Subscribe to Updates

    Get the latest creative news from FooBar about art, design and business.

    What's Hot

    ಆಳ್ವಾಸ್ ರಂಗ ತಂಡಕ್ಕೆ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 10

    May 31, 2025

    ಮಂಗಳೂರಿನಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆಯಿಂದ ‘ನೃತ್ಯ, ಗಾನ ವೈಭವ’

    May 31, 2025

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಪ್ರಾಚೀನ ಐಗುಪ್ತದ ಸಮರ್ಥ ಆಡಳಿತಗಾರ್ತಿ ‘ದೇವಿ ಕುರುಬತಿ’
    Article

    ಪುಸ್ತಕ ವಿಮರ್ಶೆ | ಪ್ರಾಚೀನ ಐಗುಪ್ತದ ಸಮರ್ಥ ಆಡಳಿತಗಾರ್ತಿ ‘ದೇವಿ ಕುರುಬತಿ’

    November 6, 2024Updated:January 7, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಇದು ಒಂದು ಐತಿಹಾಸಿಕ ಕಥೆ ಆಧಾರಿತವಾದ ಅತ್ಯಂತ ವಿಶಿಷ್ಟ ಕೃತಿ.‌ ಭಾರತದ ಯಾವುದೇ ಭಾಗದ ಇತಿಹಾಸವಲ್ಲ. ನಮಗೆ ಯಾರಿಗೂ ಗೊತ್ತಿಲ್ಲದ ಮೂರುಸಾವಿರ ವರ್ಷಗಳಷ್ಟು ಹಿಂದಿನ ಪ್ರಾಚೀನ ಐಗುಪ್ತದ (ಇವತ್ತಿನ ಈಜಿಪ್ಟ್‌) ಇತಿಹಾಸ. ಜಗತ್ತಿನ ನಾಗರಿಕತೆಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವುದು ಈಜಿಪ್ಟ್‌ ಎಂದು ನಾವು ಕೇಳಿದ್ದೇವೆ. ಆದರೆ ಇಲ್ಲಿ ಈ ಕಾದಂಬರಿಯಲ್ಲಿರುವುದು ಸತ್ಯ ಘಟನೆಗಳ ವರದಿಗಳಿಂದ ತುಂಬಿದ ಇತಿಹಾಸವಲ್ಲ. ಮನುಷ್ಯನ ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ಲೋಕಗಳ ರೋಮಾಂಚನಕಾರಿ ಚಿತ್ರಣವಿರುವ ಮನ ಸೆಳೆಯುವ ಕಥೆ.

