ಬೆಂಗಳೂರು : ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಜೀ ಅವರ ತತ್ತ್ವಭಾಗವತಮ್ ಪ್ರವಚನಗಳನ್ನಾಧರಿಸಿದ ತತ್ತ್ವ ಭಾಗವತಮ್, ನಲ ದಮಯಂತಿ, ಕಲಿ ಸಂತರಣ ಹಾಗೂ ಅವತಾರಕಥಾ ಪುಸ್ತಕಗಳ ಲೋಕರ್ಪಣಾ ಸಮಾರಂಭವು ದಿನಾಂಕ 22 ಜೂನ್ 2025 ರಂದು ಬೆಂಗಳೂರಿನ ಶ್ರೀ ರಾಮಚಂದ್ರಾಪುರ ಮಠದ ಗಿರಿನಗರ ಶಾಖೆಯಲ್ಲಿ ನಡೆಯಿತು.
ಸಮಾರಂಭದಲ್ಲಿ ಶ್ರೀ ರಾಘವೇಶ್ವರಭಾರತೀ ಸ್ವಾಮಿಜೀ ಪುಸ್ತಕಗಳನ್ನು ಲೋಕಾರ್ಪಣೆ ಗೊಳಿಸಿದರು. ಈ ವೇಳೆ ಪುಸ್ತಕಗಳ ಸಂಪಾದಕರಾದ ಡಾ. ಪಾದೇಕಲ್ಲು ವಿಷ್ಣು ಭಟ್, ಅನೂರಾಧಾ ಪಾರ್ವತಿ, ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ ಜೆ. ಎಲ್., ಶ್ರೀ ಭಾರತೀ ಪ್ರಕಾಶನದ ಅಧ್ಯಕ್ಷರಾದ ಸಚಿನ್ ಎಲ್.ಎಸ್., ಹಿರಿಯ ಉಪಾಧ್ಯಕ್ಷರಾದ ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್, ಧರ್ಮಭಾರತೀ ಸಂಪಾದಕರಾದ ಗಣೇಶ್ ಕೃಷ್ಣ ಹೆಗಡೆ ಉಪಸ್ಥಿತರಿದ್ದರು. ಶ್ರೀ ಮದ್ಭಾಗವತದ ಕುರಿತಾದ ಪುಸ್ತಕಗಳನ್ನು ಭಾರತೀ ಪ್ರಕಾಶನದಿಂದ ಪ್ರಕಟ ಮಾಡಿದ್ದು, ಭಾರವಿ, ಮಲ್ಲಿನಾಥ ಸೂರಿ, ವಾಚಸ್ಪತಿ ಮಿಶ್ರ, ಪಾಣಿನಿ, ಮೀರ ಇವರ ಅದ್ಭುತ ಕಥೆಗಳು ‘ಪಿಬತ ಭಾಗವತಮ್’ ಪುಸ್ತಕದಲ್ಲಿದೆ. ಜತೆಗೆ ಹಲವು ಮಹನೀಯರ ಚರಿತ್ರೆಯ ಮೂಲಕ ಲೋಕೋಪಕಾರಿ ಸಾಧನೆ, ಮೋಕ್ಷ ಸಾಧನೆ ಮಾಡಬಹುದೆಂದು ಹೇಳಲಾಗಿದೆ. ಪಂಚಪಾಂಡವರ ನಿರ್ಯಾಣದ ಕಥನ, ಕಲಿಯ ಪ್ರವೇಶ, ಪರೀಕ್ಷಿತಮೋಕ್ಷ ಇವೆಲ್ಲದರ ಚಿತ್ರಣ ಕಲಿಸಂತರಣ, ರಾಮ ಸೀತೆಯರಿಗೆ ಆದರ್ಶವಾದ ನಲ ದಮಯಂತಿಯರ ಅದ್ಭುತ ಕಥನ ‘ನಲ ದಮಯಂತಿ’ ಪುಸ್ತಕದಲ್ಲಿದೆ. ಮತ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ ಇವರ ಕಥಾನಕ ‘ಅವತಾರಕಥಾ’ ಪುಸ್ತಕದಲ್ಲಿದೆ.
ಪುಸ್ತಕಗಳಿಗಾಗಿ ದೂರವಾಣಿ ಸಂಖ್ಯೆ 9591542454 ಸಂಪರ್ಕಿಸಬಹುದಾಗಿದೆ.