶಿಷ್ಯರ ಹಾಗೂ ಅಭಿಮಾನಿಗಳ ಸಂಬೋಧನೆಯಾದರೂ ಅವರಿಗದು ಅನ್ವರ್ಥ. ಕರಾವಳಿಯಲ್ಲಿ ನೃತ್ಯಕ್ಕೆ ಆಧಾರಸ್ತಂಭವೊದಗಿಸಿದ ‘ರಾಜಾಶ್ರಯ’ (ರಾಜನ್ ಅಯ್ಯರ್ ಮತ್ತು ರಾಜರತ್ನಂ ಪಿಳ್ಳೆ ಇನ್ನಿಬ್ಬರು)ರಲ್ಲಿ ಒಬ್ಬರಾಗಿ, ಕೃಷ್ಣರಾಯರು ಮಾನ್ಯರು ನಂತರದ ದಿನಗಳಲ್ಲಿ ಆ ಕಲೆಯನ್ನು ವಿವಿಧ ರೀತಿಗಳಲ್ಲಿ ಪಸರಿಸಿದ ‘ಕೃಷ್ಣ ಚತುಷ್ಟಯ’ (ಮು.ವಿಠಲ್, ಮುರಳೀಧರ ರಾಯರು ಮತ್ತು ಉಳ್ಳಾಲ ಮೋಹನ್ ಕುಮಾರ್ ಇತರ ಮೂವರು)ರ ಪಟ್ಟಿಯಲ್ಲೂ ಅವರು ಸ್ಥಾನ ಗಳಿಸುತ್ತಾರೆ. ರಾಜನ್ ಅಯ್ಯರ್ ಅವರು ಕರಾವಳಿಗೆ ಕಾಲಿಡುವುದಕ್ಕೂ ಮೊದಲೇ ಮಂಗಳೂರಿನಲ್ಲಿ ನೃತ್ಯವನ್ನು ಕಲಿಸುತ್ತಿದ್ದವರು (1941ರಲ್ಲಿ ನೃತ್ಯ ವಿದ್ಯಾನಿಲಯವನ್ನು ಸಂಸ್ಥಾಪಿಸುವುದಕ್ಕೂ ಮೊದಲೇ) ಈ ಕಲಾತಪಸ್ವಿ. ಮಂಗಳೂರಿಗೆ ನೃತ್ಯ ಕಲಿಸುವುದಕ್ಕಾಗಿಯೇ ಬಂದ ನೃತ್ಯ ಗುರುಗಳಿಗೆ ಅವಕಾಶವೊದಗಿಸಿದ ಉದಾರಿ. ನೃತ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಕಲಾಸಾಧಕ, ಅತ್ಯುತ್ತಮ…
ಮಂಗಳೂರು : ಅಖಿಲ ಭಾರತೀಯ ಕೊಂಕಣಿ ಪರಿಷತ್ತು ಆಯೋಜಿಸಿರುವ 25ನೇ ‘ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ’ವು ದಿನಾಂಕ 04-11-2023 ಮತ್ತು 05-11-2023ರಂದು ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯಿತು. ಈ ಸಮ್ಮೇಳನವನ್ನು ದಿನಾಂಕ 04-11-2023ರಂದು ಹಿಂದಿ ಕವಿ, ವಿಮರ್ಶಕ ಉದಯನ್ ವಾಜಪೇಯಿ ಇವರು ಉದ್ಘಾಟಿಸಿ ಮಾತನಾಡುತ್ತಾ “ಆಳುವ ವರ್ಗವು ಸಾಹಿತಿಗಳನ್ನು ಸಮಾಜದ್ರೋಹಿಗಳಂತೆ ಬಿಂಬಿಸುತ್ತಿದೆ. ಸತ್ಯದ ಪ್ರತಿಪಾದನೆ ಮಾಡದಂತೆ ಹಾಗೂ ತಮ್ಮ ನಿಲುವುಗಳನ್ನು ಮಾರ್ಪಾಡು ಮಾಡಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ. ಈ ನಡುವೆಯೂ ತಮ್ಮ ಅಸ್ತಿತ್ವ ಕಳೆದುಕೊಳ್ಳಲು ಬಯಸದ ಸಾಹಿತಿಗಳು ಶೋಷಿತರ ಪರ ದನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೇರ ಬೇರೆ ಸಂಸ್ಕೃತಿ, ಕಲೆಗಳ ಜತೆಗೆ ಆಯಾ ಪ್ರದೇಶಗಳ ಭಾಷೆಗಳೂ ದೇಶದ ಐಕ್ಯತೆಗೆ ಮೂಲ ಆಧಾರ. ಬೇರೆ ಬೇರೆ ಪ್ರದೇಶಗಳಲ್ಲಿ ಭಾಷೆಗಳು ಬದಲಾದರೂ, ಅವು ಪರಸ್ಪರ ಬೆಸೆದು ನಿರಂತರತೆಯನ್ನು ಕಾಯ್ದುಕೊಂಡಿವೆ. ನಿರ್ದಿಷ್ಟ ಭಾಷೆಯ ಬಗ್ಗೆ ನಮಗೆ ತಿಳಿಯದೇ ಇರಬಹುದು. ಆದರೂ ಅವು ನಮ್ಮಲ್ಲಿ ಪ್ರತ್ಯೇಕತೆಯ ಭಾವ ಮೂಡಿಸುವುದಿಲ್ಲ. ಪ್ರಭುತ್ವವನ್ನು ಪ್ರಶ್ನಿಸುವ ಸೃಜನಾತ್ಮಕತೆಯು ಉಳಿದುಕೊಂಡಿದ್ದರೆ ಸಾಹಿತ್ಯ ಮತ್ತು…
ಮಂಗಳಗಂಗೋತ್ರಿ : ಮಂಗಳೂರು ವಿಶ್ವವಿದ್ಯಾನಿಲಯ ಕನಕದಾಸ ಅಧ್ಯಯನ ಪೀಠ, ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಇದರ ಸಹಯೋಗದೊಂದಿಗೆ ‘ಬಸವಣ್ಣ ಮತ್ತು ಕನಕದಾಸರ ಇಹ ಪರ ಲೋಕದೃಷ್ಟಿ’ ಎಂಬ ವಿಷಯದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವು ದಿನಾಂಕ 08-11-2023ರಂದು ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ. ಬಿ.ವಿ ವಸಂತಕುಮಾರ್ ಇವರು ಮಾತನಾಡುತ್ತಾ “ಬಸವಣ್ಣ ಮತ್ತು ಕನಕದಾಸರು ನಡೆನುಡಿಯ ಸಿದ್ಧಾಂತಕ್ಕೆ ಬದ್ಧರಾಗಿದ್ದರು. ಅವರು ಇಹಪರ ಚಿಂತನೆಗಳಲ್ಲಿ ಸಹಜತೆಯನ್ನು ಪುರಸ್ಕರಿಸಿದ್ದರು. ಡಾಂಭಿಕತೆಯನ್ನು ಸದಾ ವಿರೋಧಿಸಿದವರು. ನಾನು ಎಂಬುದು ಹೋಗಿ ನಾವು ಎಂಬ ಸಮಷ್ಟಿ ಭಾವ ಬರಬೇಕಾದರೆ ಆತ್ಮವಿಮರ್ಶೆಯ ಗುಣ ನಮ್ಮಲ್ಲಿರಬೇಕು. ಇವರಿಬ್ಬರ ಲೋಕದೃಷ್ಟಿ ಸತ್ಯದ ಹುಡುಕಾಟವೇ ಆಗಿದೆ. ಮನುಷ್ಯರಿಗೆ ಛಲಬೇಕು ಎಂಬ ಅಂಶವನ್ನು ಪ್ರತಿಪಾದಿಸಿದ ಶರಣ ಮತ್ತು ದಾಸ ಪರಂಪರೆಗಳ ನಾಮರೂಪಗಳು ಭಿನ್ನವಾಗಿದ್ದರೂ ದೃಷ್ಟಿ ಮಾತ್ರ ಒಂದೇ ಆಗಿತ್ತು. ಅದು ಜೀವ ಪರವೂ, ಜೀವ ವಿಕಾಸ ಪರವೂ…