    ಪ್ರಜಾಪರಿಪಾಲಕ ರಾಜನೆಂದರೆ ಕೇವಲ ಲೌಕಿಕ ದೃಷ್ಟಿಯಿಂದ ಮಾತ್ರವಲ್ಲ, ಕುರಿಗಳನ್ನು ತನ್ನ ಮಕ್ಕಳಂತೆ ಪ್ರೀತಿಯಿಂದ ಪಾಲಿಸುವ ಕುರುಬನೆಂದು ಐಗುಪ್ತದ ಜನತೆ ನಂಬಿಕೊಂಡು ಬಂದಿದ್ದ ಕಾಲವದು. ಫೆರೋ ಅಹಮೋಸ್ ನ ಮರಣದ ನಂತರ ಆತನ ಪತ್ನಿ, ಚತುರಮತಿ ನುಕಿಯಾ ರಾಜಮಾತೆಯಾಗುವುದರೊಂದಿಗೆ ಆರಂಭವಾಗುವ ಕಥೆ, ಆಕೆಯ ಸೊಸೆ ಆನೆಪ್ ಸಮರ್ಥ ಆಡಳಿತಗಾರ್ತಿಯಾಗಿ ಮುಂದುವರಿದು ಆಕೆಯ ಸಾವಿನೊಂದಿಗೆ ಕೊನೆಯಾಗುತ್ತದೆ. ನಮಗೆ ಅಪರಿಚಿತವಾಗಿರುವ ನೂರಾರು ಸಾಂಸ್ಕೃತಿಕ ವಿಚಾರಗಳು ಕಾದಂಬರಿಯ ಉದ್ದಕ್ಕೂ ಬಿತ್ತರಗೊಂಡಿವೆ. ಶುದ್ಧರಕ್ತಗಳ ಬೆಸುಗೆಯ ಮೂಲಕ ಮಾತ್ರವೇ ದೇಶವನ್ನು ಆಳುವ ರಾಜಕುಮಾರನ ಜನನವಾಗಬೇಕು ಎನ್ನುವ ನಂಬಿಕೆ ಮತ್ತು ಅದಕ್ಕಾಗಿ ರಾಜಕುಮಾರ ತನ್ನ ಸಹೋದರಿಯನ್ನೇ ವಿವಾಹವಾಗಬೇಕು ಎಂಬ ನಿರ್ಬಂಧ ನಮಗೆ ವಿಚಿತ್ರವೆನ್ನಿಸುತ್ತದೆ. ಆ ಕಾರಣಕ್ಕಾಗಿ ನುಕಿಯಾಳ ಮಗ ಫೆರೋಪೇಪಿಯು ನುಕಿಯಾಳ ಸವತಿಯ ಮಗಳು ಪೇಪಿಗಿಂತ ದೊಡ್ಡವಳಾದ ಆನೆಪ್ ಳನ್ನು ಮಗನಿಗೆ ವಿವಾಹ ಮಾಡಿಸುತ್ತಾಳೆ. ಇದು ಇಬ್ಬರಿಗೂ ಇಷ್ಟವಿಲ್ಲದ್ದರಿಂದ ದಾಂಪತ್ಯವು ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ. ಅವರಿಬ್ಬರ ನಡುವಿನ ಸಮಾಗಮಕ್ಕೆ ರಾಜಮಾತೆ ತುಂಬಾ ಪ್ರಯತ್ನಿಸುತ್ತಾಳಾದರೂ ಕೊನೆಗೂ ಆನೆಪ್ ತಿಳಿಯದೇ ಮಾಡಿದ ಅಚಾತುರ್ಯದಿಂದಾಗಿ ಮಗು ಹುಟ್ಟುವುದು ಒಬ್ಬ ಕಲಾವಿದನ ಜತೆಗಿನ ಸಮಾಗಮದಿಂದ. ಇದು ಕೊನೆಯ ತನಕವೂ ರಹಸ್ಯವಾಗಿ ಉಳಿದರೂ ಆನೆಪ್ ಳನ್ನು ಅಪರಾಧಿ ಭಾವ ಸದಾ ಕಾಡುತ್ತದೆ.

    ಆಡಳಿತ ಸಾಮರ್ಥ್ಯ, ಬುದ್ಧಿವಂತಿಕೆ ಮತ್ತು ದೂರದರ್ಶಿತ್ವಗಳು ರಾಜಮಾತೆ ನುಕಿಯಾಳಲ್ಲೂ ಬಹಳಷ್ಟು ಇದ್ದರೂ ಎಲ್ಲವೂ ಸಾಕಾರಗೊಳ್ಳುವುದು ಅನೆಪ್ ಳಲ್ಲಿ.‌ ದೇಶದಲ್ಲಿ ಹಿಂದಿನ ಫೆರೋಗಳ ಕಾಲದಲ್ಲಿ ತುಂಬಿ ಹೋಗಿದ್ದ ಎಲ್ಲಾ ಅನ್ಯಾಯ, ಅನಾಚಾರ, ಜನಸಾಮಾನ್ಯರ ಸಂಕಷ್ಟಗಳು, ಬಡವರ ಶೋಷಣೆ, ಅನಗತ್ಯ ತೆರಿಗೆ, ಧಾರ್ಮಿಕತೆಯ ಹೆಸರಿನಲ್ಲಿ ನಿರಂತರವಾಗಿ ನಡೆಯುತ್ತಿದ್ದ ಭ್ರಷ್ಟಾಚಾರ-ಸುಲಿಗೆ-ಎಲ್ಲವನ್ನೂ ತನ್ನ ಸೂಕ್ಷ್ಮ ಕಣ್ಣುಗಳಿಂದ ವೀಕ್ಷಿಸಿದ ಆನೆಪ್ ತನ್ನ ಆಡಳಿತ ಕಾಲದಲ್ಲಿ ಎಲ್ಲವನ್ನೂ ಸರಿಪಡಿಸಿ ದೇಶದಲ್ಲಿ ಸುವರ್ಣ ಯುಗಕ್ಕೆ ನಾಂದಿ ಹಾಡುತ್ತಾಳೆ. ಜೀವನದಿಯಾಗಿದ್ದ ನೀಲನದಿಗೆ ಅಣೆಕಟ್ಟು ಕಟ್ಟುವ, ಮಾತ್ರವಲ್ಲದೆ ಆ ಕಾರಣಕ್ಕಾಗಿ ತಮ್ಮ ಭೂಮಿಯನ್ನು ಕಳೆದುಕೊಳ್ಳುವ ರೈತರಿಗೆ ಪುನರ್ವಸತಿಯನ್ನು ಕಲ್ಪಿಸಿ ಕೊಡುವ ಯೋಜನೆ ಹಾಕುವ ಪರಿ ಅತ್ಯಂತ ಅದ್ಭುತವೆನ್ನಿಸುತ್ತದೆ. ಆಕೆ ಇಷ್ಟರ ಮಟ್ಟಿಗೆ ಬಡವರ ಮತ್ತು ಶೋಷಿತರ ಪರವಾಗಿ ನಿಲ್ಲುವುದರಿಂದಲೇ ಜನರಿಂದ ‘ದೇವಿ ಕುರುಬತಿ’ ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಾಳೆ. ಕೊನೆಯಲ್ಲಿ ತನ್ನ ರಾಜಕೀಯ ಉದ್ದೇಶಕ್ಕೋಸ್ಕರ ಮಾಡಿದ ಪರ್ಯಟನೆಯ ಸಂದರ್ಭದಲ್ಲಿ ನದಿಗೆ ಬಿದ್ದ ಒಬ್ಬ ಸಾಮಾನ್ಯನನ್ನು ರಕ್ಷಿಸಲೆಂದು ನೀರಿಗೆ ಹಾರಿ ಆಕೆ ಪ್ರಾಣ ಕಳೆದುಕೊಳ್ಳುವುದು ಆತ್ಮಹತ್ಯೆಗೆ ಸಮಾನವಾಗುವ ಒಂದು ದುರಂತ. ಮಗನ ವಿಚಾರದಲ್ಲಿ ಆಕೆಯ ಒಳಗನ್ನು ತುಂಬಿಕೊಂಡಿದ್ದ ಅಪರಾಧಿ ಭಾವವೇ ಇದಕ್ಕೆ ಕಾರಣವಾಗಿರಬಹುದು.

