ಪುತ್ತೂರು : ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಸಹಾಯಕ ಆಯುಕ್ತರ ಕಾರ್ಯಾಲಯ ಪುತ್ತೂರು ಉಪವಿಭಾಗ, ಡಾ. ಕೋಟ ಶಿವರಾಮ ಕಾರಂತರ ಬಾಲವನ ಸಮಿತಿ ಪುತ್ತೂರು ಇದರ ವತಿಯಿಂದ ಕಡಲ ತಡಿಯ ಭಾರ್ಗವ ಡಾ. ಕೋಟ ಶಿವರಾಮ ಕಾರಂತರ 124ನೇ ಜನ್ಮದಿನಾಚರಣೆ ಮತ್ತು 2024 ಹಾಗೂ 2025ನೇ ಸಾಲಿನ ‘ಡಾ. ಶಿವರಾಮ ಕಾರಂತರ ಬಾಲವನ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 10 ಅಕ್ಟೋಬರ್ 2025ರಂದು ಡಾ. ಕಾರಂತರ ಕರ್ಮಭೂಮಿ ಪರ್ಲಡ್ಕದ ಬಾಲವನ ಬಯಲು ರಂಗಮಂದಿರದಲ್ಲಿ ನಡೆಯಲಿದೆ.
ಈ ಸಮಾರಂಭದದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ವಿಶ್ರಾಂತ ಉಪಕುಲಪತಿ ಹಿರಿಯ ಸಾಹಿತಿ ಡಾ. ಬಿ.ಎ. ವಿವೇಕ ರೈ ಇವರಿಗೆ 2024ರ ಬಾಲವನ ಪ್ರಶಸ್ತಿ, ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಹಿರಿಯ ಶಿಕ್ಷಣ ತಜ್ಞರಾದ ಡಾ. ಸುಕುಮಾರ ಗೌಡರಿಗೆ 2025ರ ಬಾಲವನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕರ್ನಾಟಕ ಸರಕಾರದ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಇವರ ಉಪಸ್ಥಿತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರೂ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳ ಸಚಿವ ಶಿವರಾಜ ಎಸ್. ತಂಗಡಗಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ಸಾಹಿತಿ ಕಾರಂತರ ಸಹೋದರ ಸಂಬಂಧಿ ಎಂ. ಶಾಂತರಾಮ್ ರಾವ್ ಇವರು ಕಾರಂತರಿಗೆ ನುಡಿ ನಮನ ಸಲ್ಲಿಸಲಿದ್ದಾರೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ, ರಾಜ್ಯಸಭಾ ಸದಸ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ. ಭರತ್ ಶೆಟ್ಟಿ, ಹರೀಶ್ ಪೂಂಜ, ರಾಜೇಶ್ ನಾಯ್, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಪುತ್ತೂರು ನಗರಸಭಾ ಸದಸ್ಯೆ ದೀಕ್ಷಾ ಪೈ, ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಸವಣೂರು ವಿದ್ಯಾರಶ್ಮಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಸವಣೂರು ಸೀತಾರಾಮ ರೈ ಇವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಪೂರ್ವಾಹ್ನ ಗಂಟೆ 9-30ರಿಂದ ನಡೆಯುವ ಕಾರಂತರಿಗೆ ನೃತ್ಯ ನಮನ ಕಾರ್ಯಕ್ರಮದಲ್ಲಿ ವಿದುಷಿ ನಯನಾ ವಿ. ರೈ ಇವರ ನಿರ್ದೇಶನದಲ್ಲಿ ವಿಶ್ವ ಕಲಾನಿಕೇತನ ಪದಡ್ಕ ಇವರಿಂದ ಭರತನಾಟ್ಯ, ಅನಂತರ ಕಾರಂತರ ಪ್ರತಿಮೆಗೆ ಪುಷ್ಪಾರ್ಚನೆ, ಅಪರಾಹ್ನ 2-00 ಗಂಟೆಗೆ ನಡೆಯುವ ಕಾರಂತರಿಗೆ ಯಕ್ಷ ನಮನ ಕಾರ್ಯಕ್ರಮದಲ್ಲಿ ಭಾಸ್ಕರ ಬಾರ್ಯ ಇವರ ನಿರ್ದೇಶನದಲ್ಲಿ ಶ್ರೀ ಅಂಜನೇಯ ಮಹಿಳಾ ಯಕ್ಷಗಾನ ಕಲಾ ಸಂಘ ಬೊಳುವಾರು ಇವರಿಂದ ‘ಶ್ರೀರಾಮ ನಿರ್ಯಾಣ’ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ 6.30ರಿಂದ ನಡೆಯುವ ಕಾರಂತರಿಗೆ ರಂಗನಮನ ಕಾರ್ಯಕ್ರಮದಲ್ಲಿ ಕಾರ್ಕಳದ ಯಕ್ಷ ರಂಗಾಯಣದ ನಿರ್ದೇಶಕ, ನೀನಾಸಂ ಹೆಗ್ಗೋಡು ಇದರ ನಿವೃತ್ತ ಪ್ರಾಧ್ಯಾಪಕ ಬಿ.ಆರ್. ವೆಂಕಟರಮಣ ಐತಾಳ್ ಇವರು ಕಾರಂತರ ರಂಗ ಸ್ಮರಣೆ ಮಾಡಲಿದ್ದಾರೆ. ಅನಂತರ ಯಕ್ಷ ರಂಗಾಯಣದ ಕಲಾವಿದರಿಂದ ಕಾರಂತರ ರಚನೆಯ ‘ಸೋಮಿಯ ಸೌಭಾಗ್ಯ’ ಎಂಬ ಗೀತಾ ನಾಟಕ ಪ್ರಸ್ತುತಗೊಳ್ಳಲಿದೆ. ಸಂಗೀತ ವಿದುಷಿಗಳಾದ ಶುಭ ರಾವ್, ಸುಚಿತ್ರಾ ಹೊಳ್ಳ, ಪವಿತ್ರ ರೂಪೇಶ್ ರೈತ ಗೀತೆ ಮತ್ತು ನಾಡಗೀತೆಯನ್ನು ಹಾಡಲಿದ್ದಾರೆ. ಕೊಂಬೆಟ್ಟು ಸರಕಾರಿ ಪ.ಪೂ. ಕಾಲೇಜ್ನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ ನಡೆಯಲಿದೆ.

