ಬೆಂಗಳೂರು : ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿ ಡಾ. ಪ್ರವೀಣರಾಜ್ ಎಸ್. ರಾವ್ ಇವರ “ನದಿ ತಟದ ವೃಕ್ಷ” ಕವನ ಸಂಕಲನವು ದಿನಾಂಕ 08 ಜೂನ್ 2025 ರಂದು ಲೋಕಾರ್ಪಣೆಗೊಂಡಿತು.
ಕಾರ್ಯಕ್ರಮದ ಉದ್ಘಾಟನೆಯು ಸೇರಿದ ಎಲ್ಲಾ ಕವಿಗಳು ವೃಕ್ಷಗಳಿಗೆ ನೀರೆರೆಯುವ ಮೂಲಕ ನೆರವೇರಿಸಿದರು. “ನದಿ ತಟದ ವೃಕ್ಷ” ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿದ ಬೆಂಗಳೂರು ನಗರ ಜಿಲ್ಲಾ ಸಾಹಿತ್ಯ ಪರಿಷತ್ ಇದರ ಅಧ್ಯಕ್ಷರಾದ ಶ್ರೀ ಎಂ. ಪ್ರಕಾಶಮೂರ್ತಿಯವರು ಮಾತನಾಡಿ “ಕವನದಲ್ಲಿ ಆಧುನಿಕ ಯುಗದ ಆಕರ್ಷಣೆಗೆ ಒಳಗಾಗಿ ನಾವು ನಮ್ಮ ನೆಲ, ಜಲ, ಆಕಾಶವನ್ನು ನಿರ್ಲಕ್ಷ್ಯ ಮಾಡುತ್ತಿರುವ ಬಗೆಗೆ ಮಾರ್ಮಿಕವಾಗಿ ಕವಿಗಳು ಈ ಕವನ ಸಂಕಲನದಲ್ಲಿ ಚಿತ್ರಿಸಿರುತ್ತಾರೆ ಹಾಗೆಯೇ ಪರಿಸರದ ಬಗ್ಗೆ ಒಳ್ಳೆಯ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಕವನಗಳು ಮತ್ತೆ ಮತ್ತೆ ಅವರ ಲೇಖನಿಯಿಂದ ಬರಲಿ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಆರ್. ಆರ್. ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಉದಂತ ಶಿವಕುಮಾರ್ “ಪ್ರತಿಯೊಂದು ಕವನದ ಮೌಲ್ಯಮಾಪನ ಮಾಡುತ್ತಾ ಈ ಕವನ ಸಂಕಲನದಲ್ಲಿ ಇರುವ ಕವಿತೆಗಳು ಉತ್ತಮ ಮಟ್ಟದಲ್ಲಿದ್ದು, ಒಂದೇ ಬಾರಿಗೆ ಓದಿಸಿಕೊಂಡು ಹೋಗುತ್ತದೆ. ಇಂತಹ ಕವಿತೆಗಳನ್ನು ಓದಿ ಪ್ರೋತ್ಸಾಹಿಸಿ” ಎಂದು ಓದುಗರಲ್ಲಿ ವಿನಂತಿಸಿದರು. ಮಕ್ಕಳ ಸಾಹಿತ್ಯ ಪರಿಷತ್ ಇದರ ಕಾರ್ಯದರ್ಶಿಯಾಗಿರುವ ಡಾ. ಮಲಕಪ್ಪ ಅಲಿಯಾಸ್ ಮಹೇಶ್ ಮಾತನಾಡಿ “ಈ ಕವನ ಸಂಕಲವನ್ನು ಎಲ್ಲರೂ ಪ್ರೋತ್ಸಾಹಿಸಿ ಕನ್ನಡ ಭಾಷೆಯ ಬೆಳವಣಿಗೆಗೆ ನೆರವಾಗಿ” ಎಂದು ಆಶಿಸಿದರು.
ಮಂಡ್ಯ ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರೂ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಡಾ. ಕೆ. ಎನ್. ವಿಜಯ ಕುಮಾರ್ ಕೊಪ್ಪ ಕವಿಯ ಆಶಯ ಮತ್ತು ಅಭಿವ್ಯಕ್ತಿಯನ್ನು ಕೊಂಡಾಡಿದರು.