    ಇಡೀ ಕಾದಂಬರಿಯು ಮೂರು ಸಾವಿರ ವರ್ಷಗಳ ಹಿಂದೆ ಇತಿಹಾಸದ ಗರ್ಭದೊಳಗೆ ಹೂತುಹೋದ ಅನೇಕ ವಿಚಾರಗಳನ್ನು ಮತ್ತೆ ಬೆಳಕಿಗೆ ತಂದು ಹೊಸದಾಗಿ ನಮಗೆ ಕಟ್ಟಿಕೊಡುವ ಶ್ಲಾಘನೀಯ ಕೆಲಸವನ್ನು ಮಾಡುತ್ತದೆ.‌ ಇತಿಹಾಸದ ಓದುಗರಿಗೆ ಚಿರಪರಿಚಿತವಾದ ಗೋರಿಮನೆ (ಪಿರಮಿಡ್)ಗಳ ರಚನೆಯ ಹಿನ್ನೆಲೆ ಇಲ್ಲಿ ಢಾಳಾಗಿ ಚಿತ್ರಿತವಾಗಿದೆ. ಪ್ರತಿಷ್ಠಿತ ವ್ಯಕ್ತಿಗಳು ಬದುಕಿರುವಾಗಲೇ ತಮಗಾಗಿ ಕಟ್ಟಬೇಕಾದ ಗೋರಿಮನೆಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ, ಅದಕ್ಕಾಗಿ ಎಷ್ಟು ಧಾರಾಳವಾಗಿ ಖರ್ಚು ಮಾಡುತ್ತಾರೆ ಅನ್ನುವುದನ್ನು ನಾವು ಇಲ್ಲಿ ನೋಡುತ್ತೇವೆ. ರಾಜರುಗಳು ಮತ್ತು ಧಾರ್ಮಿಕ ಗುರುಗಳ ಗೋರಿಮನೆಗಳಿಗಾಗಿ ಜನಸಾಮಾನ್ಯರ ಹಣ ಮತ್ತು ಅವರು ಬೆವರು ಸುರಿಸಿ ಸಂಪಾದಿಸಿದ ವಸ್ತುಗಳು ಎಷ್ಟು ಲೂಟಿಯಾಗುತ್ತವೆ ಮತ್ತು ಅವುಗಳನ್ನು ಕಟ್ಟಲು ಬಡ ಕೂಲಿ ಕಾರ್ಮಿಕರು ಎಷ್ಟೊಂದು ರಕ್ತ ಸುರಿಸಬೇಕಾಗುತ್ತದೆ ಅನ್ನುವುದನ್ನು ನೋಡಿದಾಗ ಕರುಳು ಕಿವಿಚಿದಂತಾಗುತ್ತದೆ. ಅದರೆ ಆನೆಪ್ ಮಾತ್ರ ತನಗೆ ಅತ್ಯಂತ ಸರಳವಾದ ಗೋರಿಮನೆಯನ್ನು ಕಟ್ಟಿಕೊಂಡು ಮಹಾನ್ ಮಾದರಿ ವ್ಯಕ್ತಿಯಾಗುತ್ತಾಳೆ.

