ಮಂಗಳೂರು : ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ವೇದಿಕೆ ಮತ್ತು ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಮಂಗಳೂರು ಇವರ ಆಶ್ರಯದಲ್ಲಿ ದಿನಾಂಕ 23 ನವೆಂಬರ್ 2025ರಂದು ಏರ್ಪಡಿಸಿದ್ದ ಕುಂಬ್ಳೆ ಸುಂದರ ರಾವ್ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಂಗಳೂರಿನ ಕೆನರಾ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ನಾ. ದಾಮೋದರ ಶೆಟ್ಟಿ “ಯಕ್ಷಗಾನ ಕಲಾವಿದರು ರಾತ್ರಿ ಹಗಲು ಕಷ್ಟಪಟ್ಟು ಪುರಾಣದ ಹಾಗೂ ಚರಿತ್ರೆಯ ವಿಚಾರಗಳನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದ್ದಾರೆ. ಅವರ ತ್ಯಾಗವನ್ನು ಯಾರೂ ಅಲ್ಲಗಳೆಯಲಾಗದು. ಅವರ ತ್ಯಾಗಕ್ಕೆ ಮಹತ್ವ ಹಾಗೂ ಬೆಲೆ ಕೊಡೋಣ. ಯಕ್ಷಗಾನಕ್ಕೆ ವಿಶೇಷವಾದ ಗೌರವ ಇದೆ. ಆ ಗೌರವವನ್ನು ಉಳಿಸಲು ಯಾರೂ ಅಡ್ಡಿಪಡಿಸುವುದು ಬೇಡ. ಪುರಸ್ಕರಿಸುವುದಕ್ಕೆ ಸಾಧ್ಯವಾದಷ್ಟು ದೇಣಿಗೆ ನೀಡೋಣ” ಎಂದು ಹೇಳಿದರು.

ವಿದ್ವಾಂಸ ಪ್ರಭಾಕರ ಜೋಶಿ ಮಾತನಾಡಿ “ನೇಕಾರರ ಕುಟುಂಬದ ಕುಂಬ್ಳೆ ಸುಂದರ ರಾವ್ ಇವರಿಗೆ ಮಗ್ಗ ಒಲಿಯಲಿಲ್ಲ. ಆದರೆ ಯಕ್ಷಗಾನ ಒಲಿಯಿತು. ಯಕ್ಷಗಾನ ಕಲಾವಿದನೊಬ್ಬ ಜನರಿಂದ ಚುನಾಯಿತರಾಗಿ ಶಾಸಕರಾಗಿದ್ದು ಇದ್ದರೆ, ಅದು ಕುಂಬಳೆ ಮಾತ್ರ. ಯಕ್ಷಗಾನ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿದ್ದ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ದೊಡ್ಡ ಕಲಾವಿದ. ಕುಂಬ್ಳೆ ಸುಂದರ ರಾವ್ ಕುರಿತ ಪೋರ್ಟಲ್ ರೂಪಿಸಿ, ಅವರ ಯಕ್ಷಗಾನದ ಪಾತ್ರಗಳು, ತಾಳಮದ್ದಲೆಯ ಮಾತುಗಾರಿಕೆ, ಅವರು ವಿಧಾನಸಭೆಯಲ್ಲಿ ಮಾಡಿದ ಭಾಷಣ ಮತ್ತು ಇತರ ಭಾಷಣಗಳನ್ನು ಪ್ರಸಾರ ಮಾಡಬಹುದು. ಅವರ ಸ್ಮರಣಾರ್ಥ ಯಕ್ಷಗಾನ ಕಾರ್ಯಕ್ರಮವನ್ನು ಅಚ್ಚುಟ್ಟಾಗಿ ಸಂಘಟಿಸುವ ಕುರಿತ ಕಮ್ಮಟ ಹಮ್ಮಿಕೊಳ್ಳಬಹುದು. ಕೋರ್ಸ್ ಆರಂಭಿಸಬಹುದು” ಎಂದು ಸಲಹೆ ನೀಡಿದರು.

ತೆಂಕುತಿಟ್ಟಿನ ಹೆಸರಾಂತ ಭಾಗವತ ರಘುರಾಮ ಹೊಳ್ಳ ಇವರಿಗೆ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಬಸ್ ಉದ್ಯಮಿ ಜಯಶೀಲ ಅಡ್ಯಂತಾಯ, ನಾಟಕಕಾರ ನವೀನ್ ಶೆಟ್ಟಿ, ಕುಂಬಳೆ ಸುಂದರ ರಾವ್ ಅವರ ಪತ್ನಿ ಸುಶೀಲಾ ಮತ್ತು ಕುಟುಂಬದವರು ಭಾಗವಹಿಸಿದ್ದರು. ಕೆನರಾ ಪದವಿ ಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಶಶಿರಾಜ್ ಕಾವೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ‘ಅಂಗದ ಸಂಧಾನ’ ಯಕ್ಷಗಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಖ್ಯಾತ್ ಶೆಟ್ಟಿ ಮತ್ತು ಚೆಂಡೆ ಮದ್ದಳೆಯಲ್ಲಿ ಸತ್ಯಜಿತ್ ರಾಯಿ, ಸಮರ್ಥ್ ಉಡುಪ, ಮುಮ್ಮೇಳದಲ್ಲಿ ಸರ್ಪಂಗಳ ಈಶ್ವರ ಭಟ್, ಸದಾಶಿವ ಆಳ್ವ ಭಾಗವಹಿಸಿದರು.
