ಗೋಣಿಕೊಪ್ಪ : ‘ಕೊಡವ ತಕ್ಕ್ ಎಳ್ತ್ ಕಾರಡ ಕೂಟ’, ‘ಕಾವೇರಿ ಎಜುಕೇಷನ್ ಸೊಸೈಟಿಯ’ ಆಶ್ರಯದಲ್ಲಿ ಗೋಣಿಕೊಪ್ಪ ಕಾವೇರಿ ವಿದ್ಯಾಸಂಸ್ಥೆಯಲ್ಲಿ ದಿನಾಂಕ 31 ಮೇ 2025ರಂದು ನಡೆದ ‘ಕೂಟ’ದ ಕೊಡವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೂರು ಪುಸ್ತಕಗಳು ಬಿಡುಗಡೆಗೊಂಡಿತು. ‘ಜನಪ್ರಿಯ ಕೊಡವ ಸಾಹಿತ್ಯ ಮಾಲೆ ಯೋಜನೆ’ಯ 190ನೇ ಹೆಜ್ಜೆಯ ಪುಸ್ತಕವಾಗಿ ಉಳುವಂಗಡ ಕಾವೇರಿ ಉದಯ ಬರೆದ ‘ಕಾಂಗತಾನ ಚುಳಿ’, 191ನೇ ಹೆಜ್ಜೆಯ ಪುಸ್ತಕವಾಗಿ 17 ಲೇಖಕರು ಬರೆದ ‘ಕಕ್ಕಡ ಕಥೆ’, 192ನೇ ಹೆಜ್ಜೆಯ ಪುಸ್ತಕವಾಗಿ ಕೊಟ್ಟಂಗಡ ಕವಿತ ಬೋಜಮ್ಮ ಬರೆದ ‘ನಾ ಬಯಂದ ಪೂ’ ಎಂಬ ಮೂರು ಪುಸ್ತಕಗಳನ್ನು ಲೋಕಾರ್ಪಣೆಗೊಂಡವು.
ಕಾವೇರಿ ಎಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಮಂಡೇಪಂಡ ಸುಗುಣ ಮುತ್ತಣ್ಣ ಇವರು ಪುಸ್ತಕ ಬಿಡುಗಡೆಗೊಳಿಸಿ “ಕೊಡವ ಭಾಷೆ, ಸಾಹಿತ್ಯ, ಕಲೆ ಸೇರಿದಂತೆ ಕೊಡವ ಸಂಸ್ಕೃತಿಯ ಬೆಳವಣಿಗೆಗೆ ಅತೀ ಹೆಚ್ಚು ಕೊಡುಗೆ ನೀಡಿರುವ ಕೊಡವ ತಕ್ಕ್ ಎಳ್ತ್ ಕಾರಡ ಕೂಟ ನಮ್ಮ ಕಾಲೇಜಿನಲ್ಲಿ ಕಾರ್ಯಕ್ರಮ ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕೊಡವ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸಲು ಪ್ರಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆ” ಎಂದರು.
ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಂಶುಪಾಲ ಡಾ. ಮಾಳೇಟಿರ ಕಾವೇರಪ್ಪ ಮಾತನಾಡಿ, “ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೊಡವ ತಕ್ಕ್ ಎಳ್ತ್ ಕಾರಡ ಕೂಟವು ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ ಆಯೋಜಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿಗಳು ಈ ಅವಕಾಶವನ್ನು ಬಳಸಿಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವುದರೊಂದಿಗೆ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ‘ಕೊಡವ ತಕ್ಕ್ ಎಳ್ತ್ ಕಾರಡ ಕೂಟ’ದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಪ್ರಾಸ್ತಾವಿಕ ನುಡಿಯಲ್ಲಿ ‘ಕೂಟ’ ಇದುವರೆಗೆ ಮಾಡಿದ ಸಾಧನೆಯ ಮಾಹಿತಿ ನೀಡಿದರು. “ಎಲ್ಲರಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಮನಸಿಟ್ಟು ಪ್ರಯತ್ನಿಸಿದರೆ ಸಾಧನೆಗೆಯ್ಯಬಹುದು. ಕೊಡವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆಗೈಯ್ಯಲು ಆಸಕ್ತಿ ಇರುವವರಿಗೆ ‘ಕೂಟ’ ಎಲ್ಲಾ ರೀತಿಯ ಸಹಕಾರ ನೀಡಲು ಸದಾ ಸನ್ನದ್ಧವಾಗಿರುತ್ತದೆ. ಉತ್ತಮ ಬರಹಗಾರನಾಗಬೇಕಾದರೆ ಮೊದಲು ಉತ್ತಮ ಓದುಗ ಆಗಬೇಕು” ಎಂದರು. “ಮುದ್ದಿಯಡ ಕುಶ ಪೊನ್ನಪ್ಪ ದತ್ತಿನಿಧಿ”ಯ ಕಥಾ ಸ್ಪರ್ಧೆಯಲ್ಲಿ ಭಾಗವಹಿಸಿದ 17 ಲೇಖಕರಿಗೂ ಪ್ರಶಸ್ತಿ ಪತ್ರ ಮತ್ತು ಕಿರು ಕಾಣಿಕೆ ನೀಡುವುದರೊಂದಿಗೆ ವಿಜೇತ ಆರು ಲೇಖಕರಿಗೆ ಬಹುಮಾನ ನೀಡಲಾಯಿತು. ಕೊಡವ ಭಾಷೆಯ ಹಾಡುಗಾರಿಕೆ ಮತ್ತು ಓದುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನವನ್ನು ಹಾಗೂ ಭಾಗವಹಿಸಿದವರೆಲ್ಲರಿಗೂ ಕಿರು ಕಾಣಿಕೆಯೊಂದಿಗೆ ಪ್ರಶಂಸನಾ ಪತ್ರ ನೀಡಲಾಯಿತು.
ಪುಸ್ತಕದ ಲೇಖಕಿ ಉಳುವಂಗಡ ಕಾವೇರಿ ಉದಯ, ಕೊಟ್ಟಂಗಡ ಕವಿತ ಬೋಜಮ್ಮ, ದಾನಿಗಳಾದ ಮೇಚಮಡ ಮಲ್ಲಿಗೆ ಪೂವಮ್ಮ, ಮುದ್ದಿಯಡ ಪದ್ಮ ಕುಶಾಲಪ್ಪ, ಚಿಂಡಮಾಡ ಸರಿತ ಅಶೋಕ್, ಕೊಟ್ಟಂಗಡ ವಾಸುದೇವ ಹಿರಿಯರಾದ ಡಾ. ಕಾಳಿಮಾಡ ಕೆ. ಶಿವಪ್ಪ, ‘ಕೂಟ’ದ ಉಪಾಧ್ಯಕ್ಷ ಚೆಂಬಾಂಡ ಶಿವಿ ಭೀಮಯ್ಯ, ಸಹ ಕಾರ್ಯದರ್ಶಿ ಬೊಜ್ಜಂಗಡ ನಿತಿನ್ ನಂಜಪ್ಪ, ಕಾರ್ಯದರ್ಶಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ ಖಜಾಂಚಿ ಬೋಡಂಗಡ ಜಗದೀಶ್ ತಿಮ್ಮಯ್ಯ, ಸದಸ್ಯರುಗಳಾದ ಅಜ್ಜಮಡ ಸಾವಿತ್ರಿ, ಬೋಡಂಗಡ ಕಾರ್ತಿಕ್ ಉಪಸ್ಥಿತರಿದ್ದರು.