    ಹಳೆಯ ಕಾಲಕ್ಕೆ ಹೋಗುವಾಗ ಭಾಷೆಯ ಬಳಕೆ ಸುಲಭವಲ್ಲ. ಅದು ನಮ್ಮದಲ್ಲದ ಒಂದು ಅಪರಿಚಿತ ಸಂಸ್ಕೃತಿಯ ಬಗ್ಗೆ ಬರೆಯುವುದು ಹರಸಾಹಸವೇ ಸರಿ. ಅಲ್ಲಿ ಉಪಯೋಗಿಸುತ್ತಿದ್ದ ಅನೇಕ ಪದಗಳ ಅರ್ಥವನ್ನು ಲೇಖಕಿ ಇಲ್ಲಿ ಪ್ರತ್ಯೇಕವಾಗಿ ನೀಡಿದ್ದಾರೆ. ಕಥನ ಶೈಲಿಯೂ ಸುಂದರವಾಗಿದೆ. (ಅಲ್ಲಲ್ಲಿ ಕಾಗುಣಿತ ಮತ್ತು ಮುದ್ರಣ ದೋಷಗಳು ಮಾತ್ರ ಉಳಿದುಕೊಂಡಿವೆ. ಮುಂದಿನ ಮುದ್ರಣಗಳಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ.) ಓದುಗರ ಮನಸ್ಸಿನಲ್ಲಿ ಅಚ್ಚೊತ್ತಿ ಉಳಿಯಬಹುದಾದ ಒಂದು ಒಳ್ಳೆಯ ಕೃತಿಗಾಗಿ ಲೇಖಕಿ ಶುಭದಾ ಎಚ್.ಎನ್. ಅವರಿಗೆ ಅಭಿನಂದನೆಗಳು.

    ಕೃತಿ ವಿಮರ್ಶಕರು ಡಾ. ಪಾರ್ವತಿ ಜಿ. ಐತಾಳ್ :

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

    ಲೇಖಕಿ ಡಾ. ಶುಭದಾ ಎಚ್.ಎನ್.

    Share. Facebook Twitter Pinterest LinkedIn Tumblr WhatsApp Email
    Previous Articleಬಂಟ್ವಾಳದ ಕನ್ನಡ ಭವನದಲ್ಲಿ ಲೋಕರ್ಪಣೆಗೊಂಡ ‘ಬಂಟ್ವಾಳದ ಸಾಂಸ್ಕೃತಿಕ ಪರಿಸರ’ ಕೃತಿ
    Next Article ತಿಂಗಳ ಸರಣಿ ಕಾರ್ಯಕ್ರಮದಲ್ಲಿ ‘ಪಂಚವಟಿ’ ತಾಳಮದ್ದಳೆ
    roovari

    Add Comment Cancel Reply


    Related Posts

    ಕೊಪ್ಪಳದ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯಮಟ್ಟದ ಆರತಕ್ಷತೆ ಕವಿಗೋಷ್ಠಿ

    May 31, 2025

    ವಿಶೇಷ ಲೇಖನ – ಜೈನ ಸಾಹಿತ್ಯದ ಖ್ಯಾತ ವಿದ್ವಾಂಸ ಡಾ. ಎಸ್. ಪಿ. ಪಾಟೀಲ್

    May 31, 2025

    ಉಪ್ಪಳದ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ತುಲುವೆರೆ ಕಲ ವರ್ಸೊಚ್ಚಯ | ಜೂನ್ 01

    May 30, 2025

    ಕೀನ್ಯಾದ ಪ್ರಸಿದ್ಧ ಲೇಖಕ ಗೂಗಿ ವಾ ಥಿಯಾಂಗೋ ವಿಧಿವಶ

    May 30, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.