Subscribe to Updates

    Get the latest creative news from FooBar about art, design and business.

    What's Hot

    ಬೆಂಗಳೂರಿನ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ | ಮೇ 19

    May 14, 2025

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಬೆಂಗಳೂರಿನ ವಿವಿಧೆಡೆ ಹಾಗೂ ಮೈಸೂರಿನಲ್ಲಿ ಯಕ್ಷಗಾನ ಪ್ರದರ್ಶನ | ಮೇ 17ರಿಂದ 22

    May 14, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ನರೇಂದ್ರ ಎಸ್. ಗಂಗೊಳ್ಳಿಯವರ ಪತ್ತೇದಾರಿ ಕಾದಂಬರಿ ‘ನಿಭೃತ’
    Artist

    ಪುಸ್ತಕ ವಿಮರ್ಶೆ | ನರೇಂದ್ರ ಎಸ್. ಗಂಗೊಳ್ಳಿಯವರ ಪತ್ತೇದಾರಿ ಕಾದಂಬರಿ ‘ನಿಭೃತ’

    December 4, 2024Updated:January 7, 2025No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸಾಹಿತ್ಯದಲ್ಲಿ ಪತ್ತೇದಾರಿ ಕಥೆ-ಕಾದಂಬರಿಗಳ ಪ್ರಸ್ತುತತೆ ಏನು ? ಓದುಗರ ಕುತೂಹಲ ಹೆಚ್ಚಿಸುತ್ತ ಅವರಿಗೆ ಮನೋರಂಜನೆ ನೀಡುವುದೆ ? ಸಮಾಜದಲ್ಲಿ ನಡೆಯುವ ಅಪರಾಧಗಳ ಕುರಿತು ಮಾಹಿತಿ ನೀಡುವುದೆ ? ಪತ್ತೇದಾರರ ಜಾಣ್ಮೆಯ ಬಹುಸಾಧ್ಯತೆಗಳ ಪ್ರದರ್ಶನಕ್ಕೊಂದು ವೇದಿಕೆ ಕಲ್ಪಿಸುವುದೆ ? ಅಥವಾ ಜನಪ್ರಿಯ ಸಾಹಿತ್ಯ ಜಗತ್ತಿನಲ್ಲಿ ಒಪ್ಪಿತ ರೂಢಿಗತ ಸಂಪ್ರದಾಯವಾಗಿ ಬೆಳೆದು ಬಂದಿರುವ ಬರೇ ಒಂದು ಕಥಾ ಕಾಲಕ್ಷೇಪವೆ ? ಈ ಬಗ್ಗೆ ಚಿಂತನೆ ನಡೆಸುತ್ತಿದ್ದಂತೆ ನನಗನ್ನಿಸಿದ್ದು ಸಾಹಿತ್ಯದ ಈ ಒಂದು ಪ್ರಕಾರ ದಿನೇ ದಿನೇ ಅಪರಾಧಗಳು ಹೆಚ್ಚುತ್ತಿರುವ ನಮ್ಮ ಇಂದಿನ ಸಂದರ್ಭದಲ್ಲಿ ಅತ್ಯಗತ್ಯ ಎಂದು. ಅಪರಾಧಿಗಳನ್ನು ಪತ್ತೆ ಹಚ್ಚುವುದರ ಕುರಿತಾದ ಕಥೆಗಳು ನಮ್ಮ ಪಾರಂಪರಿಕ ಸಾಹಿತ್ಯದಲ್ಲೂ ಇದ್ದವು. ಆದರೆ ಅದು ಒಂದು ಪ್ರಕಾರವಾಗಿ ಬೆಳೆದಿರಲಿಲ್ಲ. 19ನೆಯ ಶತಮಾನದ ಪಾಶ್ಚಾತ್ಯ ಸಾಹಿತ್ಯದಲ್ಲಿ ಎಡ್ಗರ್ ಅಲನ್ ಪೋ, ಜಿ.ಕೆ. ಚೆಸ್ಟರ್ ಟನ್, ಆರ್ಥರ್ ಕಾನನ್ ಡಾಯ್ಲ್ ಮೊದಲಾದವರ ಮೂಲಕ ಅದು ಒಂದು ಶಿಸ್ತಾಗಿ ಬೆಳೆಯಿತು. ಅವರ ಎಲ್ಲರ ಕಥೆಗಳಲ್ಲಿ ಡಿಟೆಕ್ಟಿವ್‌ ಅನ್ನುವವನು ಬಹಳ ಮುಖ್ಯವಾದ ಒಂದು ಪಾತ್ರ ಮತ್ತು ಒಬ್ಬ ಲೇಖಕನ ಎಲ್ಲ ಕಥೆಗಳಲ್ಲಿ ಆ ಪಾತ್ರ ಒಬ್ಬನದೇ ಆಗಿರುತ್ತಿತ್ತು. ‌ಉದಾಹರಣೆಗೆ ಷರ್ಲಾಕ್‌ ಹೋಮ್ಸ್ ಅರ್ಥರ್ ಕಾನನ್ ಡಾಯ್ಲ್ ಬರೆದ ಎಲ್ಲಾ ಕಥೆಗಳಲ್ಲಿ ಬರುವ ಒಂದು ಅದ್ಭುತ ಪಾತ್ರ. ಕನ್ನಡದಲ್ಲೂ 20ನೆಯ ಶತಮಾನದಲ್ಲಿ ದ್ವಿತೀಯ ಭಾಗದಲ್ಲಿ ಒಂದಷ್ಟು ಪತ್ತೇದಾರಿ ಕಾದಂಬರಿಗಳು ಬಂದವು. ಪತ್ತೇದಾರ ಮಧುಸೂದನ, ಪತ್ತೇದಾರ ಪುರುಷೋತ್ತಮ ಮೊದಲಾದ ಪಾತ್ರಗಳು ಕನ್ನಡದ ಓದುಗರಿಗೆ ಚಿರಪರಿಚಿತ.

