ಬಂಟ್ವಾಳ : ವಿದುಷಿ ಶ್ರೀಮತಿ ವಿದ್ಯಾ ಮನೋಜ್ ಇವರ ನಿರ್ದೇಶನದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ (ರಿ.) ಕಲ್ಲಡ್ಕ, ಭರತನಾಟ್ಯ ಸಂಸ್ಥೆಯ ರಜತ ಕಲಾ ಯಾನ ಸರಣಿ ಕಾರ್ಯಕ್ರಮದ ಅಂಗವಾಗಿ ಬಿ.ಸಿ. ರೋಡಿನ ಸ್ಪರ್ಶಕಲಾ ಮಂದಿರದಲ್ಲಿ ದಿನಾಂಕ 27 ಡಿಸೆಂಬರ್ 2025ರಂದು ‘ಕಲಾಪರ್ವ-2025’ ಕಾರ್ಯಕ್ರಮವು ನಡೆಯಿತು.

ಕಲಾ ಸಂಸ್ಥೆಯ ಬಿ.ಸಿ. ರೋಡ್ ಮತ್ತು ಕಲ್ಲಡ್ಕ ಶಾಖೆಗಳ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮವು ನಡೆಯಿತು. ಮುಖ್ಯ ಅತಿಥಿಗಳಾಗಿ ಪುತ್ತೂರಿನ ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ ಅಂಡ್ ಕಲ್ಚರ್ ಇದರ ನಿರ್ದೇಶಕಿಯಾದ ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ, ನೃತ್ಯ ಸಂಸ್ಥೆಯ ಸಾಧನೆಯನ್ನು ಶ್ಲಾಘಿಸುವುದರೊಂದಿಗೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು.



ಪ್ರಾಸ್ತಾವಿಕ ಮಾತುಗಳ ಮೂಲಕ ಕಲಾ ಸಂಸ್ಥೆಯ 25 ವರ್ಷಗಳ ನೃತ್ಯ ಪಯಣವನ್ನು ವಿದುಷಿ ವಿದ್ಯಾ ಮನೋಜ್ ಇವರು ತೆರೆದಿಟ್ಟರು.
ಹಿಮ್ಮೇಳ ಕಲಾವಿದರಾಗಿ ನಟುವಾಂಗ ಹಾಗೂ ನೃತ್ಯ ನಿರ್ದೇಶನದಲ್ಲಿ ವಿದುಷಿ ಶ್ರೀಮತಿ ವಿದ್ಯಾ ಮನೋಜ್, ಹಾಡುಗಾರಿಕೆಯಲ್ಲಿ ವಿದ್ವಾನ್ ಶ್ರೀ ಕೃಷ್ಣ ಆಚಾರ್ಯ ಪಾಣೆಮಂಗಳೂರು ಮತ್ತು ವಿದುಷಿ ಡಾ. ಶ್ರೀದೇವಿ ಕಲ್ಲಡ್ಕ, ಮೃದಂಗ ವಾದನದಲ್ಲಿ ವಿದ್ವಾನ್ ಶ್ರೀ ಗೀತೇಶ್ ಎ.ಜಿ. ನೀಲೇಶ್ವರ, ಕೊಳಲು ವಾದನದಲ್ಲಿ ಶ್ರೀ ಎ.ಎಸ್. ಹರಿಪ್ರಸಾದ್ ನೀಲೇಶ್ವರ ಇವರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗನ್ನು ನೀಡಿದರು. ಶ್ರೀಮತಿ ಸೌಮ್ಯ ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಮತಿ ನಯನ ವಂದಿಸಿದರು.



