ಬೆಂಗಳೂರು : ವೈಟ್ಫೀಲ್ಡ್ ನ ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟಿನಲ್ಲಿ ‘ತೊದಲ್ನುಡಿ’ ಮಕ್ಕಳ ಸಾಹಿತ್ಯ ಮಾಸಪತ್ರಿಕೆ, ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ-ಗ್ರಂಥಾಲಯ, ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾಸರಗೋಡು ಇವುಗಳು ಸಂಯುಕ್ತವಾಗಿ ‘ಕೇರಳ-ಕರ್ನಾಟಕ ಕನ್ನಡ ನುಡಿ ಸಂಭ್ರಮ’ವನ್ನು ದಿನಾಂಕ 20 ಜುಲೈ 2025ರಂದು ಆಚರಿಸಿದರು.
ಈ ಸಂಭ್ರಮದ ಅಂಗವಾಗಿ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಚುಟುಕು ಕವಿ-ಕಾವ್ಯ ಸಂಗಮ ನಡೆಯಿತು. ಭಾಷೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದವರಿಗೆ, ಕಾಸರಗೋಡು ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ-ಗ್ರಂಥಾಲಯವು 2025ನೇ ಸಾಲಿನ ರಾಷ್ಟ್ರಕವಿ ಗೋವಿಂದಪೈ ರಾಷ್ಟ್ರ ಪ್ರಶಸ್ತಿ, ನಾಡೋಜ ಡಾ. ಕಯ್ಯಾರ ಕಿಞ್ಞಣ್ಣರಾಯ ರಾಷ್ಟ್ರ ಪ್ರಶಸ್ತಿ ಮತ್ತು ಕನ್ನಡ ಪಯಸ್ವಿನಿ ಪ್ರಶಸ್ತಿಗಳನ್ನು ಪ್ರದಾನ ಮಾಡಿತು.
ಡಾ. ಸುಷ್ಮಾ ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕನ್ನಡ ಭವನ ಮತ್ತು ಗ್ರಂಥಾಲಯ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಸ್ಥಾಪಕರಾದ ಡಾ. ವಾಮನ್ರಾವ್ – ಸಂಧ್ಯಾರಾಣಿ ಶಿಕ್ಷಕ ದಂಪತಿಗಳು ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ್ ಮತ್ತಿಹಳ್ಳಿ ಉಪಸ್ಥಿತರಿದ್ದರು.
ಆರ್ಟ್ ಆಫ್ ಲಿವಿಂಗ್ ಆಚಾರ್ಯ ಆರ್. ಶ್ರೀನಿವಾಸ್, ಸರಸ್ವತಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶ್ರೀ ಬಿ. ಶಂಕರ್, ಬೆಂಗಳೂರು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಶ್ರೀ ಹಾ.ಮಾ. ಸತೀಶ್, ಪ್ರೊ. ಕೆ.ಇ. ರಾಧಾಕೃಷ್ಣ, ಸುಬ್ರಹ್ಮಣ್ಯ ಬಾಡೂರು, ಪ್ರೊ. ಮಲರ್ವಿಳಿ ಮಾತನಾಡಿದರು. ಕಾವ್ಯ ಸಂಗಮದಲ್ಲಿ ಪಾಲ್ಗೊಂಡ ಮಕ್ಕಳಿಗೂ ಹಿರಿಯರಿಗೂ ಸರ್ಟಿಫಿಕೇಟ್ ಹಾಗೂ ಪಾರಿತೋಷಿಕ ನೀಡಿ ಗೌರವಿಸಲಾಯಿತು.
ಡಾ. ಸುಷ್ಮಾ ಶಂಕರ್ ಹಾಗೂ ಶ್ರೀ ಪ್ರಕಾಶ್ ಮತ್ತಿಹಳ್ಳಿ ಇವರಿಗೆ ನಾಡೋಜ ಡಾ. ಕಯ್ಯಾರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರೊ. ಕೆ.ಇ. ರಾಧಾಕೃಷ್ಣ, ಶ್ರೀ ಸುಬ್ರಹ್ಮಣ್ಯ ಬಾಡೂರು, ಡಾ. ಬಾಲಕೃಷ್ಣ ಎಸ್. ಮದ್ದೋಡಿ ಇವರಿಗೆ ರಾಷ್ಟ್ರಕವಿ ಗೋವಿಂದಪೈ ರಾಷ್ಟ್ರೀಯ ಪ್ರಶಸ್ತಿ ನೀಡಲಾಯಿತು. ಶ್ರೀ ಹಾ.ಮ. ಸತೀಶ್, ಡಾ. ಮಲರ್ವಿಳಿ, ಡಾ. ರವಿಶಂಕರ್ ಮತ್ತು ಮೇರಿ ಜೋಸೆಫ್ ವಿಜಯ ಕರ್ನಾಟಕ, ಇವರಿಗೆ ಕನ್ನಡ ಪಯಸ್ವಿನಿ ಪ್ರಶಸ್ತಿಗಳು ಲಭಿಸಿದವು.
ಮೂರು ದಶಕಗಳಿಂದ ಭಾಷೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಡಾ. ವಾಮನ್ರಾವ್ – ಸಂಧ್ಯಾರಾಣಿ ಶಿಕ್ಷಕ ದಂಪತಿಗಳಿಗೆ ತೊದಲ್ನುಡಿ ಮಾಸಪತ್ರಿಕೆ ಹಾಗೂ ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟಿನ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಪ್ರೊ. ರಾಕೇಶ್ ಸ್ವಾಗತ ಭಾಷಣ ಮಾಡಿದರು ಮತ್ತು ರೆಬಿನ್ ರವೀಂದ್ರನ್ ಧನ್ಯವಾದಗಳನ್ನು ತಿಳಿಸಿದರು.