    ಇತ್ತೀಚಿಗೆ ಬಿಡುಗಡೆಯಾದ ಲೇಖಕ ನರೇಂದ್ರ ಎಸ್. ಗಂಗೊಳ್ಳಿಯವರ ‘ನಿಭೃತ’ ಎಂಬ ಪತ್ತೇದಾರಿ ಕಾದಂಬರಿಯಲ್ಲಿ ಪತ್ತೇದಾರನಾಗಿ ಕೆಲಸ ಮಾಡುವವನು ಅಮಿತ್ ಕೋಡಿ ಎಂಬ ಆ ಊರಿನ ಪೋಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ನೇ ಆಗಿರುತ್ತಾನೆ. ಅವನ ಪದನಾಮ ಡಿಟೆಕ್ಟಿವ್‌ ಅಲ್ಲದಿದ್ದರೂ ಇತರ ಎಲ್ಲ ಪತ್ತೇದಾರರಂತೆ ಅವನು ಪ್ರಕರಣಗಳ ವಿಚಾರಣೆ ನಡೆಸಿ ಅಪರಾಧಿಗಳ ಹಿಂದಿನ ನಿಭೃತ (ರಹಸ್ಯ)ಗಳನ್ನು ಬಯಲು ಮಾಡುತ್ತಾನೆ. ಕಾದಂಬರಿಯ ವಸ್ತು ಪೂರ್ತಿಯಾಗಿ ಪ್ರಸ್ತುತ ಕಾಲಕ್ಕೆ ಸಂಬಂಧಿಸಿದ್ದೇ ಅಗಿದೆ. ಮನಸ್ವಿನಿ ಎಂಬ ಮುಗ್ಧ ಹೆಣ್ಣಿನ ಅನಿರೀಕ್ಷಿತ ಸಾವಿನಿಂದ ಆರಂಭವಾಗುವ ಕಾದಂಬರಿಯಲ್ಲಿ ಒಂದರ ಹಿಂದೆ ಇನ್ನೊಂದು ಸಾವುಗಳು – ಕೊಲೆಗಳು ಸಂಭವಿಸುತ್ತ ಒಂದು ಭಯಾನಕ ವಾತಾವರಣವನ್ನು ಸೃಷ್ಟಿಸುತ್ತವೆ.

