ಉಡುಪಿ : ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದಿನಾಂಕ 09 ನವೆಂಬರ್ 2025ರಂದು ಹೇರಂಜಾಲು ಯಕ್ಷ ಬಳಗದಿಂದ ಹೇರಂಜಾಲು ಯಕ್ಷ ಸಂಭ್ರಮ, ಹೇರಂಜಾಲು ಕೃತಿ ಲೋಕಾರ್ಪಣೆ ಹಾಗೂ ಹೇರಂಜಾಲು ಗೌರವ ಪುರಸ್ಕಾರ ಪ್ರದಾನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಶಿವರಾಮ ಶೆಟ್ಟಿ “ಓರ್ವ ಯಕ್ಷಗಾನ ಕಲಾವಿದ, ಓರ್ವ ಭಾಗವತ ಹೇಗಿರಬೇಕು ಎಂಬುದಕ್ಕೆ ಹೇರಂಜಾಲು ಗೋಪಾಲ ಗಾಣಿಗರೇ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಯಕ್ಷಗಾನ ಕಲೆಗೆ ಅವರ ಕೊಡುಗೆ ಅಪಾರ. ಸುಮಾರು 25 ವರ್ಷಗಳ ಕಾಲ ಕನ್ನರ್ಪಾಡಿಯಲ್ಲಿ ಮಂದಾರ್ತಿ ಮೇಳದ ಯಕ್ಷಗಾನವನ್ನು ಆಡಿಸಿ, ಹೇರಂಜಾಲು ಗೋಪಾಲ ಗಾಣಿಗರೇ ಭಾಗವತರಾಗಬೇಕು ಎಂಬ ಅಭಿಲಾಷೆ ಹೊಂದಿದ್ದ, ಗೋಪಾಲ ಗಾಣಿಗರು ಉಚ್ಛಾಯ ಸ್ಥಿತಿಯಲ್ಲಿದ್ದ ಕಾಲವದು. ಅಂತಹ ಮೇರು ಕಲಾವಿದ ತನಗೇನೂ ಗೊತ್ತಿಲ್ಲ ಎಂಬಂತೆ ವಿನಮ್ರನಾಗಿ ಕಲಾಸೇವೆಯನ್ನು ಮಾಡುತ್ತಿರುವುದನ್ನು ಕಂಡಾಗ ಅಭಿಮಾನ ಉಕ್ಕಿ ಬರುತ್ತದೆ. ಸುಮಾರು 9 ಕೃತಿಗಳನ್ನು ಅವರು ಬರೆದಿದ್ದಾರೆ. ಯಕ್ಷಗಾನ ಅಕಾಡೆಮಿ ಕೊಡಮಾಡುವ ಯಕ್ಷಗಾನದ ಶ್ರೇಷ್ಠ ಪಾರ್ಥಿಸುಬ್ಬ ಪ್ರಶಸ್ತಿಯನ್ನು ಅರ್ಹ ಕಲಾವಿದರಿಗೆ ನೀಡಲಾಗುತ್ತಿದೆ. ಈ ಪ್ರತಿಷ್ಠಿತ ಪ್ರಶಸ್ತಿ ಎಲ್ಲಾ ಜಿಲ್ಲೆಗಳ ಅರ್ಹ ಕಲಾವಿದರಿಗೂ ಸಲ್ಲಬೇಕು ಎಂಬುದು ಅಕಾಡೆಮಿಯ ನಿಲುವಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಗೋಪಾಲ ಗಾಣಿಗರು ಇನ್ನಷ್ಟು ಕೃತಿಗಳನ್ನು ಹೊರತರಬೇಕು. ಈ ಮೂಲಕ ಯುವ ಕಲಾವಿದರಿಗೆ ದಾರಿದೀವಿಗೆಯಾಗಬೇಕು” ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗಾನ ಕಲಾವಿದರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಮೋಹನ್ದಾಸ್ ಶೆಣೈ ಆರ್ಗೋಳು ಶುಭ ಹಾರೈಸಿದರು. ಯಕ್ಷಗಾನ ವಿಮರ್ಶಕ ಪ್ರೊ. ಎಸ್.ವಿ. ಉದಯ ಕುಮಾರ ಶೆಟ್ಟಿ ಕೃತಿ ಪರಿಚಯಗೊಳಿಸಿದರು. ಗೋವಿಂದ ಪೈ ಸಂಶೋಧನಾ ಕೇಂದ್ರ ಮತ್ತು ಇಂದ್ರಾಳಿ ಯಕ್ಷಗಾನ ಕೇಂದ್ರದ ಆಡಳಿತಾಧಿಕಾರಿ ಡಾ. ಜಗದೀಶ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗೆ ಸಮಾಜ ಬಾರ್ಕೂರು ಇದರ ಅಧ್ಯಕ್ಷ ಕೆ. ಉದಯ ಕುಮಾರ್, ಹವ್ಯಾಸಿ ಯಕ್ಷಗಾನ ಕಲಾವಿದ ರಘುನಾಥ ನಾಯಕ ಎಣ್ಣೆಹೊಳೆ, ಸಾಮಾಜಿಕ ಕಾರ್ಯಕರ್ತ ಮತ್ತು ಯಕ್ಷಪೋಷಕರಾದ ಭುವನಪ್ರಸಾದ ಹೆಗ್ಡೆ ಮಣಿಪಾಲ, ಯಕ್ಷಗಾನ ಹಿತಚಿಂತಕ ವಿಜಯ ಕುಮಾರ್ ಮುದ್ರಾಡಿ ಮೊದಲಾದವರು ಉಪಸ್ಥಿತರಿದ್ದರು. ಬಡಗುತಿಟ್ಟಿನ ಖ್ಯಾತ ಬಣ್ಣದ ವೇಷಧಾರಿ ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ ಇವರಿಗೆ ‘ಹೇರಂಜಾಲು ಗೌರವ ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು. ಹವ್ಯಾಸಿ ಯಕ್ಷಗಾನ ಕಲಾವಿದ ಗಣೇಶ್ ಬ್ರಹ್ಮಾವರ ಕಾರ್ಯಕ್ರಮ ನಿರೂಪಿಸಿ, ಕಲಾವಿದ ಗೋಪಾಲ ಗಾಣಿಗ ಹೇರಂಜಾಲು ವಂದಿಸಿದರು.