‘ನದಿ ತಟದ ವೃಕ್ಷ’ ಕವನ ಸಂಕಲನದ ಕವಿ ಡಾ. ಪ್ರವೀಣರಾಜ್ ಎಸ್. ರಾವ್ ಕಾಸರಗೋಡು ಮಾತನಾಡಿ “ಕಾಸರಗೋಡು ಕನ್ನಡಿಗರು ಸದಾ ಕನ್ನಡ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಕನ್ನಡದ ಸಾಹಿತ್ಯ, ಸಂಸ್ಕೃತಿಯ ಕೆಲಸಗಳು ಇಲ್ಲಿ ನಿರಂತರ ನಡೆಯುತ್ತಿರುತ್ತದೆ. ಆದರೆ ಕರ್ನಾಟಕ ಸರಕಾರ ಗಡಿನಾಡಾದ ಕಾಸರಗೋಡಿನ ಬಗೆಗೆ ತೀವ್ರ ನಿರ್ಲಕ್ಷ ವನ್ನು ಹೊಂದಿದೆ. ಇಲ್ಲಿನ ಕವಿಗಳಿಗೆ, ಕಲಾವಿದರಿಗೆ, ಇಲ್ಲಿನ ಸಂಸ್ಕೃತಿಗಳಿಗೆ, ಅತ್ತ ಕೇರಳ ಹಾಗೂ ಇತ್ತ ಕರ್ನಾಟಕ ಯಾವುದೇ ಪ್ರೋತ್ಸಾಹವನ್ನು ನೀಡುತ್ತಿಲ್ಲ ಹಾಗಾಗಿ ಇಲ್ಲಿನ ಕನ್ನಡಿಗರು ಅತಂತ್ರರಾಗಿದ್ದಾರೆ. ಸರಕಾರ ಈ ಕುರಿತು ಅಧ್ಯಯನ ಮಾಡಿ ವರದಿ ತರಿಸಿಕೊಂಡು ಇಲ್ಲಿನ ಕನ್ನಡಿಗರ ನಾನಾ ಸಮಸ್ಯೆಗಳನ್ನು ಬಗೆಹರಿಸಬೇಕು” ಎಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ಈ ಕವನ ಸಂಕಲನದಲ್ಲಿ ಮುಖಪುಟದ ವಿನ್ಯಾಸವನ್ನು ಶ್ರೀ ಪ್ರಮೋದ್, ಒಳಪುಟದ ವಿನ್ಯಾಸವನ್ನು ಶ್ರೀ ಪ್ರವೀಣ್ ಕುಮಾರ್, ಮುನ್ನುಡಿಯನ್ನು ಬರೆದ ಗಣೇಶ್ ಪಾಂಡೇಲು, ಶುಭ ನುಡಿಯನ್ನು ಬರೆದ ಡಾ. ರಮಾನಂದ ಬನಾರಿ ಹಾಗೆಯೇ ಹಿನ್ನುಡಿ ಯನ್ನು ಶ್ರೀ ರಾಧಾಕೃಷ್ಣ ತೋಡಿಕಾನ ಬರೆದು ಆಶೀರ್ವದಿಸಿದ್ದಾರೆ. ಅವರಿಗೆ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸಿದರು. ಕಾರ್ಯಕ್ರಮವನ್ನು ನಿರೂಪಿಸಿದ ಡಾ. ನಾಗರಾಜ್ ತಂಬ್ರಹಳ್ಳಿ “ಇವರ ಕವನಗಳು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ರಚಿಸಲ್ಪಟ್ಟಿದ್ದು ತುಂಬಾ ವೈಶಿಷ್ಟ್ಯಪೂರ್ಣವಾಗಿದೆ. ಇನ್ನೂ ಒಳ್ಳೆಯ ಕವನಗಳು ಇವರಿಂದ ಕಾವ್ಯಲೋಕಕ್ಕೆ ಕೊಡುಗೆಯಾಗಿ ಬರಲಿ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ, ಗಡಿನಾಡಿನ ಹಲವಾರು ಯುವ ಹಾಗೂ ಹಿರಿಯ ಕವಿಗಳು ಉಪಸ್ಥಿತರಿದ್ದು, ಈ ಸಂದರ್ಭದಲ್ಲಿ ಕವಿಗಳ ಕವಿತಾ ವಾಚನವು ಯಶಸ್ವಿಯಾಗಿ ಜರುಗಿತು, ಸ್ಥಳೀಯ ವಿದ್ಯಾರ್ಥಿಗಳು ವಿವಿಧ ಜಾನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿತು. ಬಳಿಕ ಸಮಾಜದ ವಿವಿಧ ಸಾಧಕರನ್ನು ಈ ವೇದಿಕೆ ಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಡಾ. ಸುಕನ್ಯಾ ಹೆಗಡೆ ಕೆಂಗೇರಿ ಅವರು ಅತಿಥಿಗಳನ್ನು ಸ್ವಾಗತಿಸಿ, ಸಭಿಕರಿಗೆ ಪರಿಚಯಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ನೆರವಾದವರಿಗೆ ಗೌರವಿಸಿ ವಂದಿಸಲಾಯಿತು.