ವಿವಿಧ ನಾಟ್ಯರೂಪಗಳಲ್ಲಿ ಹಲವಾರು ರಾಮಾಯಣದ ನೃತ್ಯರೂಪಕಗಳು ಇದುವರೆಗೂ ಪ್ರಸ್ತುತವಾಗಿದ್ದರೂ ಬಹುಶಃ ಕೂಚಿಪುಡಿ ನೃತ್ಯಶೈಲಿಯಲ್ಲಿ ಸಂಪೂರ್ಣ ಆಧ್ಯಾತ್ಮ ರಾಮಾಯಣದ ನೃತ್ಯರೂಪಕ ವೇದಿಕೆಯ ಮೇಲೆ ಪ್ರದರ್ಶನಗೊಂಡದ್ದು ಇದೇ ಮೊದಲೆನ್ನಬಹುದು. ದಿನಾಂಕ 28-10-2023ರಂದು ‘ಕೂಚಿಪುಡಿ ಪರಂಪರಾ ಫೌಂಡೇಶನ್’ ನೃತ್ಯ ಸಂಸ್ಥೆಯು ತನ್ನ ‘ನಾಟ್ಯ ಪರಂಪರ ದಶಮಾನೋತ್ಸವ’ದ ಸಂಭ್ರಮಾಚರಣೆಯನ್ನು ಸಂಜಯನಗರದ ರಮಣ ಮಹರ್ಷಿ ಹೆರಿಟೇಜ್ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ಅಚರಿಸಿತು. ಈ ಸಂದರ್ಭದಲ್ಲಿ ‘ಭವನುತ’ ಎಂಬ ನೃತ್ಯರೂಪಕವನ್ನು ವರ್ಣರಂಜಿತವಾಗಿ ಪ್ರದರ್ಶಿಸಿ ಕಲಾರಸಿಕರ ಮನಸ್ಸನ್ನು ಸೆಳೆಯಿತು. ಲಾಸ್ಯ-ಲಾಲಿತ್ಯತೆಗೆ ಹೆಸರಾದ ಕೂಚಿಪುಡಿ ನಾಟ್ಯಶೈಲಿ ಭರತನಾಟ್ಯಕ್ಕಿಂತ ಕೊಂಚ ಭಿನ್ನವಾಗಿದ್ದು ವೇಷಭೂಷಣ-ವಸ್ತ್ರವೈವಿಧ್ಯ, ನೃತ್ಯದ ಧಾಟಿಯಲ್ಲೂ ಸ್ವಲ್ಪ ಬೇರೆಯಾಗಿದ್ದು, ಕಥಾ ನಿರೂಪಣೆ-ಅಭಿನಯ ಪ್ರಸ್ತುತಿಯಲ್ಲಿ ವೇಗಗತಿಯಲ್ಲಿ ಸಾಗುತ್ತ, ಲಾಸ್ಯ ಭಾವ-ಭಂಗಿ, ನಡೆಯಲ್ಲಿ ಚುರುಕಾಗಿ ಪ್ರವಹಿಸುತ್ತದೆ. ಅಂತೆ ನಡೆದ ‘ಭವನುತ’ ಅರ್ಥಪೂರ್ಣ ಶೀರ್ಷಿಕೆಯ ಮೋಹಕ ನೃತ್ಯರೂಪಕ ಪರಿಣಾಮಯುತವಾಗಿ ಪ್ರದರ್ಶಿತಗೊಂಡಿತು. ನಾಲ್ಕುದಶಕಗಳಿಂದ ಅಚ್ಚ ಶಾಸ್ತ್ರೀಯ ಕೂಚಿಪುಡಿಯ ನೃತ್ಯಶೈಲಿಯಲ್ಲಿ ಪರಿಶ್ರಮಿಸುತ್ತಿರುವ ಆಚಾರ್ಯ ದೀಪಾ ನಾರಾಯಣನ್ ಶಶೀಂದ್ರನ್ ಖ್ಯಾತ ಗುರು ಪದ್ಮಭೂಷಣ ಡಾ. ವೆಂಪಟಿ ಚಿನ್ನಸತ್ಯಂ ಅವರ ಶಿಷ್ಯೆ, ತಮ್ಮ ಅಸಂಖ್ಯ ನೃತ್ಯ…