    ನಮ್ಮ ಕಣ್ಣಿಗೆ ಕಾಣಿಸುವ ಮೊದಲ ಪಾತ್ರ ಮನಸ್ವಿನಿ ಎಂಬ ಸುಂದರ ಕಾಲೇಜು ಯುವತಿ. ತಾನಾಯಿತು ತನ್ನ ಓದಾಯಿತು ಎಂದು ಗಂಭೀರಳಾಗಿದ್ದ ಆಕೆ ಸಮಾಜ ಕಂಟಕ ರೋಹಿತನ ಬಣ್ಣದ ಮಾತಿಗೆ ಮರುಳಾಗಿ ಅವನ ಜತೆಗೆ ಹೋಗುತ್ತಾಳೆ. ಅವನಿಗೆ ತನ್ನನ್ನು ಕೊಟ್ಟುಕೊಂಡ ನಂತರ ಅವನು ವಂಚಕ ಎನ್ನುವುದು ಗೊತ್ತಾಗಿ ಅವಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅದು ಆತ್ಮಹತ್ಯೆಯೇ ಕೊಲೆಯೇ ಎಂಬ ವಿಷಯದ ಕುರಿತು ಅಮಿತ್ ಕೋಡಿ ತನಿಖೆ ನಡೆಸುತ್ತಾನೆ. ಮುಂದೆ ಒಂದಾದ ಮೇಲೊಂದರಂತೆ ಸಾವುಗಳು ಸಂಭವಿಸುತ್ತವೆ. ವಿಚಾರಣೆಯ ಭಾರವೂ ಹೆಚ್ಚಾಗುತ್ತದೆ.

    ತನ್ನ ಮಗ ಸುಮಿತ್ ಆತ್ಮಹತ್ಯೆ ಮಾಡಿಕೊಂಡಾಗ ಅವನ ರಹಸ್ಯವನ್ನು ತಕ್ಷಣವೇ ತಿಳಿದರೂ ಅದು ಸಾರ್ವಜನಿಕರಿಗೆ ಗೊತ್ತಾದರೆ ಎಂಬ ಭಯದಿಂದ ಅವನು ಹೃದಯಾಘಾತದಿಂದ ಸತ್ತನೆಂದು ಹೇಳಿ ಯಾವುದೇ ತನಿಖೆಗೆ ಒಳಪಡಿಸದೆ ಅವನ ಶವವನ್ನು ಸುಟ್ಟ ನಂತರ ಅಪರಾಧಿ ಭಾವವು ಅಮಿತ್ ನ ಮನಸ್ಸನ್ನು ಕ್ಷಣ ಕ್ಷಣವೂ ಚುಚ್ಚುತ್ತಿರಲಾಗಿ ಅಮಿತ್ ಕೊನೆಯಲ್ಲಿ ತನ್ನ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಒಂದು ಶಾಲೆಯಲ್ಲಿ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಬೆಳೆಸುವ ಒಬ್ಬ ಅಧ್ಯಾಪಕನಾಗುವ ನಿರ್ಧಾರ ತೆಗೆದುಕೊಳ್ಳುವುದು ಒಂದು ಅನಿರೀಕ್ಷಿತ ತಿರುವು. ವೃತ್ತಿಯಲ್ಲಿ ಪರಿಣತನಾಗಿದ್ದು ಪ್ರಾಮಾಣಿಕನಾಗಿ ದುಡಿದು ಒಳ್ಳೆಯ ಹೆಸರು ಪಡೆದರೂ ಮಗನನ್ನು ಒಬ್ಬ ಸಭ್ಯ ಪ್ರಜೆಯಾಗಿ ಬೆಳೆಸದಿದ್ದುದು ತನ್ನ ವೈಫಲ್ಯವೂ ಹೌದು ಎಂಬುದನ್ನು ಅವನು ಅರ್ಥಮಾಡಿಕೊಳ್ಳುತ್ತಾನೆ. ಇನ್ನು ಮುಂದೆ ಆ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸುವವರಿಗೆ ಇದು ಒಂದು ಪಾಠ.

