ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣ ರಾಜ ಪರಿಷತ್ತಿನ ಮಂದಿರದಲ್ಲಿ ಸ್ನೇಹ ಪ್ರಿಂಟರ್ಸ ಆಯೋಜಿಸಿದ್ದ ಮಹಾಮಹೋಪಧ್ಯಾಯ ಡಾ. ಎಸ್. ರಂಗನಾಥ್ ಅವರ ‘ಕರ್ನಾಟಕದ ಶತಾಯುಷಿಗಳು’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ದಿನಾಂಕ 25 ಜೂನ್ 2025ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ವಾಂಸ ನಾಡೋಜ ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರಿ ಮಾತನಾಡಿ “ಸತ್ತವರ ಸಂಗದಲಿ ಹೊತ್ತು ಹೋಗುವುದೆನಗೆ” ಎಂಬ ಬಿ.ಎಂ.ಶ್ರೀಯವರ ಮಾತನ್ನು ನೆನಪು ಮಾಡಿಕೊಂಡು, ಶತಾಯುಷಿಗಳು ಈ ನಾಡಿನ ಭವ್ಯ ಪರಂಪರೆಯ ಪ್ರತೀಕ. ಅವರು ಸ್ವಾರ್ಥವನ್ನು ಬಿಟ್ಟು ನಾಡಿನ ಹಿತವನ್ನು ಧ್ಯಾನಿಸಿದ್ದರಿಂದಲೇ ಅವರ ಬದುಕಿನ ನೂರು ವರ್ಷ ಸಾರ್ಥಕವಾಗಿದೆ ಮತ್ತು ದಾಖಲೆಗೆ ಅರ್ಹವಾಗಿದೆ. ರಂಗನಾಥ್ ಇವರು ಕೃತಿಯಲ್ಲಿ ಮಹತ್ವದ ಸಂಗತಿಗಳನ್ನು ದಾಖಲಿಸಿದ್ದಾರೆ. ಅವರಲ್ಲಿ ಹಲವರ ಜೊತೆಗೆ ತಮಗಿದ್ದ ಒಡನಾಟವನ್ನು ಮತ್ತು ರಸಪ್ರಸಂಗಗಳನ್ನು ನೆನಪು ಮಾಡಿಕೊಂಡರು. ಶತಾಯುಷಿಗಳಲ್ಲಿ ಒಬ್ಬರಾದ ಸರ್. ಎಂ. ವಿಶ್ವೇಶ್ವರಯ್ಯನವರು ಕಂಡ ಕನಸಾದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಈ ಕೃತಿ ಬಿಡುಗಡೆಯಾಗುತ್ತಿರುವುದು ಅರ್ಥಪೂರ್ಣವಾಗಿದೆ” ಎಂದು ತಿಳಿಸಿದರು.
ಕೃತಿಯನ್ನು ಲೋಕಾರ್ಪಣೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ “ಅನಿಶ್ಚಿತ ಬದುಕಿನಲ್ಲಿ ನಿಶ್ಚಿತ ಗುರಿ ಇಟ್ಟು ಸಾಗುವವರು ಮಾತ್ರವೇ ಮಹತ್ವದ ಸಾಧನೆಯನ್ನು ಮಾಡಬಲ್ಲರು. ಇಂದಿನ ವೈದ್ಯಕೀಯ ಯುಗದಲ್ಲಿ ಆಯಸ್ಸಿನ ಸರಾಸರಿ ಹೆಚ್ಚಿದೆ. ಆದರೆ ಅದು ಕಡಿಮೆ ಇದ್ದ ಕಾಲದಲ್ಲಿ ನೂರು ವರ್ಷ ಬಾಳಿದ ಹಿರಿಯರು ಆದರ್ಶದ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅದನ್ನು ದಾಖಲಿಸುವ ಮೂಲಕ ರಂಗನಾಥ್ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ. ಅವರ ವ್ಯಕ್ತಿಚಿತ್ರದ ಶೈಲಿ ಡಿ.ವಿ.ಜಿ. ಮತ್ತು ವಿಸೀಯವರನ್ನು ನೆನಪು ಮಾಡುತ್ತದೆ” ಎಂದು ವಿಶ್ಲೇಷಿಸಿದರು.
ಕೃತಿ ಪರಿಚಯ ಮಾಡಿ ಕೊಟ್ಟ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆಯವರು ಚರಿತ್ರೆ ಮತ್ತು ಕಾವ್ಯದ ನಡುವಿನ ವ್ಯತ್ಯಾಸ ಅಳಿಸಿ ಹೋಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಅಂತಹ ಸಂದರ್ಭದಲ್ಲಿ ಪೂರ್ವಗ್ರಹಗಳಿಲ್ಲದೆ ಸಮಚಿತ್ತದಿಂದ ಈ ಕೃತಿಯನ್ನು ರಚಿಸಿರುವ ರಂಗನಾಥ್ ಅವರ ಪ್ರಯತ್ನ ಶ್ಲಾಘನೀಯವಾಗಿದ್ದು ಎಂದು ಹೇಳಿದರು. ಕೃತಿಕಾರ ಡಾ. ಎಸ್. ರಂಗನಾಥ್ ಕೃತಿ ರಚನೆಯಲ್ಲಿ ತಮಗೆ ಎದುರಾದ ಸವಾಲುಗಳು ಮತ್ತು ಅದನ್ನು ಪರಿಹರಿಸಿಕೊಂಡ ರೀತಿಯನ್ನು ಹಂಚಿಕೊಂಡರು. ಪ್ರೊ. ಎನ್.ಎಸ್. ಶ್ರೀಧರ ಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶತಾಯುಷಿಗಳು ಮತ್ತು ಅವರ ಕುಟುಂಬದವರನ್ನು ಸತ್ಕರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಹಂಸಲೇಖ ದೇಸಿ ವಿದ್ಯಾಲಯದ ವಿದ್ಯಾರ್ಥಿಗಳು ಗೀತ-ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.