ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ವತಿಯಿಂದ ಪುಸ್ತಕ ಬಿಡುಗಡೆ ಸಮಾರಂಭ ಹಾಗೂ ಆಟಿ ಕಾರ್ಯಕ್ರಮವು ದಿನಾಂಕ 27 ಜುಲೈ 2025ರಂದು ಬಲ್ಲಾಳ್ ಭಾಗ್ ನಲ್ಲಿರುವ ‘ಪತ್ತುಮುಡಿ’ ಸಭಾಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಗಡಿಕಾರ ಗೋಳಿದಡಿ ಗುತ್ತು ವರ್ಧಮಾನ ದುರ್ಗಾಪ್ರಸಾದ್ ಶೆಟ್ಟಿಯವರು “ತುಳುವನ್ನು ಆಡುಭಾಷೆಯನ್ನಾಗಿಸಿಕೊಂಡು, ಬಳಕೆ ಮಾಡಿದಾಗ ಮಾತ್ರ ಅದು ಮುಂದಿನ ತಲೆಮಾರಿಗೆ ತುಳುವಿನ ಅಂದ ಚೆಂದ ಅರ್ಥವಾಗಲು ಸಾಧ್ಯ. ಅಳಿದೇ ಹೋಗುವ ಬಳಕೆಯಾಗದೆ ಇರುವ ಶಬ್ದಗಳಿಗೆ ಬೆಲೆ ಬಂದು ಪ್ರಭೆಯಿಂದ ಬೆಳಗಬೇಕಾದರೆ ಇಂತಹ ಸಂಘಟನೆಗಳಿಂದ ಮಾತ್ರ ಸಾಧ್ಯ. ದಿ. ದಾಮೋದರ ನಿಸರ್ಗರ ಕನಸ್ಸನ್ನು ನಿಜವಾಗಿಸುವ ಪ್ರಯತ್ನದಲ್ಲಿ ಈ ತುಳುಕೂಟ ಹೋರಾಡುತ್ತಿದೆ. ತುಳುವಿನ ವಿಷಯಕ್ಕೆ ಬಂದಾಗ ನಾವೆಲ್ಲರೂ ಕೈಜೋಡಿಸೋಣ. ಈ ವಿಷಯದಲ್ಲಿ ನನ್ನ ಸಹಿತ ಪ್ರತೀಯೋರ್ವನೂ ಹೋರಾಡಲೇಬೇಕು” ಎಂದು ತುಳುವರಿಗೆ ಕರೆಯಿತ್ತರು.
ಸುಮನಾ ರೆಸಿಡೆನ್ಸಿಯ ಮ್ಹಾಲಕಿ ಹಾಗೂ ಮಹಿಳಾ ಮುಂದಾಳು ಶ್ರೀಮತಿ ಸುಮಲತಾ ಎನ್. ಸುವರ್ಣರು “ಇಂದು ತುಳುಕೂಟವನ್ನು ಮುನ್ನಡೆಸುವಲ್ಲಿ ಹೇಮಾ ದಾಮೋದರ ನಿಸರ್ಗರು ಹೊಣೆ ಹೊತ್ತು ಮುನ್ನಡೆಸುತ್ತಿದ್ದಾರೆ. ಆಟಿ ತಿಂಗಳಲ್ಲಿ ನಡೆವ ಈ ಕಾರ್ಯಕ್ರಮ ತುಳುವಿನ ಸೊಗಸನ್ನು ವೃದ್ಧಿಸಿದೆ. ‘ಬಂಗಾರ ಪಿಂಗಾರ’ ಪುಸ್ತಕ ಒಂದು ದಾಖಲೆಯಾಗಿದೆ. ಇಂತಹ ಸಾಧನೆಗಳನ್ನು ಇನ್ನು ಇನ್ನೂ ಹೇರಳವಾಗಿ ಈ ಕೂಟ ನಡೆಸಲಿ” ಎಂದರು.
ರಾಜ್ಯ ಕ.ಸಾ.ಪ.ದ ಮಾಜಿ ರಾಜ್ಯಾಧ್ಯಕ್ಷರಾದ ಡಾ. ಹರಿಕೃಷ್ಣ ಪುನರೂರುರವರು ಸಿರಿ ಕಳಸದಿಂದ ‘ಬಂಗಾರ ಪಿಂಗಾರ’ ಪುಸ್ತಕ ಬಿಡುಗಡೆ ಮಾಡಿದರು. ಖ್ಯಾತ ಸಾಹಿತಿ ಮುದ್ದು ಮಾಡುಬೆಳ್ಳೆಯವರನ್ನು ರಾಜ್ಯ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಪದ್ಮರಾಜ ಆರ್. ಸನ್ಮಾನಿಸಿದರು. ಹಿರಿಯರಾದ ಎ.ಸಿ. ಭಂಡಾರಿ ಸಂಸ್ಥೆಗೆ ಶುಭ ಹಾರೈಸಿದರು. ಕದ್ರಿ ನಾಗೇಶ್ ದೇವಾಡಿಗ ಪ್ರಾರ್ಥಿಸಿದರು. ಉಪಾಧ್ಯಕ್ಷ ರೊ. ಜೆ.ವಿ. ಶೆಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಬಿ.ಡಿ. ನಾರಾಯಣರು ಸನ್ಮಾನ ಪತ್ರ ವಾಚಿಸಿದರು. ಮಮತಾ ಪ್ರವೀಣ್, ಕಾಮಾಕ್ಷಿ ಸುಭಾಸ್, ಭಾಸ್ಕರ ಕುಲಾಲ್, ರಮೇಶ್ ಕುಲಾಲ್, ಬಾಯಾರು, ಪಿ.ಎ. ಪೂಜಾರಿ, ವಾಮನ್, ಮಧುಸೂದನ ಎ. ಉಪಸ್ಥಿತರಿದ್ದರು. ಪ್ರಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಕಾರ್ಯಕ್ರಮ ನಿರ್ವಹಣೆ ಮಾಡಿದರು.