    ‘ನಿಭೃತ’ ಕಾದಂಬರಿ ತನ್ನ 103 ಪುಟಗಳ ಉದ್ದಕ್ಕೂ ಕುತೂಹಲ ಮೂಡಿಸಿಕೊಂಡು ಹೋಗುತ್ತದೆ. ಇಲ್ಲಿ ಪತ್ತೇದಾರಿ ಕಥೆ ಮಾತ್ರವಲ್ಲದೆ ಸಮಾಜದಲ್ಲಿ ಕಂಡು ಬರುವ ಇತರ ಹುಳುಕುಗಳ ಬಗೆಗೂ ಓದುಗರ ಗಮನ ಸೆಳೆಯಲಾಗಿದೆ. ತಮ್ಮ ಅಧಿಕಾರ ಪ್ರಭಾವಗಳನ್ನು ಬಳಸಿ ಅಮಲು ಪದಾರ್ಥಗಳ ಅಧೋಲೋಕದತ್ತ ಯುವ ಜನತೆಯನ್ನು ತಳ್ಳುವ ಸ್ವಾರ್ಥಿ ರಾಜಕಾರಣಿಗಳು, ಅಪರಾಧ ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳಿಗೆ ಅವರು ನೀಡುವ ಕುಮ್ಮಕ್ಕು, ಅಪರಾಧ ಜಗತ್ತಿನೊಳಗಿನ ಮನುಷ್ಯರ ಸ್ವಭಾವ-ವರ್ತನೆ-ದುರಾಲೋಚನೆ-ಕುಟಿಲೋಪಾಯಗಳು ಮತ್ತು ಅವೆಲ್ಲವನ್ನೂ ಭೇದಿಸಲು ಪೋಲಿಸ್ ಡಿಪಾರ್ಟ್ ಮೆಂಟಿನವರು ಜಾಣ್ಮೆಯಿಂದ ಮತ್ತು ತಮ್ಮ ಸೂಕ್ಷ್ಮ ಅವಲೋಕನದಿಂದ ತೆಗೆದುಕೊಳ್ಳುವ ಹೆಜ್ಜೆಗಳು-ಇವೆಲ್ಲದರ ಸರಿಯಾದ ಕಲ್ಪನೆ ಲೇಖಕನಿಗೆ ಇರಬೇಕಾಗುತ್ತದೆ.‌ ಅನೇಕ ವಿಷಯಗಳ – ವಿಜ್ಞಾನ, ಆರೋಗ್ಯ ಶಾಸ್ತ್ರ, ಔಷಧ ಶಾಸ್ತ್ರ, ಮನಶ್ಶಾಸ್ತ್ರ, ಅಪರಾಧ ಶಾಸ್ತ್ರ-ಇತ್ಯಾದಿಗಳ ಕುರಿತು ಜ್ಞಾನವಿರಬೇಕಾಗುತ್ತದೆ. ಮಾಹಿತಿ ಸಂಗ್ರಹಣೆ ಮಾಡಬೇಕಾಗುತ್ತದೆ. ಯಾಕೆಂದರೆ ಅಪರಾಧ ಮತ್ತು ಪತ್ತೆಗಳ ವೃತ್ತ ಪೂರ್ಣವಾಗುವುದು ಒಂದು ನಿರ್ದಿಷ್ಟ ಲೆಕ್ಕಾಚಾರದ ಮೇಲೆ. ಅಲ್ಲಿ ಸ್ವಲ್ಪವೂ ಲೋಪವಾಗುವಂತಿಲ್ಲ. ಲೇಖಕ ಗುಣಾಕಾರ-ಭಾಗಾಕಾರ ಹಾಕಿ ಎಲ್ಲವನ್ನೂ ಎಚ್ಚರಿಕೆಯಿಂದ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಈ ಕೆಲಸವನ್ನು ನರೇಂದ್ರ ಗಂಗೊಳ್ಳಿಯವರು ಬಹಳ ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಆರಂಭದಲ್ಲಿ ಅವರು ಸೃಷ್ಟಿಸಿದ ಕನಸಿನ ಭಯಾನಕ ವಾತಾವರಣವು ಮುಂದೆ ನಡೆಯುವ ದುರಂತಕ್ಕೆ ಪೂರ್ವಭಾವಿಯಾಗಿ ಪ್ರವರ್ತಿಸುತ್ತದೆ. ಇದು ಒಂದು ಒಳ್ಳೆಯ ತಂತ್ರವೂ ಹೌದು. ನಿರೂಪಣೆಗೆ ಅವರು ಬಳಸಿದ ಭಾಷೆ ಚೆನ್ನಾಗಿದೆ. ಅಲ್ಲಲ್ಲಿ ಬಳಸಿದ ಹಾವು, ಕಾಗೆ ಕೊನೆಗೆ ಹಂಸಗಳ ಸಂಕೇತಗಳು ಕಥೆಯ ಸಂದರ್ಭಗಳಿಗೆ ಪೂರಕವಾಗಿವೆ. ಒಟ್ಟಿನಲ್ಲಿ ಕನ್ನಡ ಪತ್ತೇದಾರಿ ಸಾಹಿತ್ಯಕ್ಕೆ ಇದು ಒಂದು ಒಳ್ಳೆಯ ಕೊಡುಗೆಯೆಂಬುದರಲ್ಲಿ ಯಾವ ಸಂದೇಹವೂ ಇಲ್ಲ.

