ಬೆಂಗಳೂರು : ಡ್ರಾಮಾಟ್ರಿಕ್ಸ್ ಬೆಂಗಳೂರು ಪ್ರಸ್ತುತ ಪಡಿಸುವ ‘ಬೀಚಿ ರಸಾಯನ’ ನಾಟಕದ ಪ್ರದರ್ಶನವು ದಿನಾಂಕ 30 ಮೇ 2025ರಂದು ಸಂಜೆ ಘಂಟೆ 7.00ಕ್ಕೆ ಬೆಂಗಳೂರಿನ ಬಸವನಗುಡಿಯಲ್ಲಿರುವ ವಾಡಿಯಾ ಸಭಾಂಗಣದಲ್ಲಿ ನಡೆಯಲಿದೆ.
ಬೀಚಿ ರಸಾಯನ :
ಬದುಕಿನ ನಿತ್ಯ ಬಳಕೆಯಲ್ಲಿ ಜಡ್ಡುಗಟ್ಟಿಸಿಕೊಂಡ ಎಷ್ಟೊ ಪದಗಳಿಗೆ ಬೀಚಿಯವರು ಹೊಸ ಅರ್ಥ ದಕ್ಕಿಸಿಕೊಟ್ಟು ಒಂದು ಪದಕೋಶ ಸಿದ್ಧಮಾಡಿದರು. ಅದೇ ‘ತಿಮ್ಮ ರಸಾಯನ’ ಕೃತಿ. ಇಲ್ಲಿಂದ ಪದಗಳು ಮತ್ತು ಅವುಗಳಿರುವ ಹೊಸ ಅರ್ಥಗಳನ್ನ ಹೆಕ್ಕಿ ಪ್ರಸ್ತುತ ನಾಟಕವನ್ನ ಹೆಣೆಯಲಾಗಿದೆ. ಕಥಾವಸ್ತು ಸ್ವತಂತ್ರ, ಆದರೆ ಅದರ ಒಳಗಿನ ಪದ ಮತ್ತು ಅರ್ಥಗಳ ಜೀವಧಾತು ಬೀಚಿ ಅವರದು. ಭಕ್ತಿ ನಿಜವಾಗಿದ್ದರೆ ಸಾಲದು, ಅದು ಜಾತಿ ಸೋಂಕಿನಿಂದಲೂ ಮುಕ್ತವಾಗಿರಬೇಕು ಎಂಬುದನ್ನು ನಾಟಕೀಯವಾಗಿ ಹೇಳುವ ನಾಟಕ ಇದು. ಇಲ್ಲಿ ಭಕ್ತಿಯ ಪ್ರತೀಕವಾಗಿ ‘ಜಾನಕಮ್ಮ’ ಇದ್ದಾರೆ. ಹಾಗೇ ಎಲ್ಲಿ ಭಕ್ತಿಯ ಪರಾಕಾಷ್ಠತೆ ಇರುತ್ತದೆಯೋ ಅಲ್ಲಿ ವಸ್ತುನಿಷ್ಠ ಗ್ರಹಿಕೆಯೂ ಇರುತ್ತದೆ. ಗುರುಮೂರ್ತಿ ಈ ಪಾತ್ರದ ಸಂಕೇತ. ಈ ಭಕ್ತಿ ಮತ್ತು ವಸ್ತುನಿಷ್ಠತೆಗೆ ತನ್ನದೇ ಆದ ಗುಂಗು ಇರುತ್ತದೆ. ಅದೇ ಇಲ್ಲಿ ‘ ಶ್ರೀಧರ’ನ ಪಾತ್ರವಾಗಿ ಮೈದಾಳಿದೆ. ಈ ಗುಂಗು ತನ್ನ ಅಪ್ಪ ಅಮ್ಮನೆಂಬ ಭಕ್ತಿ ಮತ್ತು ವಸ್ತುನಿಷ್ಠತೆಯನ್ನ ಹೇಗೆ ತಣಿಸುತ್ತದೆ ಎಂಬುದನ್ನು ಈ ನಾಟಕ ಕಟ್ಟಿಕೊಡುತ್ತದೆ. ಸಂಕೇತವಾಗಿಯೂ ನೋಡಬಹುದು ಹಾಗೂ ಕೇವಲ ಪಾತ್ರವಾಗಿಯೂ ಗ್ರಹಿಸಬಹುದು. ಎರಡೂ ಬಗೆ ಬೆರೆತಿರುವುದರಿಂದ ಇದು ‘ರಸಾಯನ’. ಮತ್ತು ಬೀಚಿಯವರಿಂದ ಪದಾರ್ಥಗಳನ್ನ ಎರವಲು ಪಡೆದಿರುವುದರಿಂದ ಇದು ‘ಬೀಚಿ ರಸಾಯನ’
ಎನ್. ಸಿ. ಮಹೇಶ್ ರಚಿಸಿ ನಿರ್ದೇಶಿಸಿರುವ ಈ ನಾಟಕದಲ್ಲಿ ಬಾಬು ಹಿರಣ್ಣಯ್ಯ, ಮಹೇಶ್, ಅರ್ಚನಾ, ಲಕ್ಷ್ಮಣ್ ಪೂಜಾರ್, ಜಗದೀಶ್ ಮಂಜಣ್ಣ, ಶಿವಕುಮಾರ್, ಸಂಜಯ್, ರಕ್ಷಾ, ಮಲ್ಲಿಕಾರ್ಜುನ, ಚಂದ್ರಶೇಖರ್, ಉತ್ತಮ್, ಶ್ರೀನಾಥ್ ಪಾತ್ರ ನಿರ್ವಹಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : 9741906291, 9844867420