    (ಇದು ಕೃತಿಕಾರರು ಹೇಳಿಕೊಂಡಿರುವಂತೆ ಕಿರು ಕಾದಂಬರಿಯಲ್ಲ. ಪೂರ್ಣ ಪ್ರಮಾಣದ ಕಾದಂಬರಿ.‌ ಅದನ್ನು ನಿರ್ಧರಿಸುವುದು ಪುಟಸಂಖ್ಯೆಗಳಲ್ಲ. ಅದಕ್ಕೆ ಬೇರೆಯೇ ಆದ ಮಾನದಂಡಗಳಿವೆ.)

    ಲೇಖಕರು : ನರೇಂದ್ರ ಎಸ್. ಗಂಗೊಳ್ಳಿ

    ಕೃತಿಯ ಹೆಸರು : ನಿಭೃತ (ಪತ್ತೇದಾರಿ ಕಾದಂಬರಿ)
    ಪ್ರಕಾಶಕರು : ಸಂಜೀವ ಪಾರ್ವತಿ ಪ್ರಕಾಶನ ಗಂಗೊಳ್ಳಿ.

    ವಿಮರ್ಶಕರು : ಡಾ. ಪಾರ್ವತಿ ಜಿ. ಐತಾಳ್

    ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.

    ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.

    Share. Facebook Twitter Pinterest LinkedIn Tumblr WhatsApp Email
    Previous Articleಮುಳಿಯ ಜ್ಯುವೆಲ್ಸ್ ಬೆಂಗಳೂರಿನಲ್ಲಿ ಕನ್ನಡ ಕಾರ್ಯಕ್ರಮ
    Next Article ಶ್ರೀ ಬಲಮುರಿ ವಿದ್ಯಾಗಣಪತಿ ದೇವಳದಲ್ಲಿ ಸರಣಿ ತಾಳಮದ್ದಳೆ ಕಾರ್ಯಕ್ರಮ
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ‘ನೀಲು ಮಾತು ಮೀರಿದ ಮಿಂಚು’ ಲಂಕೇಶ್ ಕಾವ್ಯದ ರೂಹುಗಳು

    May 14, 2025

    ಸಂವಾಹಿನಿ ಹಳೆ ವಿದ್ಯಾರ್ಥಿ ಸಂಘದ ಅಡಿಯಲ್ಲಿ ‘ಯಾದೇ’ ಸಂಭ್ರಮಾಚರಣೆ

    May 13, 2025

    ಕೊಡಗು ಪತ್ರಿಕಾ ಭವನದಲ್ಲಿ ದಿ. ಬಿ.ಎಸ್. ಗೋಪಾಲಕೃಷ್ಣರವರ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ ಪ್ರದಾನ | ಮೇ 15

    May 13, 2025

    ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ನಲ್ವತ್ತೈದನೇ ಉಪನ್ಯಾಸ

    May 13, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.